ಬೆಂಗಳೂರು : ವಿದ್ಯುತ್ ಚಾಲಿತ ಬೈಕ್ ಟ್ಯಾಕ್ಸಿ ಚಾಲನೆಗೆ ಸರ್ಕಾರ ಚಾಲ್ತಿ ನೀಡಿದೆ. ಈ ಯೋಜನೆ ಜಾರಿಗೆ ಬಂದಲ್ಲಿ ಆಟೋ, ಟ್ಯಾಕ್ಸಿ ಚಾಲಕರ ಜೀವನದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ. ಸಂಪಾದನೆ ಇಲ್ಲದೆ ಸಾಯುವ ಪರಿಸ್ಥಿತಿ ಬರುತ್ತದೆ. ಹಾಗಾಗಿ, ಈ ಯೋಜನೆ ಜಾರಿಯಾಗಬಾರದು ಎಂದು ನಮ್ಮ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸೋಮಶೇಖರ್ ಗೌಡ ಮನವಿ ಮಾಡಿದ್ದಾರೆ.
ಈ ಕುರಿತಂತೆ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಜುಲೈ 14ರಂದು ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ವಿದ್ಯುತ್ ಚಾಲಿತ ಬೈಕ್ ಟ್ಯಾಕ್ಸಿ ಯೋಜನೆಗೆ ಚಾಲ್ತಿ ನೀಡಿದ್ದಾರೆ. ಈ ಯೋಜನೆ ಜಾರಿಗೆ ಬಂದರೆ ಆಟೋ, ಟ್ಯಾಕ್ಸಿ ಚಾಲಕರ ಜೀವನ ಅತಂತ್ರ ಸ್ಥಿತಿಗೆ ತಲುಪುತ್ತದೆ. ಕೆಲಸ, ಹಣವಿಲ್ಲದೆ ಚಾಲಕರು ಸಾಯುವ ಪರಿಸ್ಥಿತಿಗೆ ಬರುತ್ತಾರೆ. ಹಾಗಾಗಿ, ಈ ಯೋಜನೆ ಜಾರಿಯಾಗಬಾರದು ಎಂದು ಒತ್ತಾಯಿಸಿದರು.
ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರು, ಮುಖ್ಯಮಂತ್ರಿ, ಸಾರಿಗೆ ಸಚಿವರು ಹಾಗೂ ಇಲಾಖೆ ಆಯುಕ್ತರಿಗೆ ಮನವಿ ಕೊಟ್ಟಿದ್ದೇವೆ. ಯಾವುದೇ ಕಾರಣಕ್ಕೂ ಈ ಯೋಜನೆಗೆ ಅವಕಾಶ ಕೊಡಬಾರದು. ಇದರಿಂದ ಲಕ್ಷಾಂತರ ಟ್ಯಾಕ್ಸಿ,ಆಟೋ ಚಾಲಕರ ಬದುಕಿಗೆ ಅನುಕೂಲಕರ ವ್ಯವಸ್ಥೆ ಮಾಡಿಕೊಡಬೇಕು. ತೆರಿಗೆ ಕಟ್ಟುವ ಖಾಸಗಿ ವಾಣಿಜ್ಯ ಚಾಲಕರ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ವಿನಂತಿಸಿಕೊಂಡರು.