ಬೆಂಗಳೂರು: ನಿರ್ಭಯ ಸೇಫ್ ಸಿಟಿ ಪ್ರಾಜೆಕ್ಟ್ ಟೆಂಡರ್ ವಿವಾದ ಪ್ರಕರಣದಲ್ಲಿ ಎಸಿಎಸ್ ರಜನೀಶ್ ಗೋಯಲ್ ವಿರುದ್ಧವೇ ಡಿ. ರೂಪ ಆರೋಪಿಸಿ ಸಿಎಸ್ ವಿಜಯ್ ಭಾಸ್ಕರ್ಗೆ ಪತ್ರ ಬರೆದಿದ್ದು, ಸದ್ಯ ಐಪಿಎಸ್ ಅಧಿಕಾರಿಗಳ ನಡುವಿನ ರಂಪಾಟ ಐಎಎಸ್ ಅಧಿಕಾರಿ ಕಡೆಗೆ ತಿರುಗಿದಂತಾಗಿದೆ.
![Nirbhaya Safe City Project Tender Controversy: D. Roopa writes letter to CS](https://etvbharatimages.akamaized.net/etvbharat/prod-images/10057254_782_10057254_1609322526159.png)
![Nirbhaya Safe City Project Tender Controversy: D. Roopa writes letter to CS](https://etvbharatimages.akamaized.net/etvbharat/prod-images/10057254_1013_10057254_1609322542216.png)
ಡಿ. ರೂಪ ಅವರು ತಮ್ಮದೇ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರು ಹೇಮಂತ್ ನಿಂಬಾಳ್ಕರ್ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ, ಎಸಿಎಸ್ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಿಎಸ್ಗೆ ದೂರು ನೀಡಿದ್ದಾರೆ.
ಐಎಂಎ ಹಗರಣ ಆರೋಪಿಯನ್ನು ರಕ್ಷಿಸಲಾಗುತ್ತಿದೆ ಆದರೆ, ಈ ಸಂಬಂಧವೂ ರಜನೀಶ್ ಗೋಯಲ್ ನಿಂಬಾಳ್ಕರ್ ಅವರನ್ನು ಯಾವುದೇ ಪ್ರಶ್ನೆ ಮಾಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಪತ್ರದಲ್ಲಿ ಇನ್ನೂ ಏನೇನಿದೆ ಎಂಬುದರ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.
ಏನಿದು ಟೆಂಡರ್ ಪ್ರಕರಣ?:
ಸುಮಾರು 610 ಕೋಟಿ ರೂಪಾಯಿ ವೆಚ್ಚದ ನಿರ್ಭಯ ಸೇಫ್ ಸಿಟಿ ಪ್ರಾಜೆಕ್ಟ್ ಟೆಂಡರ್ ಯೋಜನೆ ಮೇಲೆ ಮೊದಲ ಬಿಡ್ ವೇಳೆ ಆಸಕ್ತಿ ತೋರದ ಕಂಪನಿಗಳು ಎರಡನೇ ಬಿಡ್ನಲ್ಲಿ ಮುಗಿಬಿದ್ದಿದ್ದವು. ಚೈನಾದ ಕೆಲ ಕಂಪನಿಗಳೊಂದಿಗೆ ಟೈ ಅಪ್ ಮಾಡ್ಕೊಂಡಿದ್ದ 3 ಕಂಪನಿಗಳು ಫೈನಲ್ ಆಗಿದ್ದವು. ಈ ಟೆಂಡರ್ ದಕ್ಕಿಸಿಕೊಳ್ಳಲು ಕೆಲ ಐಪಿಎಸ್ ಅಧಿಕಾರಿಗಳ ಹೆಸರನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅದರಲ್ಲಿ ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಯಾದ ಡಿ. ರೂಪಾ ಅವರ ಹೆಸರನ್ನು ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ಸಹ ಕೇಳಿಬಂದಿದೆ. ಗೃಹ ಇಲಾಖೆಯ ಕಾರ್ಯದರ್ಶಿ ಹೆಸರು ಹೇಳಿಕೊಂಡು ಮಹಿಳೆಯೊಬ್ಬರು ಕಾಲ್ ಮಾಡಿ ಟೆಂಡರ್ ಮಾಹಿತಿ ಕೇಳಿದ್ದಾರೆ ಎಂದು ಹೇಳಲಾಗಿದೆ.
