ಬೆಂಗಳೂರು: ಬಿಡಿಎ ಅಪಾರ್ಟ್ಮೆಂಟ್ ನಿರ್ಮಾಣದ 666 ಕೋಟಿ ರೂ. ಮೊತ್ತದ ಕಾಮಗಾರಿಯಲ್ಲಿ ಸಿಎಂ ಕುಟುಂಬದಿಂದ ಭ್ರಷ್ಟಾಚಾರ ಆಗಿದೆ ಎಂಬ ಆರೋಪದ ವಿಚಾರ ಕಲಾಪದಲ್ಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಯಿತು.
ನಿಯಮ 59 ರ ಅಡಿ ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತಿಗೆ ಆಡಳಿತ ಪಕ್ಷದ ಸದಸ್ಯರು ವಿರೋಧಿಸಿದರು. ಸಾರ್ವಜನಿಕ ಹಿತಾಸಕ್ತಿ ವಿಚಾರ ಪ್ರಸ್ತಾಪಿಸಬಹುದು. ಆದರೆ ಆರೋಪಕ್ಕೆ ಈ ನಿಯಮ ಬಳಕೆ ಸರಿಯಲ್ಲ ಎಂದು ಆರೋಪಿಸಿದರು.
ಬಿಜೆಪಿ ಕಡೆಯಿಂದ ಹಿರಿಯ ಸದಸ್ಯ ಆಯನೂರು ಮಂಜುನಾಥ್ ವಿವರ ನೀಡಿದರೆ ಪ್ರತಿಪಕ್ಷ ಕಡೆಯಿಂದ ಬಿ.ಕೆ. ಹರಿಪ್ರಸಾದ್ ವಾದ ಮಂಡಿಸಿದರು. ಸಾಕಷ್ಟು ವಾದ ವಿವಾದಗಳು ಚರ್ಚೆಯ ಬಗೆಗೆ ನಡೆಯಿತು.
ನಿಯಮ ಪ್ರಕಾರ ಶೂನ್ಯ ವೇಳೆಯಲ್ಲಿ ಇಲ್ಲವೇ ಪ್ರಶ್ನೋತ್ತರ ಅವಧಿ ಮುಗಿದ ನಂತರ ಚರ್ಚೆಗೆ ತೆಗೆದುಕೊಳ್ಳಿ ಎಂದು ಆಯನೂರು ಹೇಳಿದಾಗ, ಪ್ರಶ್ನೋತ್ತರ ಅವಧಿಯನ್ನು ಟೇಬಲ್ ಮಾಡಲು ಸ್ಪೀಕರ್ ಆದೇಶ ಹೊರಡಿಸಿದ್ದಾರೆ. ಅವರ ಮಾತಿನ ಉಲ್ಲಂಘನೆ ಆಗಿದೆ ಪ್ರತಿಪಕ್ಷ ನಾಯಕರು ಆರೋಪಿಸಿದರು. ಅಂತಿಮವಾಗಿ ಸಭಾಪತಿ ಗಳ ನಿರ್ಣಯಕ್ಕೆ ವಿಷಯ ಬಿಡಲಾಯಿತು.
ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಮತ್ತಿತರ ಸದಸ್ಯರು ಸಾಕಷ್ಟು ವಿವರಣೆ ನೀಡಿ ವಿಚಾರ ಚರ್ಚೆಗೆ ಅವಕಾಶ ಇದೆ. ಸಭಾಪತಿಗಳ ತೀರ್ಮಾನ ಈ ಸದನಕ್ಕೆ ಸರ್ವಸ್ವ. ಸಭಾಪತಿ ರೂಲಿಂಗ್ ಉಲ್ಲಂಘನೆ ಮಾಡುವಂತಿಲ್ಲ. ದಯವಿಟ್ಟು ಚರ್ಚೆಗೆ ಅವಕಾಶ ಮಾಡಲು ರೂಲಿಂಗ್ ಕೊಡಿ ಎಂದು ಪಟ್ಟು ಹಿಡಿದರು.
ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ನಿನ್ನೆ ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಪ್ರಸ್ತಾಪಿಸಿದ ವಿಚಾರದ ಚರ್ಚೆ ಆಗಿದೆ. ಭ್ರಷ್ಟಾಚಾರದ ವಿಚಾರದಲ್ಲಿ ಯಾವ ಪಕ್ಷ, ವ್ಯಕ್ತಿ ಮೇಲೆ ಆರೋಪ ಇದ್ದರೆ ಅದರ ಚರ್ಚೆ ಆಗಲಿ. ಒಂದು ಪಕ್ಷಕ್ಕೆ ಒಂದು, ಇನ್ನೊಂದು ಪಕ್ಷಕ್ಕೆ ಇನ್ನೊಂದು ನ್ಯಾಯ ಬೇಡ. ಚರ್ಚೆಗೆ ಅವಕಾಶ ನೀಡಿ ಎಂದರು. ಈ ವೇಳೆ ಮತ್ತೊಮ್ಮೆ ಉಭಯ ಪಕ್ಷಗಳ ಸದಸ್ಯರ ನಡುವೆ ಸಾಕಷ್ಟು ವಾಗ್ವಾದ ಶುರುವಾಯಿತು.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಪ್ರಶ್ನೋತ್ತರ ಅವಧಿ ಇಲ್ಲ, ಶೂನ್ಯ ವೇಳೆಯನ್ನು ಅನುಕೂಲದ ದೃಷ್ಟಿಯಿಂದ ಕೊನೆಯಲ್ಲಿಡಲಾಗಿದೆ. ಹಲವು ವಿಧೇಯಕ ಪಾಸ್ ಮಾಡಲು ಕಡೆಯ ಕ್ಷಣದಲ್ಲಿ ಅವಕಾಶ ಕೋರಿದ್ದೀರಿ ಕೊಡಲಾಗಿದೆ. ತೊಂದರೆ ಆಗದಿರಲೆಂದು ಅವಕಾಶ ನೀಡಲಾಗಿದೆ. ಈಗ ಇಷ್ಟು ಚಿಕ್ಕ ವಿಷಯಕ್ಕೆ ದಾಖಲೆ, ಮಾಹಿತಿ ಪುಸ್ತಕ ಹಿಡಿದು ಬರುವ ಅಗತ್ಯವಿದೆಯೇ ಎಂದು ಕೇಳಿ, ಎಸ್.ಆರ್. ಪಾಟೀಲ್ ಚರ್ಚೆ ಮುಂದುವರಿಸಲು ಅವಕಾಶ ನೀಡಿದರು.
ವಿವರಣೆ ನೀಡಿದ ಪಾಟೀಲರು :
ಅಪಾರ್ಟ್ಮೆಂಟ್ ಅವ್ಯವಹಾರದ ವಿವರ ನೀಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಬಹುದೊಡ್ಡ ಅವ್ಯವಹಾರ ಇದಾಗಿದೆ. ಸಿಎಂ, ಗೃಹ ಇಲಾಖೆ ಕಚೇರಿ ಇದರಲ್ಲಿ ಭಾಗಿಯಾಗಿದೆ. ವಾಟ್ಸ್ಆ್ಯಪ್ ಕರೆಯ ಮಾಹಿತಿ ನಮ್ಮ ಬಳಿ ಇದೆ. ದೂರವಾಣಿ ಆಡಿಯೋ, ಆರ್ ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡಿದ್ದರ ವಿವರ ನಮ್ಮ ಬಳಿ ಇದೆ. ಭ್ರಷ್ಟಾಚಾರದ ಹಿಂದೆ ಸರ್ಕಾರದ ವ್ಯಕ್ತಿಯೊಬ್ಬರ ಬೆಂಬಲ ಇದೆ. ಪ್ರಧಾನಿ ನಾ ಖಾವುಂಗಾ, ನಾ ಖಾನೆ ದೂಂಗಾ ಅನ್ನುವ ಮಾತನಾಡಿದ್ದಾರೆ. ಅವರ ಮಾತಿನ ಬಗ್ಗೆ ಗೌರವವಿದೆ. ರಾಜ್ಯದಲ್ಲಿ ಈಗ ಹಣ ತಿಂದವರ ವಿರುದ್ಧ ಕ್ರಮ ಕೈಗೊಳ್ಳಬೇಕು. 12 ಕೋಟಿ ರೂ. ಮೊತ್ತವನ್ನು ಬಿಡಿಎ ಹಣ ಯಾರದ್ದೋ ಹೆಸರು ಹೇಳಿ ಬಿಡಿಎ ಆಯುಕ್ತರು ತೆಗೆದುಕೊಂಡಿದ್ದಾರೆ. ಭ್ರಷ್ಟಾಚಾರ ವಿರೋಧಿ ಕೇಸು ದಾಖಲಿಸಿ ಎಫ್ಐಆರ್ ದಾಖಲಿಸುವ ಬದಲು ವರ್ಗಾವಣೆ ಮಾತನಾಡಲಾಗುತ್ತಿದೆ. ಗುತ್ತಿಗೆದಾರ ಹಣ ನೀಡಿರುವ ಹಿನ್ನೆಲೆ ಅವರ ವಿರುದ್ಧವೂ ಎಫ್ಐಆರ್ ದಾಖಲಿಸಬೇಕು. ಗುತ್ತಿಗೆ ರದ್ದು ಮಾಡಲು ಎದುರಾಗಿರುವ ತಡೆ ಏನು ಎಂದು ಕೇಳಿದರು.
