ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಬ್ಯಾಂಕ್ ಖಾತೆಯನ್ನು ಹ್ಯಾಕರ್ಗಳು ಹ್ಯಾಕ್ ಮಾಡಿ 2.13 ಲಕ್ಷ ರೂಪಾಯಿ ಹಣ ಎಗರಿಸಿದ್ದಾರೆ.
ವಂಚನೆ ಸಂಬಂಧ ದೂರಿನ ಮೇರೆಗೆ ನಗರ ಪೂರ್ವ ವಿಭಾಗದ ಸೈಬರ್ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಗರದ ರಿಚರ್ಡ್ ಟೌನ್ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಬ್ಯಾಂಕ್ ಖಾತೆ ಹೊಂದಿರುವ ಅಜಯ್ ಕುಮಾರ್ ಅವರ ಮೊಬೈಲ್ ನಂಬರಿಗೆ 50ಕ್ಕೂ ಹೆಚ್ಚು ಒಟಿಪಿ ಬಂದಿರುವುದನ್ನು ಗಮನಿಸಿ ಪರಿಶೀಲಿಸಿದಾಗ ಅಷ್ಟರಲ್ಲೇ ಅದರ ವ್ಯಾಲಿಡಿಟಿ ಮುಗಿದಿತ್ತು.
ಓದಿ:ಮಹಜರಿಗೆ ಕರೆದುಕೊಂಡು ಹೋದಾಗ ಪತ್ನಿ-ಮಗಳ ಕಂಡು ಮುಜುಗರ: ಕಟ್ಟಡದಿಂದ ಹಾರಿ ಆರೋಪಿ ಆತ್ಮಹತ್ಯೆ!
ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿಕೊಂಡು ಸುಮಾರು 60ಕ್ಕೂ ಹೆಚ್ಚು ಬಾರಿ ವಹಿವಾಟು ಮಾಡಿ, 2.13 ಲಕ್ಷ ರೂಪಾಯಿ ಹಣ ಎಗರಿಸಿದ್ದಾರೆ. ಈ ಸಂಬಂಧ ಹಣ ಕಡಿತಗೊಂಡಿರುವ ಬಗ್ಗೆ ಬ್ಯಾಂಕ್ನಿಂದ ಆಲರ್ಟ್ ಮೆಸೇಜ್ ಬಂದಿತ್ತು. ಈ ಬಗ್ಗೆ ಅನುಮಾನಗೊಂಡು ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಖಾತೆಯಿಂದ ಸೈಬರ್ ಖದೀಮರು ಹಣ ಎಗರಿಸಿರುವುದು ಗೊತ್ತಾಗಿದೆ. ಈ ಸಂಬಂಧ ಅಜಯ್ ಕುಮಾರ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.