ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ನಿವೇಶನ ಮಂಜೂರಾತಿಗಾಗಿ ಎದುರಿಸುತ್ತಿರುವ ಸಮಸ್ಯೆ ನಿವಾರಣೆಗೆ ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ವಿಧಾನಪರಿಷತ್ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ನಿಯಮ 330ರಡಿ ನಡೆಸಿದ ಚರ್ಚೆಗೆ ಪೌರಾಡಳಿತ ಮತ್ತು ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ಪರವಾಗಿ ಉತ್ತರ ನೀಡಿದ ಅವರು, ಯಾವುದೇ ಕಾರಣಕ್ಕೂ ಸದಸ್ಯರು ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರವು ಸೈನಿಕರ ವಿಚಾರದಲ್ಲಿ ಉಡಾಫೆಯ ನಿರ್ಧಾರ ತೋರುವುದಿಲ್ಲ. ಆದಷ್ಟು ಶೀಘ್ರ ಭರವಸೆ ಈಡೇರಿಸುವ ಕಾರ್ಯ ಮಾಡುತ್ತೇವೆ ಎಂದು ವಿವರಿಸಿದರು.
ಇದರ ಬಗ್ಗೆ ಗಮನ ಸೆಳೆದ ವಿಧಾನಪರಿಷತ್ ಸದಸ್ಯ ವೀಣಾ ಅಚ್ಚಯ್ಯ, ಕೊಡಗು ಜಿಲ್ಲೆಯಲ್ಲಿ ಹಲವಾರು ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ನಿವೇಶನ ಮಂಜೂರಾತಿಗಾಗಿ ಕೋರಿ ಸಲ್ಲಿಸಿರುವ ಬೇಡಿಕೆಗಳು ದೀರ್ಘ ಕಾಲದಿಂದ ಬಾಕಿ ಇದ್ದು, ಮಾಜಿ ಸೈನಿಕರಿಗೆ ಇದುವರೆಗೂ ನಿವೇಶನ ಸಿಗದೇ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋಟಾ ಶ್ರೀನಿವಾಸ ಪೂಜಾರಿ, ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಿದ್ದು, ಮಾಜಿ ಸೈನಿಕರು ಮತ್ತು ಅವರ ಆವಲಂಬಿತರ ನಿವೇಶನ ಮಂಜೂರಾತಿಗೆ ಸಂಬಂಧಿಸಿದಂತೆ, ಮಡಿಕೇರಿ ನಗರಸಭೆ, ವಿರಾಜಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯತಿಯಲ್ಲಿ ಅರ್ಜಿಗಳು ಸ್ವೀಕೃತವಾಗಿರುವುದಿಲ್ಲ.
ಆದರೆ, ಸೋಮವಾರಪೇಟೆ ಪಟ್ಟಣ ಪಂಚಾಯ್ತಿಯಲ್ಲಿ ಮಾತ್ರ ಒಂದು ಅರ್ಜಿ ಸ್ವೀಕೃತವಾಗಿದ್ದು, ಸದರಿ ಅರ್ಜಿಯ ಬಗ್ಗೆ ಕ್ರಮ ವಹಿಸುವ ಸಂಬಂಧ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ, ಪಂಚಾಯಿತಿಯ ಸುತ್ತಮುತ್ತಲಿನ ಸರ್ಕಾರಿ ರೆವೆನ್ಯೂ ಜಾಗವನ್ನು ಗುರುತಿಸಿಕೊಡುವಂತೆ ತಹಶೀಲ್ದಾರ್, ಸೋಮವಾರಪೇಟೆ ತಾಲೂಕು ರವರನ್ನು ಕೋರಲಾಗಿದೆ ಎಂದರು.