ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರವೇ ಭೂಮಿಯನ್ನು ಸ್ವಾಧೀನಪಡಿಸಿ ಕೈಗಾರಿಕೋದ್ಯಮಿಗಳಿಗೆ ಹಂಚಿಕೆ ಮಾಡುತ್ತದೆ. ಆದರೆ ಕೈಗಾರಿಕಾ ಉದ್ದೇಶಕ್ಕಾಗಿ ಪಡೆಯುವ ಭೂಮಿಯನ್ನು ಹಲವರು ಅನ್ಯ ಉದ್ದೇಶಕ್ಕೆ ಬಳಸಿರುವ ಪ್ರಕರಣಗಳೂ ಹೆಚ್ಚಾಗಿದೆ. ಆದರೆ ಈ ಬಗ್ಗೆ ಸರ್ಕಾರ ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದೆ.
ಕೆಐಎಡಿಬಿ ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್ಎಸ್ಐಡಿಸಿ) ಕೈಗಾರಿಕೆಗಳ ಸ್ಥಾಪನೆಗಾಗಿ ಭೂಮಿಯನ್ನು ಕೈಗಾರಿಕೆಗಳಿಗೆ ನೀಡುತ್ತವೆ. ತಾವೇ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕೆ ಸ್ಥಾಪಿಸಲು ಭೂಮಿಯನ್ನು ಕೊಡಮಾಡುತ್ತವೆ. ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಕೆಐಎಡಿಬಿ ಹಾಗು ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿಗಾಗಿ ಕೆಎಸ್ಎಸ್ಐಡಿಸಿ ನಿವೇಶನಗಳನ್ನು ನೀಡುತ್ತವೆ. ಆ ಮೂಲಕ ರಾಜ್ಯದಲ್ಲಿ ಮೂಲಸೌಕರ್ಯಗಳೊಂದಿಗೆ ಭೂಮಿಯನ್ನು ಅಭಿವೃದ್ಧಿಪಡಿಸಿ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಆದರೆ ಹಲವರು ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿಯನ್ನು ಪಡೆದಿದ್ದರೂ, ಅದನ್ನು ಅನ್ಯ ಉದ್ದೇಶಕ್ಕೆ ಬಳಸಿರುವ ಪ್ರಕರಣಗಳೂ ಹೆಚ್ಚಾಗಿವೆ. ಇತ್ತ ಹಲವು ಉದ್ಯಮಿಗಳು ತಾವು ಪಡೆದ ಭೂಮಿಯಲ್ಲಿ ಉದ್ದೇಶಿತ ಉದ್ಯಮವನ್ನೇ ಸ್ಥಾಪಿಸಿಲ್ಲ. ಈ ಬಗ್ಗೆ ಸರ್ಕಾರ ಅಂತವರಿಗೆ ಕೇವಲ ನೋಟಿಸ್ ನೀಡಿ ಕೈತೊಳೆಯುತ್ತಿದೆಯೇ ಹೊರತು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ.ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡ ಭೂಮಿ:ಕಳೆದ 10 ವರ್ಷಗಳಲ್ಲಿ ಕೆಐಎಡಿಬಿ ವತಿಯಿಂದ ಒಟ್ಟು 61,687-17 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ಈ ಪೈಕಿ ಕೈಗಾರಿಕಾ ಪ್ರದೇಶಕ್ಕಾಗಿ 30,767-04 ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದ್ದರೆ, ಏಕಘಟಕ ಸಂಕೀರ್ಣಕ್ಕಾಗಿ 30,920-13 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ. ಇತ್ತ ಕೆಎಸ್ಎಸ್ಐಡಿಸಿ ಸಣ್ಣ ಕೈಗಾರಿಕೆಗಳಿಗಾಗಿ ರಾಜ್ಯದ ವಿವಿದೆಡೆ ಮೂಲಭೂತ ಸೌಕರ್ಯಗಳೊಂದಿಗೆ 188 ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಿದೆ. ಇವುಗಳಲ್ಲಿ 5630 ಕೈಗಾರಿಕಾ ಮಳಿಗೆಗಳನ್ನು ಉದ್ಯಮಿಗಳಿಗೆ ಹಂಚಿಕೆ ಮಾಡಲಾಗಿದೆ.ಅನ್ಯ ಉದ್ದೇಶಕ್ಕೆ ಬಳಸಿದ ನಿವೇಶನ ಎಷ್ಟು?:
