ಬೆಂಗಳೂರು: ಹತ್ತುದಿನಗಳ ಅಮೆರಿಕಾ ಪ್ರವಾಸ ಮುಗಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಪಸಾಗಿದ್ದಾರೆ.
ಅಮೆರಿಕಾಗೆ ತೆರಳಿ ಹತ್ತು ದಿನ ಸುತ್ತಾಡಿ ನಿನ್ನೆ ತಡರಾತ್ರಿ ನಗರಕ್ಕೆ ಆಗಮಿಸಿರುವ ರಮೇಶ್ ಜಾರಕಿಹೊಳಿ ಕೇರಳದತ್ತ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಂದಲೇ ನೇರವಾಗಿ ದಿಲ್ಲಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಇದೆ. ಸುಪ್ರಿಂ ಕೋರ್ಟ್ನಲ್ಲಿ ಅಕ್ಟೋಬರ್ 22ರಂದು ಅನರ್ಹ ಶಾಸಕರ ವಿಚಾರಣೆ ಹಿನ್ನೆಲೆ ರಮೇಶ್ ಜಾರಕಿಹೊಳಿ ಕೇರಳದಿಂದ ನೇರವಾಗಿ ದಿಲ್ಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಳೆ ದೆಹಲಿಗೆ ತೆರಳಲಿರುವ ಅನರ್ಹ ಶಾಸಕರ ಜೊತೆ ಇವರೂ ಕೂಡಿ ಕೊಳ್ಳಲಿದ್ದಾರೆ. ಎಲ್ಲರೂ ನಾಳೆ ಸಂಜೆಯೊಳಗೆ ತಲುಪುವ ಸಾಧ್ಯತೆ ಇದೆ. ನಾಳೆ ದೆಹಲಿಯಲ್ಲಿ ವಕೀಲರನ್ನು ಭೇಟಿಯಾಗಿ ಚರ್ಚೆ ನಡೆಸಲಿರುವ ಅನರ್ಹ ಶಾಸಕರು ತಮ್ಮ ವಿಚಾರಣೆ ಫಲಿತಾಂಶ ಯಾವ ರೀತಿ ಬರಬಹುದು ಎಂದು ಸಮಾಲೋಚಿಸಲಿದ್ದಾರೆ. ಫಲಿತಾಂಶ ಯಾವುದೇ ರೀತಿಯಲ್ಲಿ ಬಂದರೂ ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕೂಡ ನಾಳೆ ಅನರ್ಹ ಶಾಸಕರ ಜತೆ ಸೇರಿ ಚರ್ಚಿಸುವ ಸಾಧ್ಯತೆ ಇದೆ.