ಬೆಂಗಳೂರು: ಮುಂಬೈನಿಂದ ಉದ್ಯಾನ್ ಎಕ್ಸ್ಪ್ರೆಸ್ ರೈಲಿನಲ್ಲಿ ಬಂದವರು ಎಡವಟ್ಟು ಮಾಡಿಕೊಂಡು ಪೊಲೀಸರ ಕಣ್ತಪ್ಪಿಸಿ ಕ್ವಾರಂಟೈನ್ಗೆ ಒಳಗಾಗದೇ ಎಸ್ಕೇಪ್ ಆಗಿದ್ದರು. ಹೀಗಾಗಿ ಸದ್ಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಚಲನವಲನಗಳ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.
ಉದ್ಯಾನ್ ಎಕ್ಸ್ಪ್ರೆಸ್ನಲ್ಲಿ ಮಹಾರಾಷ್ಟ್ರದ 40 ಸೋಂಕಿತ ಪ್ರದೇಶದಿಂದ ಹಲವರು ಬಂದಿದ್ದರು. ಹೀಗಾಗಿ ಬಂದ 667 ಜನರನ್ನ ಕ್ವಾರಂಟೈನ್ ಮಾಡಲು ಅಧಿಕಾರಿಗಳು ಮುಂದಾಗಿದ್ರು. ಆದ್ರೆ ಕೆಲವರು ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದರು.
ಎಸ್ಕೇಪ್ ಆದವರ ದೃಶ್ಯ ರೈಲ್ವೆ ನಿಲ್ದಾಣದ ಬಳಿ ಇರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ಪೊಲೀಸರು ಮಹಾರಾಷ್ಟ್ರದ ಯಾವ ಪ್ರದೇಶದಿಂದ ಬಂದವರು ಅನ್ನೊದರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮತ್ತೊಂದೆಡೆ ಎಸ್ಕೇಪ್ ಆದವರ ಮೇಲೆ ರೈಲ್ವೆ ಠಾಣೆಯಲ್ಲಿ ಎನ್ಡಿಎಂಎ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ )ಪ್ರಕರಣ ಕೂಡ ದಾಖಲಾಗಿದೆ.
ರೈಲಿನಲ್ಲಿ ಬಂದ 270ಕ್ಕೂ ಹೆಚ್ಚು ಜನರ ಗಂಟಲು ದ್ರವ ಮಾದರಿಯ ಸಂಗ್ರಹ ಮಾಡಲಾಗಿತ್ತು. ಸದ್ಯ ಇವರನ್ನು ನಗರದ ಚೇತನ್ ಇಂಟರ್ನ್ಯಾಷನಲ್ ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಅಲ್ಲಿ ತೀವ್ರ ಕಟ್ಟೆಚರ ವಹಿಸಲಾಗಿದೆ.