ಕೆಎಸ್ಎಸ್ಐಡಿಸಿ ಹಂಚಿಕೆ ಮಾಡಿರುವ ನಿವೇಶನಗಳ ಪೈಕಿ 2,246 ನಿವೇಶನಗಳನ್ನು ಉದ್ದೇಶಿತ ಉದ್ಯಮಕ್ಕೆ ಬಳಸದೇ ಇರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಇನ್ನು ಒಟ್ಟು 192 ಉದ್ದಿಮೆದಾರರು ಅನ್ಯ ಉದ್ದೇಶಕ್ಕೆ ನಿವೇಶನಗಳನ್ನು ಬಳಕೆ ಮಾಡಿದ್ದಾರೆ. ಆ ಮೂಲಕ ನಿವೇಶನವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಕೈಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ನಿವೇಶನವನ್ನು ಉದ್ದೇಶಿತ ಉದ್ಯಮಕ್ಕೆ ಬಳಸದೇ ಇರುವ ಉದ್ದಿಮೆದಾರರಿಗೆ ಕೆಪಿಪಿ ಕಾಯ್ದೆ-1974ರ ಪ್ರಕಾರ ನೋಟಿಸ್ ಜಾರಿ ಮಾಡಲಾಗಿದೆ. ಅದೇ ರೀತಿ ಅನ್ಯ ಉದ್ದೇಶಕ್ಕೆ ಬಳಸಿದ 192 ಉದ್ಯಮಿಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇವಲ ನೋಟಿಸ್ಗೆ ಸೀಮಿತ, ಕ್ರಮ ಇಲ್ಲ:
ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರದಿಂದ ಮಂಜೂರಾಗಿರುವ ಭೂಮಿಯನ್ನು ದುರ್ಬಳಕೆ ಮಾಡಿಕೊಂಡಿದ್ದಲ್ಲಿ ಅಥವಾ ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳದಿದ್ದರೆ, ಆ ಭೂಮಿಯನ್ನು ವಾಪಾಸ್ ಪಡೆಯುವ ಪ್ರಕ್ರಿಯೆ ಆರಂಭಿಸಲಿದ್ದೇವೆ ಎಂದು ಪ್ರತಿ ಸರ್ಕಾರ ಹೇಳುತ್ತಲೇ ಬರುತ್ತಿದೆ . ಆದರೆ ಕಳೆದ ಎರಡು ಮೂರು ವರ್ಷಗಳಿಂದ ಕೈಗಾರಿಕಾ ಇಲಾಖೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ.
ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಅಥವಾ ಸರ್ಕಾರದಿಂದ ನೇರವಾಗಿ ಕೈಗಾರಿಕಾ ಉದ್ದೇಶಗಳಿಗೆ ಭೂಮಿಯನ್ನು ಪಡೆದು, ಅದನ್ನು ದುರ್ಬಳಕೆ ಮಾಡಿಕೊಂಡಿದ್ದರೆ ಅಥವಾ ಕೈಗಾರಿಕೆಯನ್ನು ಆರಂಭಿಸದೇ ಹಾಗೆಯೇ ಬಿಟ್ಟಿದ್ದರೂ, ಅಂತಹ ಭೂಮಿಗಳ ಸರ್ವೆ ನಡೆಸಿ ವಾಪಸ್ ಸರ್ಕಾರಕ್ಕೆ ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಆರಂಭಿಸಲಿದ್ದೇವೆ ಎಂದು ಹಲವು ಬಾರಿ ಹೇಳಿದ್ದಾರೆ.
ಆದರೆ ಈಗಾಗಲೇ ಬೆಳಕಿಗೆ ಬಂದಿರುವ ನಿಯಮ ಉಲ್ಲಂಘನೆ ಪ್ರಕರಣ ಸಂಬಂಧ ಉದ್ಯಮಿಗಳಿಗೆ ಕಳೆದ ಎರಡು ವರ್ಷದಿಂದ ನೋಟಿಸ್ ಜಾರಿಗೊಳಿಸಲಾಗುತ್ತಿದೆ. ಆದರೆ ಸರ್ಕಾರ ಬರೀ ನೋಟಿಸ್ ನೀಡುವುದರಲ್ಲೇ ಕಾಲಹರಣ ಮಾಡುವುದು ಬಿಟ್ಟರೆ ನಿವೇಶನ ವಾಪಸ್ ಪಡೆಯುವ ಬೇರೆ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗಿಲ್ಲ.