ಬೆಂಗಳೂರು: ನಾನು ಈ ಉಪಚುನಾವಣೆಗೆ ಸ್ಪರ್ಧಿಸಿದ ದಿನದಿಂದಲೂ ಅಡಿಗಡಿಗೂ ನನ್ನ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಕಡೆಯವರು ತೊಂದರೆ ನೀಡುತ್ತಿದ್ದಾರೆ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಅಭ್ಯರ್ಥಿ ಕುಸುಮಾ ಹೆಚ್ ಬೇಸರ ವ್ಯಕ್ತಪಡಿಸಿದ್ದಾರೆ.
ಗುರುವಾರ ಕ್ಷೇತ್ರದ ವಿವಿಧ ಕಡೆಗಳಲ್ಲಿ ಪ್ರಚಾರ ಸಭೆ ನಡೆಸಿದ ಸಂದರ್ಭದಲ್ಲಿ ಹಾಗೂ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಕುಸುಮಾ, ಜಾತಿ ಕಾರ್ಡ್ ಆಯ್ತು. ಈಗ ತಾಯಿ ಕಾರ್ಡ್ ಬಳಸುತ್ತಿದ್ದಾರೆ. ಆ ದಿನ ನಮ್ಮ ನಾಯಕರಾದ ಸಿದ್ದರಾಮಯ್ಯನವರು ನನ್ನ ಜತೆ ಪ್ರಚಾರ ಮಾಡುವ ಸಂದರ್ಭದಲ್ಲಿ, ಪ್ರತಿಸ್ಪರ್ಧಿ ಪಕ್ಷದ ಅಭ್ಯರ್ಥಿಯಾಗಿರುವ ಅಣ್ಣನವರು ಹಿಂದೆ ಕಾಂಗ್ರೆಸ್ನಲ್ಲಿದ್ದಾಗ, ಕಾಂಗ್ರೆಸ್ ಪಕ್ಷವೇ ತಮ್ಮ ತಾಯಿ, ಉಸಿರು, ತಮ್ಮ ರಕ್ತ ಎಂದಿದ್ದರಂತೆ. ಆದರೆ ಇವತ್ತು ಅದೇ ವ್ಯಕ್ತಿ ತಾಯಿ ಸಮಾನ ಎಂದ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದರು. ಆದರೆ ನಮ್ಮ ಪ್ರತಿಸ್ಪರ್ಧಿ ಅಣ್ಣನವರು ಇದನ್ನು ಯಾಕೆ ತಪ್ಪಾಗಿ ಬಿಂಬಿಸುತ್ತಿದ್ದಾರೋ ಗೊತ್ತಿಲ್ಲ. ಅವರ ತಾಯಿ ಬೇರೆಯಲ್ಲ, ನಮ್ಮ ತಾಯಿ ಬೇರೆಯಲ್ಲ. ಎಲ್ಲರ ತಾಯಿಯೂ ಒಂದೇ. ನಾವು ಅವರನ್ನು ಗೌರವಿಸುತ್ತೇವೆ. ಆದರೂ ಈ ವಿಷಯ ತಿರುಚುತ್ತಿರುವುದು ಆಶ್ಚರ್ಯ ತಂದಿದೆ. ನಾನು ಚುನಾವಣೆಗೆ ಸ್ಪರ್ಧಿಸಿದ ಮೊದಲ ದಿನದಿಂದ ನನ್ನನ್ನು ಗುರಿಯಾಗಿಸಿ ಮಾನಸಿಕವಾಗಿ ದಾಳಿ ಮಾಡುತ್ತಿದ್ದಾರೆ. ನಾಮಪತ್ರ ಸಲ್ಲಿಸುವ ಮುನ್ನ ನನ್ನ ಪತಿ ಡಿ.ಕೆ ರವಿ ಅವರ ಹೆಸರು ಬಳಸುವಂತಿಲ್ಲ, ಅವರ ಹೆಸರು ಬಳಸುವ ಯೋಗ್ಯತೆ ಇಲ್ಲ ಎಂದು ನನ್ನ ವೈಯಕ್ತಿಕ ಜೀವನ, ನನ್ನ ಹಕ್ಕು ಮತ್ತು ಭಾವನೆಗಳ ಮೇಲೆ ದಾಳಿ ಮಾಡಿದರು ಎಂದರು.
