ಬೆಂಗಳೂರು: ರಾಜ್ಯದಲ್ಲಿ 7 ಲಕ್ಷ ಕುಟುಂಬಗಳು ನಿವೇಶನ ರಹಿತವಾಗಿದ್ದು, ಇವರಿಗೆ ಹಂಚಿಕೆ ಮಾಡಲು 35.5 ಸಾವಿರ ಎಕರೆ ಜಮೀನು ಅವಶ್ಯಕತೆ ಇದೆ. ಆದರೆ, ಸರ್ಕಾರದ ಬಳಿ ಲಭ್ಯವಿರುವುದು ಕೇವಲ 2.7 ಸಾವಿರ ಎಕರೆ ಮಾತ್ರ. ಇನ್ನು 32.8 ಸಾವಿರ ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ರಾಜ್ಯವನ್ನು ಸೂರು ರಹಿತ ಮಾಡುವ ಯೋಜನೆಗೆ ಗ್ರಹಣ ಬಡಿದಿದೆ.
ರಾಜ್ಯದಲ್ಲಿ ಹತ್ತು ಹಲವು ವಸತಿ ಯೋಜನೆಗಳು ಜಾರಿಯಲ್ಲಿದ್ದರೂ ಸ್ವಂತ ಸೂರು ಹೊಂದಿಲ್ಲದ ಕುಟುಂಬಗಳ ಸಂಖ್ಯೆ 7 ಲಕ್ಷ ದಾಟಿದೆ. ಇದಕ್ಕೆ ಮುಖ್ಯ ಕಾರಣ ಈ ಎಲ್ಲ ಕುಟುಂಬಗಳು ಸ್ವಂತ ನಿವೇಶನ ಹೊಂದದೆ ಇರುವುದು. 2018 ರ ಸಮೀಕ್ಷೆಯನ್ವಯ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 710684 ನಿವೇಶನರಹಿತ ಕುಟುಂಬಗಳು ಕಂಡುಬಂದಿವೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು 35534 ಎಕರೆ ಜಮೀನಿನ ಅವಶ್ಯಕತೆ ಇದೆ, ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 2711.50 ಎಕರೆ ಜಮೀನು ಮಾತ್ರ ಲಭ್ಯವಿದೆ.
![ವಸತಿ ಯೋಜನೆ](https://etvbharatimages.akamaized.net/etvbharat/prod-images/kn-bng-01-landless-families-in-state-special-story-7208080_31012023143000_3101f_1675155600_391.jpg)
ಈ ಜಮೀನಿನಲ್ಲಿ 54230 ನಿವೇಶನಗಳನ್ನು ರಚಿಸಬಹುದಾಗಿದ್ದು, ಉಳಿದ ನಿವೇಶನರಹಿತರಿಗೆ ಹಂಚಿಕೆ ಮಾಡಲು ಇನ್ನು 32822.50 ಎಕರೆ ಜಮೀನಿನ ಅವಶ್ಯಕತೆ ಇದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜಮೀನು ಒದಗಿಸಿಕೊಂಡು ನಿವೇಶನ ರಹಿತ ಕುಟುಂಬಗಳಿಗೆ ಹಂಚಿಕೆ ಮಾಡುವ ಬಹುದೊಡ್ಡ ಜವಾಬ್ದಾರಿ ಸರ್ಕಾರದ ಮೇಲಿದ್ದು, ಇಷ್ಟು ಜಮೀನು ಒದಗಿಸುವುದು ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಿದೆ.
ಅರ್ಹ ವಸತಿ ರಹಿತ ಕುಟುಂಬಗಳು ವಸತಿ ಸೌಕರ್ಯ ಪಡೆಯಲು ಸ್ವಂತ ನಿವೇಶನ ಹೊಂದಿರುವುದು ಕಡ್ಡಾಯವಾಗಿದೆ. ಆದರೆ, 7ಲಕ್ಷ ಕುಟುಂಬಗಳು ನಿವೇಶನ ಹೊಂದಿರದ ಕಾರಣದಿಂದಾಗಿಯೇ ವಸತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಕುಟುಂಬಗಳಿಗೆ ನಿವೇಶನ ಸೌಕರ್ಯ ಒದಗಿಸಲು ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಗ್ರಾಮೀಣ ಮತ್ತು ನಗರ ನಿವೇಶನ ಯೋಜನೆಗಳನ್ನು ಜಾರಿಗೊಳಿಸಿದೆ. ಆ ಮೂಲಕ ನಿವೇಶನರಹಿತ ಕುಟುಂಬಗಳಿಗೆ ನಿವೇಶನ ಒದಗಿಸುವ ಪ್ರಯತ್ನ ನಡೆಸಲಾಗುತ್ತಿದೆ.
