ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರ ಆರೋಪದಡಿ ಸಿಬಿಐ ಎಫ್ಐಆರ್ ದಾಖಲಿಸಿಕೊಂಡು ತನಿಖೆಗೆ ಇಳಿದಿದೆ. ಇದೇ ವೇಳೆ ಸ್ಥಳೀಯ ನಿವಾಸಿ ಕಂಚನಹಳ್ಳಿ ರವಿಕುಮಾರ್, ಡಿಕೆ ಸೋದರರ ವಿರುದ್ಧ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಸಿಬಿಐಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ, ಡಿಕೆ ಸೋದರರ ಎಲ್ಲ ಅಕ್ರಮ ಹೂಡಿಕೆಗಳ ಮಾಹಿತಿ ನೀಡುವುದಾಗಿ ಸಿಬಿಐಗೆ ತಿಳಿಸಿದ್ದಾರೆ.
ಡಿಕೆ ಸೋದರರ ವಿರುದ್ಧ ಹಲವು ಕಾನೂನು ಹೋರಾಟಗಳನ್ನು ನಡೆಸಿಕೊಂಡು ಬಂದಿರುವ ಕನಕಪುರದ ಕಂಚನಹಳ್ಳಿ ನಿವಾಸಿ ರವಿಕುಮಾರ್ ಇಂದು ಸಿಬಿಐಗೆ ಸಲ್ಲಿಸಿರುವ ದೂರಿನಲ್ಲಿ, ಶಾಸಕ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ಅವರು ಅಕ್ರಮವಾಗಿ ಹಣ ಗಳಿಸಿ, ಹಲವು ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ, ಶುಗರ್ಸ್ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇವರ ಅಕ್ರಮಗಳ ವಿರುದ್ಧ ಹಲವು ದೂರುಗಳನ್ನು ನ್ಯಾಯಾಲಯಗಳಲ್ಲಿ ದಾಖಲಿಸಿದ್ದೇನೆ.

ಡಿಕೆ ಸೋದರರು ಶೋಭಾ, ಪ್ರೆಸ್ಟೀಜ್ ಸೇರಿದಂತೆ ಹಲವು ಡೆವಲಪರ್ಸ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ.ಅಷ್ಟೇ ಅಲ್ಲ, ಇಲ್ಲಿ ಬೇನಾಮಿ ಶೇರುಗಳನ್ನು ಸಹ ಹೊಂದಿದ್ದಾರೆ. ಬೆಂಗಳೂರು ಪೂರ್ವದ ಬೆನ್ನಿಗಾನಹಳ್ಳಿಯಲ್ಲಿ ನಕಲಿ ದಾಖಲೆಗಳ ಮೂಲಕ ನೋಟಿಫೈ ಆಗಿದ್ದ 4.10 ಎಕರೆ ಜಮೀನನ್ನು ಡಿ ನೋಟಿಫಿಕೇಶನ್ ಮಾಡಿಸಿ ಡೆವಲಪರ್ಸ್ ಗೆ ಕೊಡಿಸಿದ್ದಾರೆ. ಈ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹಾಗೆಯೇ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಶುಗರ್ ಫ್ಯಾಕ್ಟರಿಯಲ್ಲಿ ಬೇನಾಮಿ ಷೇರು ಹೊಂದಿದ್ದಾರೆ. ರಾಮನಗರ, ಕನಕಪುರದಲ್ಲಿ ಹಲವು ವ್ಯಕ್ತಿಗಳ ಹೆಸರಲ್ಲಿ ಬೇನಾಮಿಯಾಗಿ ಕೋಟ್ಯಂತರ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ನನಗೆ ಲಭ್ಯವಿರುವ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಲು ಸಿದ್ದನಿದ್ದೇನೆ. ಆದ್ದರಿಂದ ಸಿಬಿಐ ಅಧಿಕಾರಿಗಳು ಅಕ್ರಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಡಿಕೆ ಸೋದರರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.
2017ರ ಐಟಿ ದಾಳಿ ಪ್ರಕರಣ ಸಂಬಂಧ ಡಿಕೆ ಶಿವಕುಮಾರ್ ವಿರದ್ಧ ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯ ಸೆಕ್ಷನ್ 13(2), 13(1)(ಇ) ಅಡಿ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಸ್ಥಳೀಯ ನಿವಾಸಿಯೇ ಡಿಕೆ ಶಿವಕುಮಾರ್ ವಿರುದ್ಧ ದೂರು ನೀಡುವ ಜತೆಗೆ ಮಾಹಿತಿಯನ್ನೂ ನೀಡಲು ಮುಂದಾಗಿರುವುದು ಡಿಕೆಶಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.