ಬೆಂಗಳೂರು: ಕರ್ನಾಟಕ ವಿಧಾನಸಭೆ ಉಪ ಚುನಾವಣೆ 2019ರ ಮತ ಎಣಿಕೆ ಪ್ರಕ್ರಿಯೆ ಡಿ.9ರಂದು ನಡೆಯಲಿದ್ದು, ಅಂದು ಬೆಂಗಳೂರಿನ 5 ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಐಪಿಸಿ 144 ಸೆಕ್ಷನ್ ಜಾರಿ ಮಾಡಿ ನಗರ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.
ಮತ ಎಣಿಕೆ ದಿನಂದಂದು ಕಿಡಿಗೇಡಿಗಳಿಂದ ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ಪರ,ವಿರುದ್ಧ ಪ್ರತಿಭಟನೆ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟುಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಬೆಂಗಳೂರು ನಗರ ಪೊಲೀಸ್ ಕಮೀಷನರೆಟ್ ವ್ಯಾಪ್ತಿಯ 5 ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ 200 ಕಿ.ಮೀ. ವ್ಯಾಪ್ತಿಯಲ್ಲಿ ಬೆಳ್ಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ. ಶಿವಾಜಿನಗರದ ಮೌಂಟ್ ಕಾರ್ಮೆಲ್ ಮಹಿಳಾ ಪಿ.ಯು ಕಾಲೇಜು, ಕೆ.ಆರ್. ಪುರಂ ಹಾಗೂ ಮಹಾಲಕ್ಷ್ಮಿ ಲೇಔಟ್ನ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಯಶವಂತಪುರದ ಆರ್.ವಿ.ಕಾಲೇಜ್ ಆಫ್ ಇಂಜಿನಿಯರಿಂಗ್, ಹೊಸಕೋಟೆಯ ಆಕಾಶ್ ಇಂಟರ್ ನ್ಯಾಷನಲ್ ದೇವನಹಳ್ಳಿ ಸುತ್ತಮುತ್ತ ನಿಷೇಧ ಹೇರಲಾಗಿದೆ.

ಹೀಗಾಗಿ ಮತ ಎಣಿಕೆ ನಡೆಯುವ ಸ್ಥಳಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಕಾನೂನು ಬಾಹಿರವಾಗಿ ಗುಂಪು ಗುಂಪಾಗಿ ನಿಲ್ಲುವುದನ್ನು ಹಾಗೂ ಓಡಾಡುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಯಾವುದೇ ಸಂಘಟನೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಪಂಗಡಗಳು ಪ್ರತಿಕೃತಿ ದಹನ, ಮೆರವಣಿಗೆ, ಬಹಿರಂಗ ಘೋಷಣೆ ಕೂಗುವುದು, ಹಾಡುವುದು, ಸಂಗೀತ ನುಡಿಸುವುದು, ಭಿತ್ತಿ ಪತ್ರ, ಶಸ್ತ್ರ, ಕುಡುಗೋಲು, ಖಡ್ಗ, ಚೂರಿ, ಬಂದೂಕು ಹೊಂದಿರುವುವು, ಪ್ರಚೋದನಕಾರಿ ಭಾಷಣ, ಬ್ಯಾನರ್ ಫ್ಲೆಕ್ಸ್ ಅಳವಡಿಕೆ ಮಾಡುವುದನ್ನ ನಿಷೇಧ ಮಾಡಲಾಗಿದೆ ಎಂದು ನಗರ ಆಯುಕ್ತ ಆದೇಶ ಹೊರಡಿಸಿದ್ದಾರೆ.