ನಿವೇಶನ ಹಂಚಿಕೆ ಮಾಡಲು ಸರ್ಕಾರಿ ಜಮೀನಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಒಂದು ವೇಳೆ, ಸರ್ಕಾರ ಜಮೀನು ಲಭ್ಯವಿಲ್ಲದ ಕಡೆಗಳಲ್ಲಿ ಮಾತ್ರ ವಸತಿಗೆ ಸೂಕ್ತ ಖಾಸಗಿ ಜಮೀನನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಜಮೀನು ಖರೀದಿ ಸಮಿತಿ ಮೂಲಕ ಖರೀದಿಸಲು ಸರ್ಕಾರ ಸೂಚನೆ ನೀಡಿದೆ. ಈ ಯೋಜನೆಯಡಿ ಜಮೀನು ಖರೀದಿಗೆ ಸರ್ಕಾರವೇ ದರ ನಿಗದಿಪಡಿಸಿದ್ದು, ಈ ದರದಂತೆಯೇ ಜಿಲ್ಲಾ ಸಮಿತಿ ಜಮೀನು ಖರೀದಿ ಮಾಡಬೇಕಾಗಿದೆ.
ಜಮೀನು ಖರೀದಿಗೆ ದರ ನಿಗದಿ: ಗ್ರಾಮೀಣ ಪ್ರದೇಶದಲ್ಲಿ 9 ಲಕ್ಷ ರೂ. ಪ್ರತಿ ಎಕರೆಗೆ ನಿಗದಿಪಡಿಸಲಾಗಿದ್ದು, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 12 ಲಕ್ಷ ರೂ. ಪುರಸಭೆ ವ್ಯಾಪ್ತಿಯಲ್ಲಿ 15 ಲಕ್ಷ ರೂ. ನಗರಸಭೆ ವ್ಯಾಪ್ತಿಯಲ್ಲಿ 22.50 ಲಕ್ಷ ರೂ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 37.50 ಲಕ್ಷ ರೂ. ಬಿಬಿಎಂಪಿ ವ್ಯಾಪ್ತಿಯಲ್ಲಿ 75 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ.
![ವಸತಿ ಯೋಜನೆ](https://etvbharatimages.akamaized.net/etvbharat/prod-images/kn-bng-01-landless-families-in-state-special-story-7208080_31012023143000_3101f_1675155600_1106.jpg)
ಈ ಕುರಿತು ಮಾಹಿತಿ ನೀಡಿರುವ ವಸತಿ ಸಚಿವ ವಿ.ಸೋಮಣ್ಣ, ನಿವೇಶನ ರಹಿತರ ಕುಟುಂಬಕ್ಕೆ ನಿವೇಶನ ಒದಗಿಸಲು ಭೂಮಿ ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿಯೂ ಜಿಲ್ಲಾಧಿಕಾರಿಗಳಿಂದ ಮಂಜೂರಾದ ಸರ್ಕಾರಿ ಅಥವಾ ಖರೀದಿಸಿದ ಖಾಸಗಿ ಜಮೀನನ್ನು ಬಳಸಿಕೊಂಡು ಭೂಪರಿವರ್ತನೆ ಮಾಡಿ ಬಡಾವಣೆಗಳನ್ನು ನಿರ್ಮಿಸಿ ಅರ್ಹ ಕುಟುಂಬಗಳಿಗೆ ಹಂತ ಹಂತವಾಗಿ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸರ್ಕಾರದಿಂದ ನಿವೇಶನ ಪಡೆದ ಫಲಾನುಭವಿಗಳನ್ನು ಆಧ್ಯತೆ ಮೇಲೆ ಪರಿಗಣಿಸಿ ಬಸವ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆ ಅಡಿ ಸರ್ಕಾರ ಪ್ರತಿ ವರ್ಷ ಆಯವ್ಯಯದಲ್ಲಿ ನಿಗದಿಪಡಿಸಿರುವ ಅನುದಾನಕ್ಕೆ ಅನುಗುಣವಾಗಿ ವಿವಿಧ ವಸತಿ ಯೋಜನೆಗಳಡಿ ನಿಗದಿಪಡಿಸುವ ಗ್ರಾಮ ಪಂಚಾಯತಿವಾರು ಗುರಿಗೆ ಎದುರಾಗಿ ಗ್ರಾಮಸಭೆಗಳಲ್ಲಿ ಅರ್ಹ ವಸತಿ ರಹಿತರನ್ನು ನಿಯಮಾನುಸಾರ ಆಯ್ಕೆ ಮಾಡಿ ವಸತಿ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.