ಟೆಂಡರ್ ದಾಖಲಾತಿಗಳನ್ನು ಸಿದ್ಧಪಡಿಸಲು ಹೊಣೆಗಾರಿಕೆ ಹೊತ್ತುಕೊಂಡಿರುವ ಅರ್ನಸ್ಟ್ ಯಂಗ್ ಸಮಾಲೋಚಕ ಕಂಪನಿಯ ಪಾಲುದಾರ ಅಕ್ಷಯ್ ಎಂಬುವರಿಗೆ ಕರ್ನಾಟಕದ ಗೃಹ ಕಾರ್ಯದರ್ಶಿ ಹೆಸರಿನಲ್ಲಿ ಕರೆ ಮಾಡಿದವರೊಬ್ಬರು ಟೆಂಡರ್ ಪ್ರಕ್ರಿಯೆಯ ದಾಖಲೆಗಳನ್ನು ತಮಗೆ ಕಳಿಸಬೇಕು ಎಂದು ಸೂಚಿಸಿದ್ದಾರೆ. ಈ ಕುರಿತು ಪಾಲುದಾರ ಅಕ್ಷಯ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಇ - ಮೇಲ್ ಮೂಲಕ ದೂರು ನೀಡಿದ್ದಾರೆ. ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಿರುವ ಬಗ್ಗೆ ತನಿಖೆ ಮಾಡಿ ಎಂದು ಅಪರ ಪೊಲೀಸ್ ಆಯುಕ್ತ(ಆಡಳಿತ) ನಿಂಬಾಳ್ಕರ್ ಮುಖ್ಯ ಕಾರ್ಯದರ್ಶಿಗೆ ಕೋರಿದ್ದರು.
ಇದಕ್ಕೂ ಮೊದಲು ಬೆಂಗಳೂರು ಸುರಕ್ಷಿತ ನಗರ ಕಾರ್ಯಕ್ರಮದ ಅಡಿ ಸಿಸಿಟಿವಿ ಅಳವಡಿಸಲು ಗುತ್ತಿಗೆ ಕರೆಯಲಾಗಿತ್ತು. ಮೊದಲಿಗೆ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್, ಲಾರ್ಸೆನ್ ಆಂಡ್ ಟೂಬ್ರೋ, ಮ್ಯಾಟ್ರಿಕ್ಸ್ ಸೆಕ್ಯುರಿಟಿ ಮತ್ತು ಸರ್ವೇಲೆನ್ಸ್ ಲಿಮಿಟೆಡ್, ಎನ್ಸಿಸಿ ಲಿಮಿಟೆಡ್ ಗುತ್ತಿಗೆದಾರರು ಭಾಗವಹಿಸಿದ್ದವು. ಆಗ ಟೆಂಡರ್ ಪ್ರಕ್ರಿಯೆ ಲೋಪದ ಬಗ್ಗೆ ಬಿಇಎಲ್ ಪ್ರಧಾನಿಯವರಿಗೆ ನೀಡಿದ ದೂರಿನಲ್ಲಿ ಮ್ಯಾಟ್ರಿಕ್ಸ್ ಸೆಕ್ಯುರಿಟಿ ಮತ್ತು ಸರ್ವೇಲೆನ್ಸ್ ಲಿಮಿಟೆಡ್ ಮತ್ತು ಎನ್ಸಿಸಿ ಲಿಮಿಟೆಡ್ ಕಂಪೆನಿಯ ನಿರ್ದೇಶಕ ಒಬ್ಬರೇ ಎಂದು ತಿಳಿದು ಬಂದಿದೆ. ಈ ಎರಡೂ ಕಂಪನಿಗಳು ಒಳ ಒಪ್ಪಂದ ಮಾಡಿಕೊಂಡಿರುವಂತೆ ಕಂಡು ಬಂದಿದ್ದು, ಈಗಾಗಲೇ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಈ ಕುರಿತು ಮಾಹಿತಿ ನೀಡಿ ಈ ಎರಡೂ ಕಂಪನಿಗಳನ್ನು ಟೆಂಡರ್ ಪ್ರಕ್ರಿಯೆಯಿಂದ ಹೊರಗಿಡಬೇಕು ಎಂದು ಕೇಳಿಕೊಂಡಿತ್ತು. ಈ ಸಂಬಂಧ ಆಧಾರ ಸಹಿತ ಪ್ರಧಾನಿ ಕಾರ್ಯಾಲಯವು ಮುಖ್ಯ ಕಾರ್ಯದರ್ಶಿ ಅವರಿಂದ ವರದಿ ಕೇಳಿತ್ತು. ಈ ಹಿನ್ನೆಲೆ ಗುತ್ತಿಗೆ ಪ್ರಕ್ರಿಯೆಯನ್ನು ವಜಾಗೊಳಿಸಲಾಗಿತ್ತು.