ಬೆಂಗಳೂರು : ನ್ಯಾಯಾಲಯ ಹಲವು ಬಾರಿ ಸಮನ್ಸ್ ಜಾರಿ ಮಾಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಬೆಂಗಳೂರಿನ 9ನೇ ಎಸಿಎಂಎಂ ಕೋರ್ಟ್ ಇದೀಗ 8ನೇ ಬಾರಿ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.
ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅನುಮತಿ ಇಲ್ಲದೇ ಹಾಡು ಬಳಸಿದ ವಿಚಾರಕ್ಕೆ ಸಂಬಂಧಿಸಿದಂತೆ ಲಹರಿ ಆಡಿಯೋ ಸಂಸ್ಥೆ ಕಾಪಿ ರೈಟ್ ಕಾಯ್ದೆಯಡಿ ನಟ ರಕ್ಷಿತ್ ಶೆಟ್ಟಿ, ಪರಮ್ವಾ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ 9ನೇ ಎಸಿಎಂಎಂ ಕೋರ್ಟ್ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಆರೋಪಿಗಳು ನ್ಯಾಯಾಲಯಕ್ಕೆ ನಿರಂತರ ಗೈರು ಹಾಜರಾದ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ. ಇದೀಗ 8ನೇ ಬಾರಿ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದ್ದು, ಜಯನಗರ ಠಾಣೆ ಪೊಲೀಸರು ನಟ, ಸಂಗೀತ ನಿರ್ದೇಶಕ ಹಾಗೂ ಪರಮ್ವಾ ಸ್ಟುಡಿಯೋ ಮಾಲೀಕರನ್ನು ಬಂಧಿಸಿ ಏಪ್ರಿಲ್ 27ರಂದು ಕೋರ್ಟ್ ಎದುರು ಹಾಜರುಪಡಿಸಬೇಕಿದೆ.
ಪ್ರಕರಣದ ಹಿನ್ನೆಲೆ :
2016 ಡಿಸೆಂಬರ್ 30ರಂದು ಬಿಡುಗಡೆಯಾಗಿದ್ದ ಕಿರಿಕ್ ಪಾರ್ಟಿ ಚಿತ್ರದಲ್ಲಿ ಶಾಂತಿ ಕ್ರಾಂತಿ ಚಿತ್ರದ "ಹೇ.. ಹೂ ಆರ್ ಯೂ" ಹಾಡನ್ನು ಲಹರಿ ಸಂಸ್ಥೆಯಿಂದ ಪೂರ್ವಾನುಮತಿ ಪಡೆಯದೇ ಬಳಸಲಾಗಿದೆ ಎಂದು ಆರೋಪಿಸಿ, ಚಿತ್ರದ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡಿಯೋ ವಿರುದ್ಧ ಲಹರಿ ಸಂಸ್ಥೆ ದೂರು ದಾಖಲಿಸಿದೆ. ಅದರಂತೆ, ಕಾಪಿ ರೈಟ್ಸ್ ಕಾಯ್ದೆಯ ಸೆಕ್ಷನ್ 63 (ಎ) ಹಾಗೂ 63 (ಬಿ) ಅಡಿ ಪ್ರಕರಣ ದಾಖಲಿಸಿದ್ದು, ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ನಟ, ಸಂಗೀತ ನಿರ್ದೇಶಕರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ: ಕನ್ನಡದ ಗಡಿ ದಾಟಿ ಹೊರಟ ಕನ್ನಡ ಚಿತ್ರ.. ಈ ಭಾಷೆಗೂ ರಿಮೇಕ್ ಆಗಲಿದೆ 'ಆಕ್ಟ್ 1978'!