ರಾಜ್ಯದಲ್ಲಿ ವಸತಿ ಯೋಜನೆಗಳು ನಿರೀಕ್ಷಿತ ಗುರಿಯತ್ತ ಸಾಗುತ್ತಿದ್ದರೂ ನಿವೇಶನಗಳ ಹಂಚಿಕೆ ಯೋಜನೆ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಸೂರು ರಹಿತ ರಾಜ್ಯ ನಿರ್ಮಾಣದ ಕನಸು ಕನಸಾಗಿಯೇ ಉಳಿಯುವಂತಾಗಿದೆ.ಸಿಲಿಕಾನ್ ಸಿಟಿಯಲ್ಲಿನ ಸೂರು ರಹಿತರ ಸಮಸ್ಯೆ ಪರಿಹಾರಕ್ಕೆ ಯಲಹಂಕ ತಾಲ್ಲೂಕಿನ ಅಗ್ರಹಾರ ಪಾಳ್ಯದಲ್ಲಿ ವಸತಿ ಇಲಾಖೆಯ ವತಿಯಿಂದ ಮುಖ್ಯಮಂತ್ರಿ 1ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ ವಸತಿ ಸಮುಚ್ಛಯಗಳ ಲೋಕಾರ್ಪಣೆ ಮತ್ತು ಮನೆಗಳ ಹಸ್ತಾಂತರ ಕಾರ್ಯಕ್ರಮವನ್ನು ಇಂದು ನಡೆಸಲಾಗಿದೆಯಾದರೂ ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲಿನ ವಸತಿರಹಿತರಿಗೆ ಸೂರು ಕಲ್ಪಿಸುವುದು ಬಹುದೊಡ್ಡ ಸವಾಲಿನ ಕೆಲಸವಾಗಿದೆ. ಸರ್ಕಾರಗಳು ಬದಲಾದರೂ ಸೂರು ರಹಿತರ ಬದುಕು ಮಾತ್ರ ಬದಲಾಗಿಲ್ಲ, ಸ್ವಂತ ಮನೆಯ ಕನಸಿನಲ್ಲಿರುವ ಕುಟುಂಬಗಳು ಕನಸಿನಲ್ಲಿಯೇ ಬದುಕು ನೂಕುತ್ತಿದ್ದಾರೆ.
ಇನ್ನಾದರೂ ಸರ್ಕಾರ ವಸತಿರಹಿತ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡುವ ಯೋಜನೆಗೆ ವೇಗ ನೀಡಿ ಆದಷ್ಟು ಬೇಗ ಭೂಮಿ ಸ್ವಾಧೀನಪಡಿಸಿಕೊಂಡು ಅರ್ಹರಿಗೆ ನಿವೇಶನ ಹಂಚಿಕೆ ಮಾಡಿ ಸ್ವಂತ ಸೂರಿನ ಕನಸನ್ನು ನನಸಾಗಿಸುವತ್ತ ಗಮನ ಹರಿಸಬೇಕಿದೆ, ರಾಜ್ಯವನ್ನು ಸೂರು ರಹಿತ ಕುಟುಂಬ ಮುಕ್ತವಾಗಿಸುವ ಗುರಿ ತಲುಪಬೇಕಿದೆ.
ಇದನ್ನೂ ಓದಿ: 'ಜೀವಂತ ಇದ್ದಾಗಲೇ ಬಿಜೆಪಿಗೆ ಸೇರಿಸೋಲ್ಲ': ಸತ್ರೂ ಬಿಜೆಪಿ ಸೇರಲ್ಲ ಎಂದ ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು