ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ನ ಶಾಸಕರಿಗೆ ಹೆಚ್ಚುವರಿಯಾಗಿ ನೀಡಿದ್ದ ಸುಮಾರು 10 ಸಾವಿರ ಕೋಟಿ ರೂ.ಗಳಷ್ಟು ಅನುದಾನವನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.
ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ, ಅದರಲ್ಲೂ ಕೆಲವು ಕ್ಷೇತ್ರಗಳ ಮೇಲೆ ತೋರಿದ್ದ ವಿಶೇಷ ಪ್ರೀತಿಗೆ ಕತ್ತರಿ ಹಾಕಲು ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಈಗಾಗಲೇ ಉನ್ನತಮಟ್ಟದ ಸಭೆ ನಡೆಸಿರುವ ಸಿಎಂ ಯಡಿಯೂರಪ್ಪ, ಅಭಿವೃದ್ಧಿ ಕಾರ್ಯಗಳಿಗೆ ಹಣ ಬೇಕಿದೆ ಎಂಬ ಅಂಶವನ್ನು ಮುಂದಿಟ್ಟು, ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಯಾವ್ಯಾವ ಶಾಸಕರ ಕ್ಷೇತ್ರಗಳಿಗೆ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂಬ ವಿವರವನ್ನು ತರಿಸಿಕೊಂಡಿದ್ದಾರೆ. ಹೀಗೆ ಅನುದಾನ ಮಂಜೂರಾದ ಕ್ಷೇತ್ರಗಳ ಪೈಕಿ ಯಾವ ಶಾಸಕರ ಕ್ಷೇತ್ರಗಳಿಗೆ ಎಷ್ಟು ಅನುದಾನ ಮಂಜೂರಾಗಿದೆ ಎಂಬ ಅಂಶವನ್ನು ವಿಶೇಷವಾಗಿ ಗಮನಿಸುತ್ತಿರುವ ಸಿಎಂ ಯಡಿಯೂರಪ್ಪ, ಮೊದಲು ಈ ರೀತಿ ಹೆಚ್ಚುವರಿ ಅನುದಾನ ಪಡೆದ ಕ್ಷೇತ್ರಗಳಿಗೆ ಹಣ ಕಡಿತ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ಕೆಲ ಶಾಸಕರ ಕ್ಷೇತ್ರಗಳಿಗೆ ಹಲವು ಕ್ಷೇತ್ರಗಳಿಗಿಂತ ಮೂರು, ನಾಲ್ಕು ಪಟ್ಟು ಹೆಚ್ಚುವರಿ ಅನುದಾನ ನೀಡಲಾಗಿದ್ದು, ಈ ಹೆಚ್ಚುವರಿ ಅನುದಾನದ ಬಾಬ್ತನ್ನು ಕಟ್ ಮಾಡಲು ನಿರ್ಧರಿಸಲಾಗಿದೆ. ಹೀಗೆ ಯಾವ್ಯಾವ ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನ ನೀಡಲಾಗಿದೆ? ಮತ್ತು ಅದನ್ನು ಹೇಗೆ ಕಡಿತ ಮಾಡಬೇಕು? ಎಂಬ ಕುರಿತು ಅವರು ಲೆಕ್ಕ ಹಾಕುತ್ತಿರುವುದರಿಂದ ಉಭಯ ಪಕ್ಷಗಳ ಕೆಲವು ಶಾಸಕರು ಬಿಜೆಪಿಯೆಡೆ ದೌಡಾಯಿಸಲು ಯೋಚನೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಹೆಚ್ಚುವರಿ ಅನುದಾನ ಸಿಕ್ಕಿರುವುದರಿಂದ ಅಗತ್ಯ ಕೆಲಸ ಮಾಡಿಸಬಹುದು. ಆ ಮೂಲಕ ಕ್ಷೇತ್ರದಲ್ಲಿ ಕೆಲಸಗಳಾಗಿವೆ ಎಂದು ಜನರಿಗೆ ತೋರಿಸಬಹುದು. ಪರಿಣಾಮಕಾರಿಯಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ತಮಗೆ ಅನುಕೂಲ ಮಾಡಿಕೊಡಲಿದೆ ಎಂಬುದು ಆ ಶಾಸಕರ ಯೋಚನೆಯಾಗಿತ್ತು. ಆದರೆ ಹೀಗೆ ಲಭ್ಯವಾದ ಹೆಚ್ಚುವರಿ ಅನುದಾನ ಕಟ್ ಆಗುವುದಷ್ಟೇ ಅಲ್ಲದೆ, ಉಳಿದ ಅನುದಾನದ ಹಣದಲ್ಲೂ ಕಡಿತವಾದರೆ ಮುಂದಿನ ದಿನಗಳು ಕಷ್ಟವಾಗುತ್ತವೆ ಎಂಬ ಲೆಕ್ಕಾಚಾರಕ್ಕೆ ಬಂದಿರುವ ಉಭಯ ಪಕ್ಷಗಳ ಶಾಸಕರು, ಸಿಎಂ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.