ಬೆಂಗಳೂರು : ಗ್ರಾಮಗಳ ಕಸುಬುದಾರರನ್ನು ಆರು ತಿಂಗಳಿಂದ ಲಾಕ್ಡೌನ್ ಪೀಡಿಸಿದೆ. ಕಳೆದ ಆರು ತಿಂಗಳಿಂದ ಸಂಬಳ, ಕೆಲಸವಿಲ್ಲದೇ ಗ್ರಾಮೋದ್ಯೋಗವನ್ನೇ ನೆಚ್ಚಿದ್ದ ಜನ ಬೀದಿಗೆ ಬಿದ್ದಿದ್ದಾರೆ. ಇಂದಿನಿಂದ ಗ್ರಾಮೋದ್ಯೋಗ ಉಳಿಸಿ ಎಂಬ ಚಳವಳಿ ಅವಿರತವಾಗಿ ಆರಂಭವಾಗಲಿದೆ ಎಂದು ಗ್ರಾಮ ಸೇವಾ ಸಂಘದ ರುವಾರಿ ಪ್ರಸನ್ನ ಹೆಗ್ಗೋಡು ಅವರು ಈಟಿವಿ ಭಾರತ್ಗೆ ತಿಳಿಸಿದ್ದಾರೆ.
151 ನೇ ಗಾಂಧೀ ಜಯಂತಿ ಹಿನ್ನೆಲೆ, ಮಾತನಾಡಿರುವ ಪ್ರಸನ್ನ ಕುಮಾರ್, ಗಾಂಧೀಜಿಯವರ ಹಲವು ಮುಖ, ಆಯಾಮಗಳಲ್ಲಿ ಗ್ರಾಮೋದ್ಯೋಗವೂ ಒಂದು. ಪ್ರತೀ ವಸ್ತು ಅಥವಾ ಬಟ್ಟೆ ಕೊಳ್ಳುವವರು ಯಾಕೆ, ಏನು, ಹೇಗೆ ಕೊಳ್ಳುತ್ತಿದ್ದಾರೆ ಎಂಬ ಅರಿವಿನಿಂದ ಕೊಳ್ಳಬೇಕು. ಗ್ರಾಮೋದ್ಯೋಗದ ವಸ್ತುಗಳನ್ನು ಖರೀದಿಸುವುದರಿಂದ ಬಡವರಿಗೆ ಎರಡು ಹೊತ್ತಿನ ಊಟ ಸಿಗಲಿದೆ. ಹೀಗಾಗಿ ಗ್ರಾಮೋದ್ಯೋಗದ ಜನರು ಪ್ರತೀ ಗ್ರಾಮ ಪಂಚಾಯಿತಿಗಳ ಮುಂದೆ ನಾಳೆಯಿದ ಅಹಿಂಸಾತ್ಮಕ ಸತ್ಯಾಗ್ರಹ ಆರಂಭಿಸಲಿದ್ದಾರೆ ಎಂದರು.
ಎಲ್ಲಾ ರಾಜಕಾರಣಿಗಳಿಗೂ ಖಾದಿ, ದೇಸಿ, ಕೈಮಗ್ಗ, ಕರಕುಶಲ ವಸ್ತುಗಳ ಮೇಲೆ ಅನುಕಂಪ ಇದೆ. ಆದರೆ, ಅವರು ಕೊಡುವ ಅನುದಾನ ಹಳ್ಳಿಗಳಿಗೆ ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಖಾದಿ, ದೇಸಿ ಬಟ್ಟೆಯೂ ಈಗ ಫ್ಯಾಷನ್ ಆಗಿದೆ. ಈಗಾಗಲೇ ಫ್ಯಾಷನ್ ಡಿಸೈನರ್ಸ್, ಚಿತ್ರ ಕಲಾವಿದರು ಇದನ್ನು ಪ್ರೋತ್ಸಾಹಿಸುತ್ತಿದ್ದಾರೆ. ಹೀಗಾಗಿ ಸಾಮಾನ್ಯ ಜನರೂ ತಮ್ಮ ಸ್ವಾತಂತ್ರ್ಯ ಹರಣ ಆಗುವ ಮೊದಲು ಗ್ರಾಮೋದ್ಯೋಗವನ್ನು ಬೆಂಬಲಿಸಿ ಎಂದರು.