ಬೆಂಗಳೂರು : ಕೆಎಸ್ಆರ್ಟಿಸಿ ಗುಜರಿ ಬಸ್ಗಳು ಲಕ ಲಕ ಹೊಳೆಯುತ್ತಿವೆ. ರೀ ಬೋರ್, ರೀ ಬಾಡಿ ಬಿಲ್ಡ್ನೊಂದಿಗೆ ಹೊಸ ಬಸ್ಗಳಂತೆ ಮಾರ್ಪಾಡಾಗಿ ಮತ್ತೆ ರಸ್ತೆಗಿಳಿಯುತ್ತಿವೆ. ಕೇಂದ್ರ ಸರ್ಕಾರದ ಗುಜರಿ ನೀತಿಯನ್ನೇ ಸಮರ್ಪಕವಾಗಿ ಅಳವಡಿಸಿಕೊಂಡ ಕೆಎಸ್ಆರ್ಟಿಸಿ, ಗುಜರಿ ಸೇರುತ್ತಿದ್ದ ಬಸ್ಗಳನ್ನೇ ಮತ್ತೆ ಎರಡು ಮೂರು ವರ್ಷ ರಸ್ತೆಗಿಳಿಸುತ್ತಿದೆ. ಹೀಗಾಗಿ ಡಕೋಟ ಬಸ್ಗಳಿನ್ನು ಹೊಸ ಬಸ್ಗಳಂತೆ ರೂಪುಗೊಳ್ಳಲಿವೆ.

ಹೌದು, 10 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿ ಗುಜರಿ ಸೇರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗಳಿಗೆ ಹೊಸ ಸ್ಪರ್ಶ ನೀಡಿ ಮತ್ತೆ 5 ಲಕ್ಷ ಕಿಲೋಮೀಟರ್ ಸಂಚಾರಕ್ಕೆ ಬಳಸಿಕೊಳ್ಳಲು ಸಾರಿಗೆ ನಿಗಮ ಮುಂದಾಗಿದೆ. ಈಗಾಗಲೇ ಚಾಲನೆಯನ್ನೂ ನೀಡಿದೆ. ಈಗಾಗಲೇ ಸುಮಾರು 15 ಡಿಪೋಗಳು ಮತ್ತು ಎರಡು ಪ್ರಾದೇಶಿಕ ಕಾರ್ಯಾಗಾರದಲ್ಲಿ ನವೀಕರಣ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ವರ್ಕ್ಶಾಪ್ಗಳು ತಿಂಗಳಿಗೆ 50 ಬಸ್ಗಳನ್ನು ಸಂಪೂರ್ಣವಾಗಿ ನವೀಕರಣಗೊಳಿಸುತ್ತಿವೆ.

ನವೀಕರಣ ಕಾರ್ಯ : 8-10 ಲಕ್ಷ ಕಿಲೋಮೀಟರ್ ಓಡಿದ ಬಸ್ಗಳು ಬಹುತೇಕ ಶಿಥಿಲಾವಸ್ಥೆ ತಲುಪಿರುತ್ತವೆ. ತುಕ್ಕು ಹಿಡಿದು ಡಕೋಟಾ ಬಸ್ಗಳಂತಾಗಿರುತ್ತವೆ. ಬಸ್ನ ಕವಚ ಹಾನಿಗೊಂಡು ಬಿಡಿಭಾಗಗಳೆಲ್ಲಾ ಸದ್ದು ಮಾಡುತ್ತಿರುತ್ತವೆ. ಇನ್ನೇನು ಗುಜರಿಗೆ ಹಾಕುವುದೊಂದೇ ಬಾಕಿ ಇರುತ್ತದೆ. ಅಂತಹ ಬಸ್ಗಳನ್ನು ಮೊದಲು ಗುರುತಿಸಲಾಗುತ್ತದೆ. ಗುಜರಿಗೆ ಕೊಂಡೊಯ್ಯಲು ಸಿದ್ದವಾಗಿದ್ದ ಬಸ್ಗಳನ್ನು ಕೆಎಸ್ಆರ್ಟಿಸಿಯ ಕಾರ್ಯಾಗಾರಕ್ಕೆ ತರಲಾಗುತ್ತದೆ.

