ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿಕೂಟಗಳ ಮಧ್ಯೆ ನೇರ ಹಣಾಹಣಿ ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ.
ಬಿಜೆಪಿ ಮಿತ್ರಕೂಟ ಹಾಗೂ ಕಾಂಗ್ರೆಸ್ ಮಿತ್ರಕೂಟಗಳು ಮುಂದಿನ ಸಮರಕ್ಕೆ ಸಜ್ಜಾಗುತ್ತಿದ್ದು, ಇದಕ್ಕೆ ಪೂರಕವಾದ ಘಟನೆಗಳು ಜರುಗುತ್ತಿವೆ. ಕಳೆದ ಕೆಲ ದಶಕಗಳಿಂದ ಮೂರು ಪ್ರಮುಖ ರಾಜಕೀಯ ಶಕ್ತಿಗಳು ಕರ್ನಾಟಕದ ಚುನಾವಣಾ ಅಖಾಡದಲ್ಲಿ ಪರಸ್ಪರ ಹೋರಾಟ ನಡೆಸುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್, ಜನತಾದಳ ಹಾಗೂ ಬಿಜೆಪಿ ನಡುವೆ ನೇರ ಕದನಗಳು ನಡೆಯುತ್ತಿವೆ.
ಆದರೆ 1999 ರಲ್ಲಿ ಜನತಾದಳ ಇಬ್ಬಾಗವಾಗಿ ಜಾತ್ಯತೀತ ಜನತಾದಳ ಮತ್ತು ಸಂಯುಕ್ತ ಜನತಾದಳ ರಚನೆಯಾದ ನಂತರ, ಒಂದು ಬಣ ಬಿಜೆಪಿಯ ಜತೆ ಕೈ ಜೋಡಿಸಿತು. ಅಂದು ಬಿಜೆಪಿಯ ಜತೆ ಕೈ ಜೋಡಿಸಿದ ಸಂಯುಕ್ತ ಜನತಾದಳದ ಬಹುತೇಕ ನಾಯಕರು ಬಿಜೆಪಿಯಲ್ಲೇ ಅಸ್ತಿತ್ವ ಕಂಡುಕೊಂಡರು. ಕಾಲಕ್ರಮೇಣ ಜೆಡಿಎಸ್ ಒಡೆದು ಒಂದು ಬಣ ಸಿದ್ದರಾಮಯ್ಯ ಅವರ ಜತೆ ಕಾಂಗ್ರೆಸ್ನಲ್ಲಿ ನೆಲೆ ಕಂಡುಕೊಂಡಿತು. ಇದರ ಪರಿಣಾಮವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರಬಲ ಹಣಾಹಣಿ ಆರಂಭವಾದರೂ, ಹಲವು ಬಾರಿ ಜೆಡಿಎಸ್ ಬೆಂಬಲದೊಂದಿಗೆ ಸರ್ಕಾರ ರಚಿಸುವ ಅನಿವಾರ್ಯತೆಗೆ ಒಳಗಾದವು.
ಇದೇ ಕಾರಣಕ್ಕಾಗಿ ಜೆಡಿಎಸ್ ಪಕ್ಷವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರಮುಖ ನಾಯಕರು ಯತ್ನಿಸತೊಡಗಿದರು. ಈ ಅಪಾಯವನ್ನು ಗ್ರಹಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇದೀಗ ಬಿಜೆಪಿಯ ಜತೆ ಕೈಗೂಡಿಸಲು ಸಜ್ಜಾಗಿದ್ದು, ಬಿಜೆಪಿಯನ್ನು ವಿರೋಧಿಸುವ ಕೆಲ ಜೆಡಿಎಸ್ ಶಾಸಕರು ಕಾಂಗ್ರೆಸ್ ಕಡೆ ಹೋಗಲು ತಯಾರಿ ಆರಂಭಿಸಿದ್ದಾರೆ.
ಓದಿ: ರಾಜ್ಯಾದ್ಯಂತ ಇಂದಿನಿಂದ ನೈಟ್ ಕರ್ಫ್ಯೂ: ಜನರು ಹೇಳುವುದೇನು?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಜೆಡಿಎಸ್ನ ಕೆಲ ಶಾಸಕರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳುವ ತಯಾರಿಯಲ್ಲಿದ್ದು, ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಧ್ರುವೀಕರಣ ಆರಂಭವಾಗಿದೆ ಎಂಬುದರ ಸ್ಪಷ್ಟ ಸಂಕೇತವಾಗಿದೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವರ್ಸಸ್ ಬಿಜೆಪಿ ಮಿತ್ರಕೂಟಗಳು ನೇರ ಹಣಾಹಣಿ ನಡೆಸಲಿದ್ದು, ಈ ಬೆಳವಣಿಗೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.