ಚರ್ಚೆಗೆ ಪ್ರತಿರೋಧ ಒಡ್ಡಿದ ಬಿಜೆಪಿ ಸದಸ್ಯರು:
ಸದನದಲ್ಲಿ ಆಡಳಿತ-ಪ್ರತಿಪಕ್ಷ ಸದಸ್ಯರ ಜೊತೆ ವಾಗ್ವಾದ ನಡೆಯಿತು. ಅಂತಿಮವಾಗಿ ಪಾಟೀಲರು ಮಾತು ಮುಂದುವರಿಸಿ ಈ ಭ್ರಷ್ಟಾಚಾರ ದೊಡ್ಡದಾಗಿದೆ. ಕುಟುಂಬ ಸದಸ್ಯರನ್ನು ರಾಜಕೀಯದಲ್ಲಿ ಭಾಗಿಯಾಗಲು ಅವಕಾಶ ಆಗಬಾರದು. ಸಮಾಜದ ಹಿತದೃಷ್ಟಿಯಿಂದ ಈ ಪ್ರಕರಣದ ತನಿಖೆ ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ಇಲ್ಲವೇ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು ಎಂದರು.
ಈ ವಿಚಾರದಲ್ಲಿ ಅನಗತ್ಯ ತನಿಖೆ ಬೇಡ, ನಿಲುವಳಿ ಸೂಚನೆ ರದ್ದು ಪಡಿಸಬೇಕೆಂದು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು. ಸಭಾಪತಿಗಳು ವಿಷಯವನ್ನು ನಿಯಮ 338 ರ ಅಡಿ ಚರ್ಚಿಸಲು ಅವಕಾಶ ಮಾಡಿಕೊಟ್ಟರು. ನಾಳೆ ವಿಧಾನ ಪರಿಷತ್ ನಲ್ಲಿ ಈ ಬಗ್ಗೆ ಸದಸ್ಯರು ಚರ್ಚಿಸಲಿದ್ದಾರೆ.
ವಿಧೇಯಕ ಅನುಷ್ಠಾನ ಕಲಾಪ ಊಟದ ವಿರಾಮದ ನಂತರ ಸಮಾವೇಶಗೊಳ್ಳುತ್ತಿದ್ದಂತೆ ಗಣಿ ಸಚಿವ ಸಿ.ಸಿ ಪಾಟೀಲ್ ಸದನದಲ್ಲಿ ಜಲ್ಲಿ ಕ್ರಶರ್ ಮತ್ತು ಕಲ್ಲುಪುಡಿ ನಿಯಂತ್ರಣ ತಿದ್ದುಪಡಿ ವಿಧೇಯಕ ಮಂಡಿಸಿದರು. ಇದಕ್ಕೆ ಸದನದಲ್ಲಿ ಒಮ್ಮತದ ಬೆಂಬಲ ವ್ಯಕ್ತವಾಯಿತು. ಗಣಿಗಾರಿಕೆಯಿಂದ ಸಮಾಜಕ್ಕೆ ಒಳಿತಾಗಬೇಕು. ಭ್ರಷ್ಟಾಚಾರ ನಿಲ್ಲಬೇಕು. ಒಟ್ಟಾರೆ ತಿದ್ದುಪಡಿಗಳಿಂದ ಅನಾನುಕೂಲ ಆಗದಂತೆ ನೋಡಿಕೊಳ್ಳಿ ಎಂದು ಸದಸ್ಯರು ಸಲಹೆ ಇತ್ತರು.
ಕಲಾಪ ನಾಳೆಗೆ ಮುಂದೂಡಿಕೆ:
ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ನಿಧನ ಹಿನ್ನೆಲೆಯಲ್ಲಿ ವಿಧಾನಪರಿಷತ್ ಕಲಾಪ ಚರ್ಚೆಯನ್ನು ನಿಲ್ಲಿಸಿ ನಾಳೆ ಬೆಳಗ್ಗೆ 10 ಗಂಟೆಗೆ ಮುಂದೂಡಲಾಯಿತು.