ಕಾರ್ಯಾಗಾರಕ್ಕೆ ಡಕೋಟಾ ಬಸ್ ಬರುತ್ತಿದ್ದಂತೆ ಮೊದಲ ಮಾಡುವ ಕೆಲಸ ಬಸ್ನ ತುಕ್ಕು ಹಿಡಿದ ಮತ್ತು ಹಾನಿಗೊಳಗಾದ ಎಲ್ಲಾ ಭಾಗಗಳನ್ನು ಹೊರತೆಗೆಯುವುದು. ಬಳಿಕ ಬಸ್ನ ಎಲ್ಲಾ ಭಾಗಗಳನ್ನು ಬಿಚ್ಚಿ ಸಂಪೂರ್ಣವಾಗಿ ವಾಹನವನ್ನು ದುರಸ್ತಿಗೊಳಿಸಲಾಗುತ್ತದೆ. ಇಂಜಿನ್ ಅನ್ನು ಬಿಚ್ಚಿ ರೀ ಬೋರ್ ಮಾಡಲಾಗುತ್ತದೆ. ಚಾಸಿ ದಕ್ಷವಾಗಿರುವಂತೆ ಅಗತ್ಯ ದುರಸ್ತಿ ಕೆಲಸ ಮಾಡಲಾಗುತ್ತದೆ. ವೆಲ್ಡಿಂಗ್, ವೈರಿಂಗ್ನಿಂದ ಎಲ್ಲ ಕೆಲಸ ಮಾಡಿ ನಂತರವೇ ಮತ್ತೆ ಬಸ್ನ ಜೋಡಿಸಲಾಗುತ್ತದೆ. ಪ್ಯಾನೆಲಿಂಗ್ ಕೆಲಸ ಮುಗಿಸಿ, ಬಸ್ನ ಹೊರಭಾಗಕ್ಕೆ ಹೊಸ ಲೋಹದ ಹಾಳೆಗಳನ್ನು ಬಳಸಲಾಗುತ್ತದೆ.

ಕಿಟಕಿಗಳು ಮತ್ತು ವಿಂಡ್ಶೀಲ್ಡ್ಗಳ ಮೇಲಿನ ಗ್ಲಾಸ್ಗಳನ್ನು ಬದಲಾಯಿಸಲಾಗುತ್ತದೆ. ಶೀಟ್ ಕುಶನ್ಗಳು ಮತ್ತು ಡ್ರೆಸಿಂಗ್ಗಳನ್ನು ಹೊಸ ಕೋಟ್ನೊಂದಿಗೆ ಪುನಃ ಮಾಡಲಾಗುತ್ತದೆ. ಆ ಮೂಲಕ ಗುಜರಿ ಬಸ್ ಶೋರೋಂನಿಂದ ಬಂದ ಹೊಸ ಬಸ್ನ ರೀತಿಯಲ್ಲಿಯೇ ಸಿದ್ದವಾಗುತ್ತದೆ. ಇಂಜಿನ್ ಕ್ಷಮತೆ ಹಾಗೂ ಬಸ್ನ ಹೊರಕವಚ ದಕ್ಷವಾಗಿದ್ದು, ಹೊಸ ಬಸ್ ಗೂ ನವೀಕರಣಗೊಂಡ ಬಸ್ಗೂ ವ್ಯತ್ಯಾಸ ಗೊತ್ತಾಗದ ರೀತಿ ಬಸ್ ಸಿದ್ದವಾಗಿ ನಿಂತಿರುತ್ತದೆ.

ಕೆಎಸ್ಆರ್ಟಿಸಿಯಲ್ಲಿ 8 ಸಾವಿರಕ್ಕೂ ಹೆಚ್ಚು ಬಸ್ಗಳು: ಸದ್ಯ ಕೆಎಸ್ಆರ್ಟಿಸಿ ಬಳಿ 8 ಸಾವಿರಕ್ಕೂ ಹೆಚ್ಚಿನ ಬಸ್ಗಳಿದ್ದು, ಅದರಲ್ಲಿ ಅಂದಾಜು 2 ಸಾವಿರದಷ್ಟು ಬಸ್ಗಳು 10 ಲಕ್ಷ ಕಿಲೋಮೀಟರ್ ದೂರವನ್ನು ಕ್ರಮಿಸಿವೆ. ಅದರಲ್ಲಿ ಸದ್ಯ ಗುಜರಿ ಸೇರಬೇಕಿದ್ದ 500ಕ್ಕೂ ಹೆಚ್ಚಿನ ಬಸ್ಗಳನ್ನು ನವೀಕರಣಗೊಳಿಸಿ ರಸ್ತೆಗಿಳಿಸಲಾಗಿದೆ. ಇನ್ನು 1300 ಬಸ್ಗಳನ್ನು ನವೀಕರಣಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರದ ಗುಜರಿ ನೀತಿಯ ಪ್ರಕಾರ, 10 ಲಕ್ಷ ಕಿಲೋಮೀಟರ್ ಅಥವಾ 15 ವರ್ಷ ದಾಟಿದ ಬಸ್ಗಳನ್ನು ರಸ್ತೆಗಿಳಿಸುವಂತಿಲ್ಲ.

ಆದರೆ, 10 ವರ್ಷಕ್ಕೆ 10 ಲಕ್ಷ ಕಿಲೋಮೀಟರ್ ದೂರವನ್ನು ಕೆಎಸ್ಆರ್ಟಿಸಿ ಬಸ್ಗಳು ಕ್ರಮಿಸುತ್ತಿವೆ. ಹಾಗಾಗಿ 10 ವರ್ಷಕ್ಕೆ ಈ ಬಸ್ಗಳನ್ನು ಗುಜರಿಗೆ ಹಾಕಲಾಗುತ್ತಿದೆ. ಇದನ್ನು ತಪ್ಪಿಸಲು ರಾಜ್ಯ ಸಾರಿಗೆ ಸಂಸ್ಥೆ ಹಳೆ ಬಸ್ಗಳನ್ನು ಇಂಜಿನ್ ರೀಬೋರ್ನಿಂದ ಹಿಡಿದು ಸಂಪೂರ್ಣವಾಗಿ ಹೊಸದರಂತೆ ಮಾರ್ಪಡಿಸಿ, 15 ವರ್ಷದ ಮಿತಿಯವರೆಗೂ ಬಸ್ಗಳನ್ನು ಓಡಿಸಲು ಮಾಸ್ಟರ್ ಪ್ಲಾನ್ ಮಾಡಿ, ಗುಜರಿ ನೀತಿಯ ನಿಯಮ ಉಲ್ಲಂಘನೆಯಾಗದಂತೆ ಬಸ್ಗಳನ್ನು ಹೆಚ್ಚುವರಿಯಾಗಿ 4-5 ಲಕ್ಷ ಕಿಲೋಮೀಟರ್ ಹಾಗೂ ಮತ್ತೆ ನಾಲ್ಕೈದು ವರ್ಷಗಳ ಕಾಲ ಓಡಿಸಲು ಆರಂಭಿಸಿದೆ.

ಸಚಿವರು ಹೇಳಿದ್ದಿಷ್ಟು: ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಹಿಂದೆ ಎಲ್ಲ 7-8 ಲಕ್ಷ ಓಡಿದ ಬಸ್ ಗಳನ್ನು ಸ್ಕ್ರ್ಯಾಪ್ಗೆ ಹಾಕುತ್ತಿದ್ದರು. ಅದು ನ್ಯಾಷನಲ್ ವೇಸ್ಟ್. ಹೀಗಾಗಿ ಇಂತಹ ಬಸ್ಗಳನ್ನು ನವೀಕರಿಸುವ ಮೂಲಕ ಮತ್ತೆ 4-5 ಲಕ್ಷ ಕಿಲೋಮೀಟರ್ ಓಡಿಸುವ ಕೆಲಸ ಈಗ ನಮ್ಮಿಂದ ಆಗುತ್ತಿದೆ. ಈಗಾಗಲೇ 500 ಬಸ್ ಗುಜರಿ ಬದಲು ನವೀಕರಣಗೊಂಡು ರಸ್ತೆಗಿಳಿಸಿವೆ. ಹೊಸ್ ಬಸ್ಗೆ ಕಡಿಮೆ ಇಲ್ಲದಂತೆ ಈ ಬಸ್ಗಳನ್ನು ರೆಡಿ ಮಾಡಲಾಗುತ್ತದೆ. ಇಂಜಿನ್ ಎಲ್ಲವನ್ನೂ ಬಿಚ್ಚಿ ರೀಬೋರ್ ಮಾಡಿ ದುರಸ್ತಿಪಡಿಸಿ ಹೊಸದಾಗಿ ಸಿದ್ದಪಡಿಸಲಾಗಿದೆ. ಬಸ್ನ ಹೊರ ಕವಚ ಪೂರ್ತಿ ಹೊಸದಾಗಿ ಕಟ್ಟಲಾಗುತ್ತದೆ. ಹೊಸ ಟೈರ್, ಟೂಬ್ ಹಾಕಲಾಗಿದೆ. ಇಂಜಿನ್ ರೀ ಬೋರ್ ಆಗಲಿದೆ ಎಂದು ಮಾಹಿತಿ ನೀಡಿದರು.

ಗುಜರಿಗೆ ಸೇರಬೇಕಾದ ಬಸ್ನ ನವೀಕರಣ 2-3 ಲಕ್ಷದಲ್ಲಿ ಮುಗಿದು ಹೋಗಲಿದೆ. ಆದರೆ, ನಾವು ಹೊಸ ಬಸ್ ಖರೀದಿಸಬೇಕಾದಲ್ಲಿ40 ಲಕ್ಷ ಆಗಲಿದೆ. ಖಾಸಗಿಯವರು 20-25 ಲಕ್ಷ ಕಿಲೋಮೀಟರ್ ವರೆಗೂ ಓಡಿಸುತ್ತಾರೆ. ನಾವು 8-10 ಲಕ್ಷ ಕಿಲೋ ಮೀಟರ್ಗೆ ಸ್ಕ್ರಯಾಪ್ಗೆ ಹಾಕುತ್ತಿದ್ದೆವು. ಈಗ ಕೇಂದ್ರ ಕೂಡ 15 ವರ್ಷದ ಮೇಲೆ ಓಡಿಸಬಾರದು ಎನ್ನುವ ಆದೇಶ ಮಾಡಿದೆ. ನಾವು ಕೂಡ ಅಷ್ಟು ವರ್ಷಗಳ ಕಾಲ ಸುವ್ಯವಸ್ಥಿತವಾಗಿರಿಸಿಕೊಂಡು ರೀಫರ್ಮಿಷನ್ಮೆಂಟ್ ಮಾಡಿ ಬಸ್ ಓಡಿಸಲಿದ್ದೇವೆ. ಇದರಿಂದ ನಮ್ಮ ಸಂಸ್ಥೆಗೂ ಹಣ ಉಳಿಯಲಿದೆ ಎಂದರು.
ಹೊಸದರಂತೆ ಕಂಗೊಳಿಸುತ್ತಿವೆ ನವೀಕರಣಗೊಂಡ ಬಸ್: ನವೀಕರಣಗೊಂಡ ಬಸ್ಗೂ ಹೊಸ ಬಸ್ಗೂ ಯಾವ ವ್ಯತ್ಯಾಸವೂ ಇರಲ್ಲ. ಹೊಸ ಬಸ್ ತರವೇ ಇರಲಿದೆ. ಅಲ್ಲದೇ ಈ ಬಸ್ ಅನ್ನು ಕಾಶ್ಮೀರಕ್ಕೆ ಕೂಡ ತೆಗೆದುಕೊಂಡು ಹೋಗುವಷ್ಟು ಸದೃಢವಾಗಿವೆ. ಹಾಗಾಗಿ ರಾಜ್ಯದ ಎಲ್ಲ ಕಡೆ ಈ ಬಸ್ಗಳು ಓಡಾಡಲಿವೆ. ಆದರೂ ಲೋಕಲ್ನಲ್ಲಿ ಹಳೆಯ ಬಸ್ ಬದಲು ಈ ಬಸ್ ಹಾಕಲಿದ್ದೇವೆ ಎಂದರು.
