ದಿಯೋಘರ್ (ಜಾರ್ಖಂಡ್) : ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಎರಡು ದಿನಗಳ ಜಾರ್ಖಂಡ್ ಪ್ರವಾಸ ಕೈಗೊಂಡಿದ್ದರು. ಇಲ್ಲಿನ ವಿವಿಧ ದೇವಾಲಯಗಳಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ. ದಿಯೋಗಢದ ಬಾಬಾ ದೇವಾಲಯದಲ್ಲಿ ವೈದ್ಯನಾಥನಿಗೆ ಪೂಜೆ ಸಲ್ಲಿಸಿದರು. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ವೈದ್ಯನಾಥ ಸನ್ನಿಧಿಯೂ ಒಂದಾಗಿದೆ. ವೈದ್ಯನಾಥನಿಗೆ ಜಲಾಭಿಷೇಕ ಮತ್ತು ಮುಂತಾದ ಸೇವೆಗಳನ್ನು ಸಲ್ಲಿಸಿದ ಬಳಿಕ ಅವರು, ದುಮ್ಕಾದ ವಾಸುಕಿನಾಥ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ದೇವಸ್ಥಾನಗಳ ಭೇಟಿಯ ಬಳಿಕ ಮಂಗಳವಾರ ದಿಯೋಗಢದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶ ಸುಭಿಕ್ಷವಾಗಿರಲು ಪ್ರಾರ್ಥನೆ ಸಲ್ಲಿಸಿದ್ದೇನೆ. ಎಲ್ಲರೂ ಸುಖವಾಗಿರಬೇಕು ಎಂದು ಅವರು ಕೋರಿದರು.
ರಾಜಕೀಯ ವಿಚಾರವಾಗಿ ಕೇಳಿದ ಪ್ರಶ್ನೆಗೆ, ದೇಶದಲ್ಲಿ ಕಾಂಗ್ರೆಸ್ ಸ್ವತಂತ್ರ ಸರ್ಕಾರ ರಚಿಸುವ ಸ್ಥಿತಿಯಲ್ಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸಂಖ್ಯಾ ಬಲವನ್ನು ಹೆಚ್ಚಿಸಿಕೊಂಡರೂ, ಸರ್ಕಾರ ರಚನೆ ಮಾಡುವ ಹತ್ತಿರಕ್ಕೂ ಸುಳಿಯಲು ಸಾಧ್ಯವಾಗಲಿಲ್ಲ ಎಂದರು.
ಮೋದಿ ದೇಶದ ಬಲಿಷ್ಠ ನಾಯಕ: ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಮುಂದೆ ಕಾಂಗ್ರೆಸ್ ನಾಯಕರಿಗೆ ಅಸ್ತಿತ್ವವೇ ಇಲ್ಲ. ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ವಿವಿಧ ಜಾತಿಗಳ ಜನರು ವಾಸಿಸುತ್ತಿದ್ದಾರೆ. ಎಲ್ಲಾ ವರ್ಗದವರು ಪ್ರಧಾನಿ ಮೋದಿ ಅವರನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ, ಪ್ರಧಾನಿ ಮೋದಿ ಅವರು ದೇಶದ ಬಲಿಷ್ಠ ನಾಯಕ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಬಣ್ಣಿಸಿದರು.
ವಿಪಕ್ಷಗಳ ಇಂಡಿಯಾ ಕೂಟದಲ್ಲಿ 40 ವಿವಿಧ ಪಕ್ಷಗಳು ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದವು. ಆದರೆ ಸರ್ಕಾರ ರಚಿಸುವಲ್ಲಿ ವಿಫಲವಾಗಿವೆ. ಇದರರ್ಥ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಸರಿಯಾದ ನಿರ್ಧಾರವನ್ನು ತೆಗೆದುಕೊಂಡು ಎನ್ಡಿಎ ಕೂಟಕ್ಕೆ ಬೆಂಬಲ ನೀಡಿದರು. ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಯೋಧರನ್ನು ಉಡಾಯಿಸಲು ನಕ್ಸಲರು ನೆಲದಡಿ ಹೂತಿಟ್ಟಿದ್ದ 10 ಕೆಜಿ ಐಇಡಿ ಸ್ಫೋಟಕ ಪತ್ತೆ, ನಿಷ್ಕ್ರಿಯ