ಬೆಂಗಳೂರು: ಎನ್.ಆರ್. ಸಂತೋಷ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಿದ ಹಿನ್ನೆಲೆ ಇತರೆ ಅನುಭವಿ ಮೂವರು ಸಿಎಂ ರಾಜಕೀಯ ಕಾರ್ಯದರ್ಶಿಗಳು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿ ಸಂತೋಷ್ ಅವರನ್ನು ನೇಮಕದ ಅಧಿಕೃತ ಆದೇಶ ಹೊರಬಿದ್ದ ಬೆನ್ನಲ್ಲೇ ಹಿರಿಯ ಸಿಎಂ ರಾಜಕೀಯ ಕಾರ್ಯದರ್ಶಿಗಳಲ್ಲಿ ಅತೃಪ್ತಿ ಮನೆ ಮಾಡಿದೆ. ಈಗಾಗಲೇ ಹಿರಿಯ ಶಾಸಕ ಎಸ್.ಆರ್. ವಿಶ್ವನಾಥ್, ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಶಂಕರ ಗೌಡ ಪಾಟೀಲ್ ಅವರನ್ನು ಸಿಎಂರ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಎನ್.ಆರ್. ಸಂತೋಷ್ ಅವರನ್ನು ನಾಲ್ಕನೇ ರಾಜಕೀಯ ಕಾರ್ಯದರ್ಶಿಯಾಗಿ ಇದೀಗ ನೇಮಕಗೊಂಡಿದ್ದಾರೆ. ಮೂರು ನಾಲ್ಕು ಬಾರಿ ಶಾಸಕರಾಗಿ, ಮಾಜಿ ಸಚಿವರಾಗಿದ್ದವರಿಗೆ ಸಿಎಂರ ರಾಜಕೀಯ ಕಾರ್ಯದರ್ಶಿಯ ಹುದ್ದೆ ನೀಡಲಾಗಿದೆ. ಆದರೆ, ಯಾವುದೇ ರಾಜಕೀಯ ಅನುಭವ ಹೊಂದಿಲ್ಲದ, ಯುವಕನನ್ನು ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದು ಹಿರಿಯರ ಅಸಮಾಧಾನಕ್ಕೆ ಕಾರಣವಾಗಿದೆ.