ಶಕ್ತಿ ಯೋಜನೆಯಿಂದಾಗಿ ಕೆಂಪುಬಣ್ಣದ (ವೇಗಧೂತ) ಬಸ್ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಉಚಿತ ಪ್ರಯಾಣ ಸೌಲಭ್ಯದ ಕಾರಣಕ್ಕಾಗಿ ಬಹುತೇಕ ಸಾಮಾನ್ಯ ಬಸ್ಗಳು ಪ್ರಯಾಣಿಕರಿಂದ ತುಂಬಿದ್ದು, ಹೆಚ್ಚುವರಿ ಬಸ್ಗಳ ವ್ಯವಸ್ಥೆಗೆ ಸಾರಿಗೆ ನಿಗಮ ಪ್ರಯಾಸಪಡುತ್ತಿದೆ. ಇದರ ನಡುವೆ ಗುಜರಿಗೆ ಹಳೆಯ ಬಸ್ ಹಾಕಿದರೆ, ಅದರ ಬದಲಿ ಹೊಸ ಬಸ್ಗಳ ಖರೀದಿಗೆ ಪ್ರತಿ ಬಸ್ ಗೆ 40 ಲಕ್ಷ ರೂ. ಬೇಕಾಗಲಿದೆ.
ಅಷ್ಟೊಂದು ಮೊತ್ತ ಭರಿಸುವ ಸ್ಥಿತಿಯಲ್ಲಿ ಸದ್ಯ ಕೆಎಸ್ಆರ್ಟಿಸಿ ಇಲ್ಲ. ಅಲ್ಲದೆ ಸರ್ಕಾರವೂ ಅದಕ್ಕೆ ಒಪ್ಪಿಗೆ ನೀಡುವುದು ಕಷ್ಟ. ಹಾಗಾಗಿ, ಹೊಸ ಬಸ್ಗಳು ಹಂತ ಹಂತವಾಗಿ ಜೋಡಣೆಯಾಗಲಿದ್ದು, ಅದಕ್ಕೆ ಪೂರಕವಾಗಿ ಗುಜರಿ ಸೇರಬೇಕಾದ ಬಸ್ಗಳೇ ಹೆಚ್ಚುವರಿಯಾಗಿ ಇನ್ನು ನಾಲ್ಕೈದು ವರ್ಷ ಸೇವೆ ನೀಡಿ ಕೆಎಸ್ಆರ್ಟಿಸಿ ಮೇಲಿನ ಹೊರೆ ಕಡಿಮೆ ಮಾಡಲಿವೆ. ಇದರಿಂದ ಸಂಸ್ಥೆ ಲಾಭದಾಯಕದತ್ತ ಮರಳಲು ಅನುಕೂಲವಾಗಲಿದೆ ಎನ್ನುವುದು ಸಾರಿಗೆ ಇಲಾಖೆ ಅಧಿಕಾರಿಗಳ ಲೆಕ್ಕಾಚಾರವಾಗಿದೆ.
ಒಟ್ಟಿನಲ್ಲಿ ಗುಜರಿ ಸೇರಬೇಕಿದ್ದ ಕೆಎಸ್ಆರ್ಟಿಸಿ ಬಸ್ಗಳು ನವೀಕರಣಗೊಂಡು ಮತ್ತೆ ರಸ್ತೆಗಿಳಿಯುವ ಮೂಲಕ ಶಕ್ತಿ ಯೋಜನೆಗೆ ಮತ್ತಷ್ಟು ಬಲ ನೀಡಲಿದ್ದು, ಆರ್ಥಿಕವಾಗಿಯೂ ಸಾರಿಗೆ ನಿಗಮಕ್ಕೆ ಶಕ್ತಿ ತುಂಬಲಿದೆ.
ಇದನ್ನೂ ಓದಿ : ಕೆಎಸ್ಆರ್ಟಿಸಿಗೆ ಮುಡಿಗೆ ’ಸಪ್ಲೈಚೈನ್ ಲೀಡರ್ ಶಿಪ್ -ಎಕ್ಸ್ಪ್ರೆಸ್ ಲಾಜಿಸ್ಟಿಕ್ ಪ್ರಶಸ್ತಿ