ಬೆಂಗಳೂರು: ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ತಿಂಗಳ ಮಗುವಿನಿಂದ ಹಿಡಿದು ವೃದ್ಧರವರೆಗೂ ಕಾಡುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇದನ್ನ ತಡೆಗಟ್ಟಲು ಆರೋಗ್ಯ ಇಲಾಖೆ ಮುಂದಾಗಿದೆ.
![children suffering from corona over state](https://etvbharatimages.akamaized.net/etvbharat/prod-images/kn-bng-4-childrends-attack-corona-special-script-7201801_14042020195625_1404f_1586874385_586.jpg)
ವಿಜಯಪುರದಲ್ಲಿ ಹೆಚ್ಚು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ಮಹಾರಾಷ್ಟ್ರದಿಂದ ಬಂದವರಿಂದ ಸೋಂಕು ಹರಡಿರುವ ಸಾಧ್ಯತೆ ಇದೆ. ಹೀಗಾಗಿ, ಮಕ್ಕಳಿಗೆ ಬರದಂತೆ ಯಾವ ರೀತಿ ತಡೆಯಬೇಕು ಅನ್ನೋದರ ಬಗ್ಗೆ ವೈದ್ಯರ ಜೊತೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಾಹಿತಿ ನೀಡಿದರು.
ರಾಜ್ಯದಲ್ಲಿ ಕೊರೊನಾ ಸೋಂಕಿಗೆ 18 ಮಕ್ಕಳು ತುತ್ತಾಗಿದ್ದಾರೆ. ತಿಂಗಳ ಹಸುಗೂಸಿನಿಂದ ಹಿಡಿದು 15 ವರ್ಷದ ಮಕ್ಕಳು ಕೂಡ ನರಳಾಟ ಅನುಭವಿಸುತ್ತಿದ್ದಾರೆ. O-15 ವರ್ಷದೊಳಗಿನ ಒಟ್ಟು 18 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಇನ್ನು 16-25 ವಯಸ್ಸಿನವರಲ್ಲಿ ಒಟ್ಟು 38 ಮಂದಿ ಕೊರೊನಾ ಸೋಂಕು ತಗುಲಿಸಿಕೊಂಡಿದ್ದಾರೆ. ಮಕ್ಕಳಲ್ಲಿ ಮೊದಲು ಸೋಂಕು ಪತ್ತೆಯಾಗಿದ್ದು, ಕೇಸ್ ನಂ 49, 50ರಲ್ಲಿ. ಇವರ ತಂದೆ ( P-17) ಮಾರ್ಚ್19 ರಂದು ನೆದರ್ಲೆಂಡ್ನಿಂದ ಬೆಂಗಳೂರಿಗೆ ಬಂದಿದ್ದರು. ಇವರಿಗೂ ಸೋಂಕು ತಗುಲಿದ್ದು, ಇವರಿಂದ 3 ಮತ್ತು 7 ವರ್ಷದ ಮಕ್ಕಳಿಗೂ ಸೋಂಕು ತಗುಲಿದೆ.
ದಕ್ಷಿಣ ಕನ್ನಡದ 10 ತಿಂಗಳ ಗಂಡು ಮಗುವಿಗೆ ಸೋಂಕು ದೃಢವಾಗಿತ್ತು. ಈವರೆಗೂ ಮಗುವಿಗೆ ಹೇಗೆ ಸೋಂಕು ತಗುಲಿದೆ ಎಂಬ ಮಾಹಿತಿಯಿಲ್ಲ. ಆದರೆ, ಸೊಂಕಿನಿಂದ ಗುಣಮುಖವಾಗಿದೆ.
ಇದೇ ರೀತಿ P-227,228,229,230 ಇವರಿಗೆ ಹೇಗೆ ಸೋಂಕು ತಗುಲಿದೆ ಎಂಬ ಮಾಹಿತಿಯೇ ಇಲ್ಲ. ಹೀಗಾಗಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.
18 ಮಕ್ಕಳಲ್ಲಿ ಈವರೆಗೆ ಒಂದೇ ಮಗು ಗುಣಮುಖವಾಗಿದೆ.
ಮನೆಯಲ್ಲಿ ಮಕ್ಕಳ ಸುರಕ್ಷತೆ ಹೀಗಿರಲಿ:
* ಮಕ್ಕಳು ಮನೆಯಿಂದ ಆಚೆ ಹೋಗದಂತೆ ಎಚ್ಚರವಹಿಸಿ
* ಮಕ್ಕಳಿಗೆ ರೋಗದ ಲಕ್ಷಣಗಳಾದ ಜ್ವರ ,ಕೆಮ್ಮು, ಉಸಿರಾಟದ ತೊಂದರೆ ಕುರಿತು ಗಮನವಿರಲಿ
*ಮನೆಯಲ್ಲಿ ಇರುವುದು ಅನಿವಾರ್ಯ.
* ಮಕ್ಕಳೊಂದಿಗೆ ಆಟದಲ್ಲಿ ತೊಡಗಿಸಿಕೊಳ್ಳಿ, ಹೊರಗೆ ಕಳಿಸಬೇಡಿ
* ಮಕ್ಕಳಿಗೆ ಅರ್ಥವಾಗುವ ಹಾಗೆ ಕೊರೊನಾ ಕುರಿತು ತಿಳಿವಳಿಕೆ ನೀಡಿ
*ಮಕ್ಕಳೊಂದಿಗೆ ಇರಿ, ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ
* ಸ್ವಚ್ಛತೆ ಕಾಯ್ದುಕೊಳ್ಳುವ ಕುರಿತು ತಿಳಿವಳಿಕೆ ನೀಡಿ
*ನಿಯಮಿತವಾಗಿ ಕೈಗಳನ್ನು ತೊಳೆದುಕೊಳ್ಳುವುದು
*ಸಾಕಷ್ಟು ದ್ರವ ಪದಾರ್ಥಗಳ ಸೇವನೆ
*ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ ಬಳಸುವುದು