ಬೆಂಗಳೂರು: ಕಲಬುರಗಿ ಮತ್ತು ಹುಬ್ಬಳ್ಳಿ ರೈಲ್ವೆ ಉಪವಿಭಾಗ ವ್ಯಾಪ್ತಿಯಲ್ಲಿ ರೈಲು ಪ್ರಯಾಣಿಕರ ಮೊಬೈಲ್, ಹಣ ಹಾಗೂ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿ, ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ರೈಲ್ವೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ರಾವ್ ತಿಳಿಸಿದರು.
ರೈಲ್ವೆ ಪೋಲಿಸ್ ಇಲಾಖೆಯಿಂದ ಪ್ರಾಪರ್ಟಿ ಪರೇಡ್ ನಡೆದಿದ್ದು, ಚಿನ್ನಾಭರಣ ಕಳೆದುಕೊಂಡಿದ್ದ ರೈಲು ಪ್ರಯಾಣಿಕರಿಗೆ ಅವರವರ ವಸ್ತುಗಳನ್ನು ವಾಪಸ್ ನೀಡಲಾಯಿತು.
ಈ ವೇಳೆ ಮಾತನಾಡಿದ ಭಾಸ್ಕರ್ ರಾವ್, ರೈಲ್ವೆ ಪೊಲೀಸರಿಂದ ಒಟ್ಟು ಆರು ಮಂದಿ ಕಳ್ಳತನ ಆರೋಪಿಗಳನ್ನು ಬಂಧಿಸಲಾಗಿದೆ. ಹುಬ್ಬಳ್ಳಿ ಮತ್ತು ಕಲಬುರಗಿ ರೈಲ್ವೆ ಉಪ ವಿಭಾಗಗಳಲ್ಲಿ ತಲಾ ಎರಡು ಪ್ರಕರಣ ದಾಖಲಾಗಿವೆ. ಬಂಧಿತರು, ರೈಲ್ವೆ ಪ್ರಯಾಣಿಕರ ಸೋಗಿನಲ್ಲಿ ರೈಲು ಹತ್ತುವಾಗ ಮತ್ತು ರೈಲಿನಲ್ಲಿ ಪ್ರಯಾಣಿಸುವಾಗ ಮಲಗಿದ್ದವರ ಬಳಿ ಚಿನ್ನಾಭರಣ ಕಳವು ಮಾಡಿದ್ದರು ಎಂದು ಹೇಳಿದರು.
![Railway police conducting Property Parade](https://etvbharatimages.akamaized.net/etvbharat/prod-images/kn-bng-01-railway-police-bangalore-seize-more-than-600gms-jewellery-8persons-arrested-returned-to-passengers-adgp-bhaskar-ka10032_20032021165515_2003f_1616239515_160.jpg)
ಹುಬ್ಬಳ್ಳಿ ರೈಲ್ವೆ ಉಪವಿಭಾಗ:
ಹುಬ್ಬಳ್ಳಿ ರೈಲ್ವೆ ಉಪವಿಭಾಗ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎರಡು ಕಳ್ಳತನ ಪ್ರಕರಣ ಸಂಬಂಧ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ನಗರದ ನಿವಾಸಿ ಅರವಿಂದ 2020 ಫೆ. 8 ರಂದು ತಮ್ಮ ಕುಟುಂಬದೊಂದಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಹುಬ್ಬಳ್ಳಿಯಿಂದ ಯಶವಂತಪುರಕ್ಕೆ ಬಂದಿದ್ದರು. ರೈಲು ನಿಲ್ದಾಣದಿಂದ ಮನೆಗೆ ಬಂದು ಬ್ಯಾಗ್ ತೆಗೆದು ನೋಡಿದಾಗ ಒಂದು ಚಿಕ್ಕ ಬ್ಯಾಗ್ ಕಾಣೆಯಾಗಿತ್ತು. ಈ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಹುಬ್ಬಳ್ಳಿ ರೈಲ್ವೆ ಪೊಲೀಸರು, ತನಿಖೆ ನೆಡಸಿ ಸನ್ನಿ (24) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 2.25 ಲಕ್ಷ ರೂ. ಮೌಲ್ಯದ 73 ಗ್ರಾಂ ಚಿನ್ನದ ಒಡವೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ರೈಲ್ವೆ ಎಡಿಜಿಪಿ ತಿಳಿಸಿದರು.
ಮತ್ತೊಂದು ಪ್ರಕರಣದಲ್ಲಿ ದುರ್ಗಮ್ಮ ಎಂಬುವವರು ಬೆಳಗಾವಿ ಎಕ್ಸ್ಪ್ರೆಸ್ ರೈಲಿನಲ್ಲಿ ಅರಸೀಕೆರೆಯಿಂದ ಪ್ರಯಾಣಿಸುವಾಗ ವ್ಯಾನಿಟಿ ಬ್ಯಾಗ್ ಕಳ್ಳತನವಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಮಂಡ್ಯ ಜಿಲ್ಲೆ ಮೂಲದ ಆರೋಪಿ ಹೆಚ್.ಎಂ.ನಾಗರಾಜು(45) ಎಂಬಾತನನ್ನು ಬಂಧಿಸಿದ್ದಾರೆ.
