ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ನೇಮಕ - Governor of Karnataka
ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಜುಭಾಯ್ ವಾಲಾ ಅವರ ಸೇವಾವಧಿ ಮುಗಿದ ಹಿನ್ನೆಲೆ ಗೆಹ್ಲೋಟ್ ಅವರನ್ನು ನೂತನ ರಾಜ್ಯಪಾಲರಾಗಿ ನೇಮಿಸಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ.

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ರನ್ನು ನೇಮಿಸಲಾಗಿದೆ. ಕೇಂದ್ರ ಸಚಿವ ಹಾಗೂ ರಾಜ್ಯಸಭಾ ನಾಯಕರಾಗಿರುವ ಗೆಹ್ಲೋಟ್ಗೆ ರಾಜ್ಯಪಾಲ ಹುದ್ದೆ ನೀಡಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ವಜುಭಾಯ್ ವಾಲಾ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಸೇವಾವಧಿ ಮುಗಿದ ಹಿನ್ನೆಲೆ ಗೆಹ್ಲೋಟ್ ಅವರನ್ನು ನೂತನ ರಾಜ್ಯಪಾಲರಾಗಿ ಗೆಹ್ಲೋಟ್ ಅವರನ್ನು ನೇಮಿಸಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ, ಪಕ್ಷವಾರು ಪ್ರಾತಿನಿಧ್ಯದ ನೆಲೆಯಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ. ಅದರ ಭಾಗಿವಾಗಿಯೇ ರಾಜ್ಯಪಾಲರ ಹುದ್ದೆಗೆ ನೇಮಕಗಳು ನಡೆದಿವೆ ಎನ್ನಲಾಗುತ್ತಿದೆ.
ಇದೇ ವಾರದಲ್ಲಿ ಕೇಂದ್ರ ಸಚಿವ ಸಂಪುಟ ಪುನರ್ರಚನೆಯಾಗಲಿದ್ದು, ಕೇಂದ್ರ ಸಚಿವರಾಗಿರುವ ಥಾವರ್ ಚಂದ್ ಅವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ. ಮಧ್ಯಪ್ರದೇಶದ ಹಿರಿಯ ರಾಜಕಾರಣಿ, 73 ವರ್ಷ ವಯಸ್ಸಿನ ಥಾವರ್ ಚಂದ್ ಗೆಹ್ಲೋಟ್, ಈ ಹಿಂದೆ ಮೂರು ಬಾರಿ ಮಧ್ಯಪ್ರದೇಶದ ಶಾಜಾಪುರ ಮೀಸಲು ಕ್ಷೇತ್ರದ ಶಾಸಕರಾಗಿದ್ದರು. ನಾಲ್ಕು ಬಾರಿ ಲೋಕಸಭಾ ಸಂಸದರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ರಾಜ್ಯಸಭಾ ಸಂಸದರಾಗಿದ್ದು, ಕರ್ನಾಟಕಕ್ಕೆ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಉಸ್ತುವಾರಿಯಾಗಿದ್ದ ರಾಜ್ಯಕ್ಕೆ ರಾಜ್ಯಪಾಲರಾದ ಗೆಹ್ಲೋಟ್
ಬಿಜೆಪಿ ಸಂಘಟನೆಯಲ್ಲಿ ಮತ್ತು ಸರ್ಕಾರದಲ್ಲಿ ಹಲವು ಜವಾಬ್ದಾರಿ ಮತ್ತು ಹುದ್ದೆಗಳನ್ನು ನಿರ್ವಹಿಸಿರುವ ಗೆಹ್ಲೋಟ್, 2013 ರಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. ರಾಜ್ಯದ ಉಸ್ತುವಾರಿಯಾಗಿ ಕೆಲಸ ಮಾಡಿದ್ದ ರಾಜ್ಯಕ್ಕೆ ಇದೀಗ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಕರ್ನಾಟಕ ಮಾತ್ರವಲ್ಲದೆ 7 ರಾಜ್ಯಗಳಿಗೆ ಗವರ್ನರ್ಗಳ ನೇಮಕ
ಗೋವಾ | ಶ್ರೀಧರನ್ ಪಿಳ್ಳೈ |
ತ್ರಿಪುರ | ಸತ್ಯದೇವ್ ನಾರಾಯಣ್ ಆರ್ಯ |
ಜಾರ್ಖಂಡ್ | ರಮೇಶ್ ಬೈಸ್ |
ಹರಿಯಾಣ | ವಿ.ಶ್ರೀ ಬಂಡಾರು ದತ್ತಾತ್ರೇಯ |
ಮಿಜೋರಾಂ | ಡಾ.ಹರಿ ಬಾಬು ಕಂಭಂಪತಿ |
ಮಧ್ಯಪ್ರದೇಶ | ಮಂಗುಭಾಯ್ ಛಗ್ಗನ್ಭಾಯ್ ಪಟೇಲ್ |
ಹಿಮಾಚಲ ಪ್ರದೇಶ | ರಾಜೇಂದ್ರ ವಿಶ್ವನಾಥ್ ಅರ್ಲೆಕರ್ |
ಮೇಲಿನ ನೇಮಕಾತಿಗಳು ಆಯಾ ಕಚೇರಿಗಳ ಉಸ್ತುವಾರಿ ವಹಿಸಿಕೊಳ್ಳುವ ದಿನಾಂಕಗಳಿಂದ ಜಾರಿಗೆ ಬರುತ್ತವೆ.