ಬೆಂಗಳೂರು : ಪ್ರಿಯಕರನೊಂದಿಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದೆ ಎಂದು ಎರಡೂವರೆ ವರ್ಷದ ಮಗಳನ್ನು ದಾರುಣವಾಗಿ ಥಳಿಸಿ, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ತಾಯಿಗೆ ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ನಗರದ ಕೊಡಿಗೆಹಳ್ಳಿ ನಿವಾಸಿ ಜೀವಾವಧಿ ಶಿಕ್ಷೆಗೊಳಗಾದ ಮಹಿಳೆ. ಕ್ಯಾಬ್ ಡ್ರೈವರ್ ಆಗಿದ್ದ ಪತಿ ನವೀನ್ ಎಂಬಾತನನ್ನು 2016ರಲ್ಲಿ ತೊರೆದಿದ್ದ ಈಕೆ, ಕಾಲೇಜು ಸ್ನೇಹಿತನಾಗಿದ್ದ ಶರತ್ ಕುಮಾರ್ ಜೊತೆಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಳು. ಆದರೆ, ಈಕೆಯ ಅಕ್ರಮ ಸಂಬಂಧಕ್ಕೆ ಮಗಳು ಅಂಜನಾ ಅಡ್ಡಿಯಾಗಿದ್ದಳು. ಈ ಹಿನ್ನೆಲೆ 2017ರ ನವೆಂಬರ್ನಲ್ಲಿ ಮಗಳನ್ನು ಕೊಲ್ಲಲು ಮನೆಯ ಗೋಡೆಗೆ ಬಡಿದಿದ್ದಳು. ಥಳಿತದಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಮಗು ಪ್ರಜ್ಞಾಹೀನವಾಗಿಯೇ ಬದುಕುಳಿದಿತ್ತು.
ಮಗು ಕೊಲ್ಲಲೇಬೇಕೆಂದು ನಿರ್ಧರಿಸಿದ್ದ ತಾಯಿ ಪ್ರಜ್ಞಾಹೀನವಾಗಿದ್ದ ಮಗುವನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಳು. ನಂತರ ಮಗು ಮನೆಯ ಮಂಚದ ಮೇಲಿಂದ ಬಿದ್ದು ಸಾವನ್ನಪ್ಪಿತು ಎಂದು ನಂಬಿಸಲು ಪ್ರಯತ್ನಿಸಿದ್ದಳು. ಜತೆಗೆ ಪ್ರಿಯಕರನ ಜತೆ ಸೇರಿ ಕೊಲೆ ಮುಚ್ಚಿಡಲು ಯತ್ನಿಸಿದ್ದಳು. ಆದರೆ, ಆಕೆಯ ತಾಯಿಯೇ ಮಗಳ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣದ ಸಂಬಂಧ ತಾವರೆಕೆರೆ ಠಾಣೆ ಪೊಲೀಸರು ತನಿಖೆ ನಡೆಸಿದ್ದರು.
ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಿದಾಗ ಮಗುವಿನ ದೇಹದಲ್ಲಾಗಿದ್ದ ಗಾಯಗಳ ತೀವ್ರತೆ ಪರಿಶೀಲಿಸಿದ್ದ ವೈದ್ಯರು ಇದು ಮಂಚದ ಮೇಲಿಂದ ಬಿದ್ದು ಆಗಿರುವ ಸಾವಲ್ಲ. ಮಂಚದಿಂದ ಬಿದ್ದಾಗ ಹೀಗೆ ಗಾಯಗಳಾಗುವುದಿಲ್ಲ. ಮುಖ್ಯವಾಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ವರದಿ ನೀಡಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಳು.
ಆದರೆ, ನ್ಯಾಯಾಲಯದಲ್ಲಿ ಹೇಳಿಕೆ ಬದಲಿಸಿದ್ದ ಈಕೆ ಮಗು ಟೆರೇಸ್ ಮೇಲಿಂದ ಬಿದ್ದು ಸಾವನ್ನಪ್ಪಿತು ಎಂದು ಹೇಳಿಕೆ ನೀಡಿದ್ದಳು. ಘಟನೆಯನ್ನು ನ್ಯಾಯಾಲಯ ಮರು ಪರಿಶೀಲಿಸಿದಾಗ ಮಹಿಳೆ ವಾಸವಿದ್ದದ್ದು ಶೀಟ್ ಮನೆ ಎಂಬುದು ಸಾಬೀತಾಗಿತ್ತು. ಸಾಂದರ್ಭಿಕ ಸಾಕ್ಷ್ಯಗಳಿಂದ ಮಹಿಳೆಯೇ ತನ್ನ ಮಗು ಕೊಲೆ ಮಾಡಿರುವುದು ದೃಢಪಟ್ಟಿದ್ದರಿಂದ ನ್ಯಾಯಾಲಯ ಅಪರಾಧಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿಸಿದೆ.