ಬೆಂಗಳೂರು: ಪೋಷಕರ ಜೊತೆ ಪಬ್ಗೆ ಹೋದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಕಾಮುಕನನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಮಧುಸೂದನ್ ಚೆಲ್ಲಾರಾಮ್ ಬಂಧಿತ ಆರೋಪಿ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಚರ್ಚ್ ಸ್ಟ್ರೀಟ್ ರೋಡ್ನಲ್ಲಿರುವ ಮೀರಾಜ್ ಬಾರ್ ಅಂಡ್ ರೆಸ್ಟೊರೆಂಟ್ನಲ್ಲಿ ಘಟನೆ ನಡೆದಿತ್ತು. ಶರತ್ ರೈ ಎಂಬುವರಿಗೆ ಸೇರಿದ ಪಬ್ನಲ್ಲಿ ಇದೇ ತಿಂಗಳ 21ರ ರಾತ್ರಿ 9.30ಕ್ಕೆ ತಾಯಿ ಹಾಗೂ ಸ್ನೇಹಿತರ ಜೊತೆ ಯುವತಿಯು ಪಬ್ಗೆ ಹೋಗಿದ್ದಳು. ಈ ವೇಳೆ ಮಧುಸೂದನ್ ಸ್ನೇಹಿತೆಯ ಕಡೆಯಿಂದ ಯುವತಿಯನ್ನ ಪರಿಚಯ ಮಾಡಿಕೊಂಡಿದ್ದ.
ಪಬ್ನಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಯುವತಿ ಬಳಿ ಬಂದಿದ್ದ ಮಧುಸೂದನ್ ಏಕಾಏಕಿ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಯುವತಿಯ ಭುಜ ಕಚ್ಚಿ ವಿಕೃತಿ ಮೆರೆದಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ.
ಇದನ್ನೂ ಓದಿ: ತಡರಾತ್ರಿ ಕಿಡಿಗೇಡಿಗಳ ದಾಂಧಲೆ: 20 ಕಾರಿನ ಗಾಜು ಪೀಸ್ ಪೀಸ್
ಈ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೊಂದ ಯುವತಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.