ಬೆಂಗಳೂರು: ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ 6ನೇ ಸಭೆಯಲ್ಲಿ ಚರ್ಚಿಸಿದಂತೆ ಪ್ರವರ್ತನ ಸಿಬ್ಬಂದಿ ಜತೆ ಗೃಹರಕ್ಷಕ ದಳದ ಸಿಬ್ಬಂದಿಯನ್ನೊಳಗೊಂಡ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ಪೂರ್ವ-ಪಶ್ಚಿಮ, ದಕ್ಷಿಣ-ಉತ್ತರ, ಕೇಂದ್ರ ಭಾಗದಲ್ಲಿ ಹಾಗೂ ಯಲಹಂಕ, ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್ ಪುರ, ಜ್ಞಾನ ಭಾರತಿ ಈ ಕಚೇರಿಯಲ್ಲಿ ಪ್ರವರ್ತನಾ ಸಿಬ್ಬಂದಿಯನ್ನು ನೇಮಿಸಲಾಗಿದೆ.
ಈ ತನಿಖಾ ತಂಡಗಳಿಗೆ ಹೆಲ್ಮೆಟ್ ಧರಿಸದೆ ಸಂಚರಿಸುವ ದ್ವಿಚಕ್ರ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟುಮಾಡುವ ವಾಹನಗಳ ತಪಾಸಣೆ, ಕರ್ಕಶ ಶಬ್ದ ಉಂಟು ಮಾಡುವ ಹಾರ್ನ್ಗಳನ್ನು ಸ್ಥಳದಲ್ಲಿಯೇ ತೆರವುಗೊಳಿಸಿ ವಾಹನಗಳ ವಿರುದ್ಧ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳುವುದು. ಅನಧಿಕೃತವಾಗಿ ಸಂಚರಿಸುವ ಮ್ಯಾಕ್ಸಿ ಕ್ಯಾಬ್ಗಳು, ಮಜಲು ವಾಹನಗಳು, ಒಪ್ಪಂದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲು ತಿಳಿಸಲಾಗಿದೆ. ಆಟೋ ಪರೀಕ್ಷಾ ಮತ್ತು ವಾಹನಗಳ ಮೇಲೆ ಅನಧಿಕೃತವಾಗಿ ಜಾಹೀರಾತು ಪ್ರದರ್ಶಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವುದು. ಅಧಿಕ ಭಾರ ಕೊಂಡೊಯ್ಯುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಇಷ್ಟೆ ಅಲ್ಲದೆ ತೆರಿಗೆ ಕಟ್ಟದೆ ಅರ್ಹತಾ ಪತ್ರ ನವೀಕರಿಸದಿರುವುದು, ಡ್ರೈವಿಂಗ್ ಲೈಸನ್ಸ್ ಇಲ್ಲದೇ ಇರುವುದು, ಅಧಿಕ ಪ್ರಯಾಣ ದರ ವಸೂಲಿ ಸುತ್ತಿರುವುದು ಸೇರಿದಂತೆ ಕಾನೂನು ಬಾಹಿರವಾಗಿ ಸಂಚರಿಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.