ಬೆಂಗಳೂರು: ವಿಧಾನಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿಗಳಾದ ಎಸ್. ಟಿ. ಸೋಮಶೇಖರ್ ಹಾಗೂ ಬೈರತಿ ಬಸವರಾಜ್ ಮತ್ತು ಅನರ್ಹ ಶಾಸಕ ಮುನಿರತ್ನ ಇಂದು ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದರು.
ಮಠಕ್ಕೆ ಭೇಟಿ ಕೊಟ್ಟು ಶ್ರೀ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದು ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್, ನಾನು ಮತ್ತು ಬೈರತಿ ಬಸವರಾಜ್ ಜೊತೆಗೆ ಮುನಿರತ್ನ ಅವರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇವೆ. ಸೋಮವಾರ ನಾವಿಬ್ಬರೂ ನಾಮಪತ್ರ ಸಲ್ಲಿಕೆ ಮಾಡಲಿದ್ದೇವೆ. ಮುನಿರತ್ನ ಅವರು ಬೆಂಬಲ ನೀಡುತ್ತಿದ್ದಾರೆ. ಶ್ರೀಗಳು ಸೋಮವಾರ ಪತ್ರ ಸಲ್ಲಿಸಿದರೆ ಒಳ್ಳೆಯದು ಎಂದು ಹೇಳಿ ಅಭಯ ನೀಡಿದ್ದಾರೆ ಎಂದರು.
ಜಗ್ಗೇಶ್ ಸಹಕಾರ ನೀಡುತ್ತಿಲ್ಲ ಎನ್ನುವ ಮಾತು ತಪ್ಪು. ನಿನ್ನೆ ಕೂಡ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದಾರೆ. ಯಾವ ಕಾರಣಕ್ಕೂ ಅವರಿಗೆ ಬೇಜಾರಾಗಿಲ್ಲ. ನಾನೇ ಅವರಿಗೆ ಕ್ಷೇತ್ರದ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದ್ದೇನೆ. ಅವರು ಚಿತ್ರದ ಶೂಟಿಂಗ್ ಕೂಡಾ ಬಿಟ್ಟು, ನನ್ನ ಸಹಕಾರಕ್ಕೆ ನಿಲ್ಲುವ ಭರವಸೆ ನೀಡಿದ್ದಾರೆ ಎಂದರು.