ಬೆಂಗಳೂರು: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ದರೋಡೆಗೆ ಬಳಸುವ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ವಿಜಯನಗರ ಹಾಗೂ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ಬೆದರಿಸಿ ಹಣ ವಸೂಲಿ ಮಾಡಲು ಸಜ್ಜಾಗಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಕಾರ್ತಿಕ್ ಅಲಿಯಾಸ್ ಚಪ್ಪರ್, ಹೇಮಂತ್ ಕುಮಾರ್ ಅಲಿಯಾಸ್ ಮಿಂಡ್ರಿ, ಶಿವಸ್ವಾಮಿ ಬಿನ್ ಮಂಚೇಗೌಡ, ಪ್ರಭಾತ್ ಅಲಿಯಾಸ್ ಪ್ರಭು, ಚಂದ್ರ ಅಲಿಯಾಸ್ ಕರಿಯ, ಹುಚ್ಚೇಗೌಡ ಅಲಿಯಾಸ್ ಹಂದಿ ಹುಚ್ಚ, ಯೊಗೇಶ್, ರಾಕೇಶ್, ಅರುಣ್ ಕುಮಾರ್, ಮಂಜುನಾಥ ಬಂಧಿತ ಆರೋಪಿಗಳು. ಆರೋಪಿಗಳ ಪೈಕಿ ಕೆಲವರು ತಡರಾತ್ರಿ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಬಿಎಂಪಿ ಆಟದ ಮೈದಾನದ ಬಳಿ ಹಾಗೂ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ನಿಲ್ದಾಣದ ಬಳಿ ದರೋಡೆ ಮಾಡಲು ಸಾರ್ವಜನಿಕರಿಗಾಗಿ ಕಾದು ನಿಂತಿದ್ದರು ಎಂದು ತಿಳಿದು ಬಂದಿದೆ.