ಬೆಂಗಳೂರು: ನಗರದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಕನ್ನಡ ಭಾಷೆ ಕಾಣುವುದೇ ಕಷ್ಟವಾಗಿದೆ.
ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದ್ದು ಬೇರೆ-ಬೇರೆ ರಾಜ್ಯಗಳಿಂದ ಪ್ರತಿನಿಧಿಗಳು ಆಗಮಿಸಿರುವ ಹಿನ್ನೆಲೆ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಇವುಗಳ ನಡುವೆಯೂ ಅಲ್ಲಲ್ಲಿ ಒಂದೆರಡು ಕಡೆಗಳಲ್ಲಿ ಮಾತ್ರ ಕನ್ನಡ ಗೋಚರಿಸಿತು.
ಆಯೋಜಕರು ಎಲ್ಲಿಯೂ ಕನ್ನಡ ಬಳಕೆಯನ್ನು ಮಾಡುವ ಪ್ರಯತ್ನ ಮಾಡಿಲ್ಲ. ಸಮಾರಂಭದ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಅಳವಡಿಸಿದ್ದ ಕೆಲ ಬ್ಯಾನರ್ಗಳಲ್ಲಿ ಕನ್ನಡ ಗೋಚರಿಸುತ್ತಿದೆ. ಉಳಿದಂತೆ ಜಿಕೆವಿಕೆ ಪ್ರವೇಶ ದ್ವಾರದ ತಳಭಾಗದಲ್ಲಿ ದೊಡ್ಡ ಗಾತ್ರದಲ್ಲಿ 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶ ಎಂಬ ಕನ್ನಡ ಬರಹ ಕಾಣಸಿಗುತ್ತದೆ. ಇವೆರಡು ಸ್ಥಳ ಬಿಟ್ಟರೇ ವಸ್ತುಪ್ರದರ್ಶನ ಮಳಿಗೆ ಬಳಿ ಕರ್ನಾಟಕ ಎಂಬ ಒಂದು ಫಲಕ ಕನ್ನಡದಲ್ಲಿ ಗೋಚರಿಸುತ್ತದೆ. ಇದನ್ನು ಹೊರತುಪಡಿಸಿದರೆ ಎಲ್ಲಿಯೂ ಕನ್ನಡದ ಪದಗಳು ಕಾಣುವುದು ವಿರಳ. ಬಹುತೇಕ ಎಲ್ಲಾ ಕಡೆ ಇಂಗ್ಲಿಷ್ ಪದಗಳೇ ಬಳಕೆಯಾಗಿವೆ. ಹಿಂದಿ ಹಾಗೂ ಇತರೆ ಯಾವುದೇ ಪ್ರಾದೇಶಿಕ ಭಾಷೆಗಳು ಎಲ್ಲಿಯೂ ಕಂಡುಬರುತ್ತಿಲ್ಲ.
ಗಮನಸೆಳೆಯುತ್ತಿದೆ ಗುಳ್ಳೆ: ನಿನ್ನೆ ಹಾಗೂ ಇಂದು ಮಕ್ಕಳ ವಿಜ್ಞಾನ ಪ್ರದರ್ಶನ ಇದ್ದ ಹಿನ್ನೆಲೆ ಸಾವಿರಾರು ಮಕ್ಕಳು ಭೇಟಿಕೊಟ್ಟಿದ್ದರು. ಇವರ ಸಂತಸಕ್ಕಾಗಿ ಹಲವು ಆಕರ್ಷಣೆಗಳನ್ನು ಅಳವಡಿಸಲಾಗಿತ್ತು. ಇವುಗಳಲ್ಲಿ ಸೋಪಿನ ನೊರೆಯ ಮಾದರಿಯ ರಾಸಾಯನಿಕದ ಕೃತಕ ನೊರೆ ಗುಳ್ಳೆಗಳು ಅಪಾರವಾಗಿ ಮಕ್ಕಳನ್ನು ಸೆಳೆದವು. ವ್ಯಕ್ತಿಯೊಬ್ಬರು ಎರಡು ವಿಧದ ಜಾಲರಿ ಹಿಡಿದು ಗುಳ್ಳೆಗಳನ್ನು ಹಾರಿಸಿ ಮಕ್ಕಳ ಮನರಂಜನೆ ಮಾಡುತ್ತಿದ್ದದ್ದು ಎಲ್ಲರ ಗಮನ ಸೆಳೆಯಿತು.
ವಿಜ್ಞಾನ-ತಂತ್ರಜ್ಞಾನ ಮಳಿಗೆಯಲ್ಲಿ ಮರ: ಕೇಂದ್ರ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ತೆರೆದಿರುವ ಮಳಿಗೆಯಲ್ಲಿ ಸ್ಥಾಪಿಸಿರುವ ಮರ ಎಲ್ಲರ ಗಮನ ಸೆಳೆಯುತ್ತಿದೆ. ಇಲಾಖೆಯ ಸಾಧನೆಗಳನ್ನು ವಿವರಿಸುವ ಸಲುವಾಗಿ ಇಂಥದೊಂದು ವಿಶಿಷ್ಟ ಪ್ರಯತ್ನ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಮಕ್ಕಳ ಪಾಲಿಗೆ ಇದು ವಿಶೇಷವಾಗಿ ಗಮನ ಸೆಳೆಯುತ್ತಿದೆ.