ಮೂವರು ಮಹಿಳಾ ಆರೋಪಿಗಳ ಬಂಧನ:
ಕಲಬುರಗಿ ರೈಲ್ವೆ ಉಪವಿಭಾಗ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎರಡು ಕಳ್ಳತನ ಪ್ರಕರಣ ಸಂಬಂಧ ಮೂರು ಮಂದಿ ಮಹಿಳಾ ಆರೋಪಿಗಳನ್ನು ಬಂಧಿಸಿ, ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ತೆಲಂಗಾಣ ನಿವಾಸಿ ಫರತ್ ಬೇಗಂ ವಿಶಾಖಪಟ್ಟಣಂ ಎಲ್.ಟಿ.ಟಿ ರೈಲಿನಲ್ಲಿ ಲಿಂಗಂಪಲ್ಲಿಯಿಂದ ಕಲಬುರಗಿಗೆ ಪ್ರಯಾಣಿಸುವಾಗ ದುಷ್ಕರ್ಮಿಗಳು ಬ್ಯಾಗ್ನಲ್ಲಿದ್ದ 2.45 ಲಕ್ಷ ಮೌಲ್ಯದ ಚಿನ್ನಭರವಣ ಕಳವು ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅಕ್ಕಲಕೊಟ ನಿವಾಸಿಗಳಾದ ರೇಣುಕಾ(35), ಪದ್ಮಾ(50) ಹಾಗೂ ಗಾಯತ್ರಿ(32) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 1.55 ಲಕ್ಷ ರೂ. ಮೌಲ್ಯದ 35 ಗ್ರಾಂ. ನಕ್ಲೆಸ್, 45 ಸಾವಿರ ರೂ. ಮೌಲ್ಯದ 10 ಗ್ರಾಂ ಕಿವಿಯೋಲೆ ವಶಕ್ಕೆ ಪಡೆದಿದ್ದಾರೆ.
![Railway police conducting Property Parade](https://etvbharatimages.akamaized.net/etvbharat/prod-images/kn-bng-01-railway-police-bangalore-seize-more-than-600gms-jewellery-8persons-arrested-returned-to-passengers-adgp-bhaskar-ka10032_20032021165515_2003f_1616239515_319.jpg)
ಮತ್ತೊಂದು ಪ್ರಕರಣದಲ್ಲಿ ಮುಂಬೈ ನಿವಾಸಿ ಕೌಸಲ್ಯ ಬಡತಿಯಾ ಎಂಬುವವರು ಕೊನಾರ್ಕ್ ಕೋವಿಡ್-19 ವಿಶೇಷ ರೈಲಿನಲ್ಲಿ ಕಲ್ಯಾಣ ರೈಲು ನಿಲ್ದಾಣದಿಂದ ಬೆಹರಮಪೂರಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕಲಬುರಗಿ ರೈಲು ನಿಲ್ದಾಾಣದಲ್ಲಿ ದುರ್ಷರ್ಮಿಯೊಬ್ಬ, ಚಿನ್ನಾಭರಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ವಾಡಿ ರೈಲ್ವೆ ಪೊಲೀಸರು, ಕಲಬುರಗಿ ವಿಶಾಲನಗರದ ನಿವಾಸಿ ಆರೋಪಿ ಮೊಸೀನ್ನನ್ನು ಬಂಧಿಸಿದ್ದಾರೆ. ಆರೋಪಿಯಿಂದ 1.50 ಲಕ್ಷ ರೂ. ಮೌಲ್ಯದ 30 ಗ್ರಾಂ ಮಂಗಳ ಸೂತ್ರ, 50 ಸಾವಿರ ರೂ. ಮೌಲ್ಯದ 10 ಗ್ರಾಂ. ಜುಮುಕಿ, 10 ಗ್ರಾಂ ಸರ, 75 ಸಾವಿರ ರೂ. ಮೌಲ್ಯದ 15 ಗ್ರಾಂ ಸರ ಹಾಗೂ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಬಂಧಿತ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ ಎಂದು ಭಾಸ್ಕರ್ ರಾವ್ ಹೇಳಿದರು.
ಎಸ್ಪಿ ಸಿರಿಗೌರಿ, ಇನ್ಸ್ಪೆಕ್ಟರ್ ಭರಮಪ್ಪ ಮಾಲೂರು ಹಾಗೂ ಸಿಬ್ಬಂದಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.