ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಭೆಗೆ ಪ್ರಮುಖ ಸಚಿವರೇ ಗೈರಾಗಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲು ಗೈರಾಗಿದ್ದು, ಕೊರೊನಾ ನಿಯಂತ್ರಣ ವಿಚಾರದಲ್ಲಿ ಸಚಿವರ ನಡುವೆ ಸಾಮ್ಯತೆ ಇಲ್ಲವಾಗಿದೆ ಎಂಬ ಅನುಮಾನಕ್ಕೆ ಪುಷ್ಟಿ ನೀಡಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಸಿಎಂ ನಡೆದ ತುರ್ತು ಸಭೆ ಸಂಬಂಧಪಟ್ಟ ಸಚಿವರಿಲ್ಲದೆ ನಡೆಯುವಂತಾಗಿದೆ. ಪೂರ್ವ ನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮೊಳಕಾಲ್ಮೂರಿಗೆ ತೆರಳಿದ್ದರೆ, ತುರ್ತು ಕಾರ್ಯದ ನಿಮಿತ್ತ ಸಿಎಂ ಸಭೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹಾಜರಾಗಿಲ್ಲ.
ಕೋವಿಡ್-19 ತುರ್ತು ಸಭೆಗೆ ಸಚಿವರಾದ ಡಾ. ಸುಧಾಕರ್, ಶ್ರೀರಾಮುಲು ಗೈರು.. ಸಭೆಗೆ ಹಾಜರಾಗುವಂತೆ ಸಿಎಂ ಕಚೇರಿಯಿಂದ ಮಾಹಿತಿ ನೀಡಿದ್ದರೂ ಶ್ರೀರಾಮುಲು ಮೊಳಕಾಲ್ಮೂರಿಗೆ ತೆರಳಿದ್ದಾರೆ. ಸಿಎಂಗೆ ತಮ್ಮ-ತಮ್ಮ ಇಲಾಖಾ ವ್ಯಾಪ್ತಿಯ ಕೆಲಸಕಾರ್ಯಗಳು, ಜವಾಬ್ದಾರಿಗಳ ನಿರ್ವಹಣೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಬಗ್ಗೆ ಅಭಿವೃದ್ಧಿ ನೀಡಿ ಸಮಾಲೋಚನೆ ನಡೆಸಬೇಕಾದವರೇ ಸಭೆಗೆ ಗೈರಾಗಿದ್ದು ಎದ್ದು ಕಂಡಿತು. ಇಬ್ಬರು ಪ್ರಮುಖ ಸಚಿವರು ಮಹತ್ವದ ಸಭೆಗೆ ಗೈರಾಗುವ ಮೂಲಕ ಮತ್ತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆ ಮೂಡಿತು.
ಸಂಬಂಧಪಟ್ಟ ಸಚಿವರು ಇಲ್ಲದಿದ್ದರೂ ಧೃತಿಗೆಡದೆ ಸಿಎಂ ಬಿ.ಎಸ್. ಯಡಿಯೂರಪ್ಪ ಕೊರೊನಾ ನಿಯಂತ್ರಣ ಸಂಬಂಧ ಸಭೆ ನಡೆಸಿದರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಸಮಗ್ರವಾದ ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆ ನೀಡುವ ಕೆಲಸ ಮಾಡಿದರು. ಸಚಿವರ ನಡುವಿನ ಅಸಮಾಧಾನ ಮುಂದುವರೆದಿದ್ದೇ ಆದರೆ, ಸಿಎಂ ಯಾವ ರೀತಿ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.