ಸುಳ್ಳು ಪ್ರಕರಣ ದಾಖಲು: ನಾಮಪತ್ರ ಸಲ್ಲಿಸಿದ ನಂತರ ಸುಳ್ಳು ಪ್ರಕರಣ ದಾಖಲಿಸಿದರು. ನನ್ನ ವೈಧವ್ಯದ ಬಗ್ಗೆ ಕೀಳಾಗಿ ಮಾತನಾಡಿ ನನ್ನ ಮನಸನ್ನು ಚುಚ್ಚಿದರು. ನಾವು ಪ್ರಚಾರ ಮಾಡದಂತೆ ತಡೆದರು. ನಾನು ರಾಷ್ಟ್ರ ಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶದಲ್ಲಿ ನಂಬಿಕೆ ಇಟ್ಟು ಬೆಳೆದವಳು. ಎಲ್ಲ ಧರ್ಮ, ಜಾತಿ, ವರ್ಗದವರನ್ನು ಸಮಾನವಾಗಿ ಕಾಣುತ್ತಿದ್ದೇನೆ. ಯಾರೂ ಇಂಥದ್ದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿರುವುದಿಲ್ಲ. ನಾನು ಒಕ್ಕಲಿಗ ಹೆಣ್ಣು ಮಗಳು ಎಂಬುದರ ಬಗ್ಗೆ ಹೆಮ್ಮೆ, ಗೌರವವಿದೆ. ಆದರೆ ಒಕ್ಕಲಿಗರು ಮಾತ್ರ ನನ್ನ ಪರವಾಗಿ ಮತ ಚಲಾಯಿಸಬೇಕು. ಉಳಿದವರದು ಬೇಡ ಎಂದು ಎಲ್ಲಿಯೂ ಹೇಳಿಲ್ಲ. ನನಗೆ ಎಲ್ಲ ಸಮುದಾಯ, ಧರ್ಮ, ವರ್ಗದವರ ಆಶೀರ್ವಾದ ಬೇಕು. ಆದರೆ ನನ್ನ ವಿರುದ್ಧ ಜಾತಿ ಕಾರ್ಡ್ ಬಳಸಿ, ಟಾರ್ಗೆಟ್ ಮಾಡುತ್ತಿರುವುದು ನೋವು ತಂದಿದೆ ಎಂದಿದ್ದಾರೆ.
ಯಾವ ಅನ್ಯಾಯ ಮಾಡಿದ್ದೇನೆ:
ನಾನು ನನ್ನ ಪ್ರತಿಸ್ಪರ್ಧಿ ಪಕ್ಷದ ಅಣ್ಣಂದಿರಿಗೆ ಯಾವ ಅನ್ಯಾಯ ಮಾಡಿದ್ದೇನೆ ಎಂದು ನನಗೆ ಈ ರೀತಿ ತೊಂದರೆ ಕೊಡುತ್ತಿದ್ದಾರೋ ಗೊತ್ತಿಲ್ಲ? ನಾನು ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ. ಚುನಾವಣೆಗೆ ಸ್ಪರ್ಧಿಸಿದ್ದೇ ತಪ್ಪಾ? ಈ ವಯಸ್ಸಿಗೆ ಪಡಬಾರದ ನೋವನ್ನು ಅನುಭವಿಸಿದ್ದರೂ, ಇವರು ಮತ್ತಷ್ಟು ನೋವು ಕೊಡುತ್ತಿರುವುದು ಸರಿಯೇ? ನಾನು ನನ್ನ ಮತದಾರರನ್ನು ನಂಬಿ ಬಂದಿದ್ದೇನೆ. ಅವರೇ ನನ್ನ ಶಕ್ತಿ, ಸ್ಫೂರ್ತಿ ಎಲ್ಲವೂ. ನಾನು ಅವರ ಸೇವೆಗಾಗಿ ಬಂದಿದ್ದು, ಅವರ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇನೆ. ಅವರ ನೋವಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅವರ ನಂಬಿಕೆಗೆ ಎಂದೂ ದ್ರೋಹ ಬಗೆಯುವುದಿಲ್ಲ. ನನಗೆ ಒಂದೇ ಒಂದು ಅವಕಾಶ ನೀಡಿ ಅವರಲ್ಲಿ ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈಗ ಚುನಾವಣೆ ಯಾಕೆ ಬಂತು, ಇಷ್ಟು ದಿನ ಯಾಕೆ ತಡವಾಯಿತು, ಅದಕ್ಕೆ ಕಾರಣ ಏನು, ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಚುನಾವಣೆ ನಡೆಯುತ್ತಿರುವುದು ಮೂರು ವರ್ಷಕ್ಕೆ ಮಾತ್ರ. ನಾನು ಸರಿಯಾಗಿ ಕೆಲಸ ಮಾಡದಿದ್ದರೆ, ನಿಮ್ಮ ನಂಬಿಕೆ ಉಳಿಸಿಕೊಳ್ಳದಿದ್ದರೆ ಶಿಕ್ಷಿಸುವ ಅಧಿಕಾರ, ಹಕ್ಕು ನಿಮ್ಮ ಕೈಯಲ್ಲೇ ಇದೆ ಎಂದು ಜನರಲ್ಲಿ ವಿನಂತಿಸಿದ್ದಾರೆ.