ಬೆಂಗಳೂರು: ಸೋಮವಾರ ನಡೆಯುವ ವಿಶ್ವಾಸ ಮತ ಯುದ್ದದಲ್ಲಿ ಗೆಲುವು ಸಾಧಿಸುತ್ತೇವೆ. ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಬಿಜೆಪಿ ಶಾಸಕರಾದ ಬೆಳ್ಳಿ ಪ್ರಕಾಶ್ ಹಾಗೂ ಸುನೀಲ್ ನಾಯಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಲಹಂಕದ ರಮಡ ಹೋಟೆಲ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸದೆ ಕಾಲಹರಣ ಮಾಡುತ್ತಿದೆ. ಸೋಮವಾರ ವಿಶ್ವಾಸಮತದಲ್ಲಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ. ನಮ್ಮ ಪಕ್ಷ ಸರ್ಕಾರ ರಚನೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರ ತೊರೆದು ಈಗಾಗಲೆ 15 ದಿನ ಆಗುತ್ತಾ ಬಂತು. ಅಲ್ಲಿನ ಸ್ಥಳೀಯ ಲೀಡರ್ಸ್ ಮತ್ತು ನಮ್ಮ ಕಾರ್ಯದರ್ಶಿಗಳ ಮೂಲಕ ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ನಮ್ಮ ಕ್ಷೇತ್ರಗಳಲ್ಲಿ ನಾವಿಲ್ಲ ಅನ್ನೋ ದನ್ನ ಬಿಟ್ಟರೆ ಇನ್ನೆಲ್ಲಾ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.
ಭಟ್ಕಳ ಶಾಸಕ ಸುನಿಲ್ ನಾಯಕ್ ಮಾತನಾಡಿ, ನಾವು ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇವೆ. ಸದನ ಮತ್ತು ಸದನದಲ್ಲಿನ ಕಾನೂನು ಕಟ್ಟಳೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. ಸೋಮವಾರದ ವಿಶ್ವಾಸಮತ ಯುದ್ಧದಲ್ಲಿ ನಮಗೆ ಗೆಲುವು ಸಿಗುತ್ತದೆ. ಈಗಿನ ಸಮ್ಮಿಶ್ರ ಸರ್ಕಾರ ಪತನ ಆಗುತ್ತದೆ. ನಮ್ಮ ನಾಯಕ ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.