ಬೆಂಗಳೂರು: ಜಗತ್ತಿನೊಂದಿಗೆ ಈ ಪ್ರತಿಭಾ ಕುಸುಮಗಳು ಇದ್ದರೂ ಅವರಿಗೆ ಜಗದ ಅರಿವಿಲ್ಲ. ಹಾಗಂತ ಇವರ ಬದುಕು ಎಂದೂ ಕತ್ತಲಲ್ಲಿ ಇರಲಿಲ್ಲ. ಆದರೆ, ರಾಜ್ಯಕ್ಕೆ ಕೊರೊನಾ ಕಾಲಿಟ್ಟಿದ್ದೇ ತಡ, ಅವರ ಬದುಕಿಗೆ ಮಂಕು ಕವಿಯಿತು. ಹೌದು, ಸ್ವಚ್ಛಂದ ಬದುಕು ಕಟ್ಟುಕೊಳ್ಳಬೇಕೆಂಬ ಅದೆಷ್ಟೋ ಎಳೆಯ ಕನಸುಗಳಿಗೆ ಹುಟ್ಟಿನೊಂದಿಗೆ ಶಾಪವೂ ಅಂಟಿಕೊಂಡಿರುತ್ತದೆ. ಆಡಿ ಬೆಳೆಯಬೇಕಾಗಿದ್ದ ಮಕ್ಕಳು ಯಾವುದೋ ಕಾರಣಕ್ಕೆ ನಮ್ಮಿಂದ ದೂರನೇ ಇರ್ತಾರೆ. ಅವರೇ ಬುದ್ಧಿಮಾಂದ್ಯ ವಿಶೇಷಚೇತನ ಮಕ್ಕಳು.
ಅವರ ಕೊರತೆಗಳನ್ನು ದೂರ ಮಾಡುತ್ತಿದ್ದ ಹಲವು ಸಂಸ್ಥೆಗಳೇ ಇದೀಗ ಕೊರೊನಾದಿಂದ ದೂರ ಉಳಿದಿವೆ. ಇತ್ತ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಶಿಕ್ಷಣ ಇಲಾಖೆ ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ, ಆನ್ಲೈನ್ ಶಿಕ್ಷಣ ವ್ಯವಸ್ಥೆ ನಡೆಸಲಾಗುತ್ತಿದೆ. ಸಾಮಾನ್ಯ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆದರೆ, ವಿಶೇಷ ಚೇತನ ಮಕ್ಕಳಿಗೆ ಕೈಕಟ್ಟಿದಂತೆ ಆಗಿದೆ. ಹಾಗೆಯೇ ನಿತ್ಯ ಮಾಡುತ್ತಿದ್ದ ಥೆರಪಿಗಳಿಂದ ವಂಚಿತರಾಗುತ್ತಿದ್ದಾರೆ.
![Nachikita Psychosis Center](https://etvbharatimages.akamaized.net/etvbharat/prod-images/kn-bng-3-disabilities-students-chairman-story-7201801_21072020152031_2107f_1595325031_4.jpg)
ಬೆಂಗಳೂರಿನ ವಿಜಯನಗರದ ನಚಿಕೇತ ಮನೋವಿಕಾಸ ಕೇಂದ್ರದ ಸ್ಥಾಪಕ ನರಸಿಂಹ ಶೆಣೈ ಅವರು ಹೇಳುವಾಗ ಹಾಗೆ, ವಿಶೇಷಚೇತನ ಮಕ್ಕಳು ಎಲ್ಲರಂತಲ್ಲ, ಸಾಮಾನ್ಯ ಮಕ್ಕಳಿಗೆ ಹೇಳಿದ ಕೂಡಲೇ ಗ್ರಹಿಸುವ ಶಕ್ತಿ ಇರುತ್ತದೆ. ಆದರೆ, ಈ ಮಕ್ಕಳು ಬಹುಬೇಗ ನೆನಪಿನ ಶಕ್ತಿ ಕಳೆದುಕೊಳ್ಳುತ್ತಾರೆ. ಕೊರೊನಾದ ಸಮಯದಲ್ಲಿ ಅವರನ್ನು ಕೇಂದ್ರಕ್ಕೆ ಬರಮಾಡಿಕೊಂಡು ನಿತ್ಯ ಮಾಡಿಸುವ ಅಭ್ಯಾಸವನ್ನು ಮಾಡಿಸುವುದು ಕಷ್ಟ. ಸಂಕಷ್ಟದ ಈ ಕಾಲದಲ್ಲಿ ಪೋಷಕರ ಕಷ್ಟ ಅಷ್ಟಿಷ್ಟಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
![Nachikita Psychosis Center](https://etvbharatimages.akamaized.net/etvbharat/prod-images/kn-bng-3-disabilities-students-chairman-story-7201801_21072020152031_2107f_1595325031_1073.jpg)
ವಾಟ್ಸ್ಆ್ಯಪ್ ಗ್ರೂಪ್ ರಚನೆ:
ಕೊರೊನಾದ ಈ ಸಮಯದಲ್ಲಿ ಬುದ್ಧಿಮಾಂದ್ಯ ಮಕ್ಕಳನ್ನು ಕರೆಸುವುದು, ಮಾಸ್ಕ್ ಹಾಕಿಸಿ ಚಟುವಟಿಕೆಗಳನ್ನು ಮಾಡಿಸುವುದು ಬಹಳ ಕಷ್ಟ. ಏಕೆಂದರೆ ಅವರಿಗೆ ಹಿಡಿತ ಇರುವುದಿಲ್ಲ. ಬಾಯಿಂದ ಜೊಲ್ಲು ಸುರಿಸುತ್ತಲೇ ಇರುವಾಗ ಅವರನ್ನ ನಿಯಂತ್ರಿಸುವುದೇ ಸಾಹಸವಾಗುತ್ತದೆ. ಹೀಗಾಗಿ, ಪೋಷಕರೆಲ್ಲ ಇರುವ ವಾಟ್ಸ್ಆ್ಯಪ್ ಗ್ರೂಪ್ ರಚಿಸಿಕೊಂಡಿದ್ದು, ನಿತ್ಯ ಒಂದೊಂದು ಚಟುವಟಿಕೆಗಳನ್ನು ಮಾಡಿಸುತ್ತಿದ್ದೇವೆ ಎನ್ನುತ್ತಾರೆ ನರಸಿಂಹ ಶೆಣೈ.
ಪೋಷಕರೇ ಈಗ ಗುರುಗಳಾಗಿದ್ದು, ಮನೆಯಲ್ಲೇ ವಿಶೇಷಚೇತನ ಮಕ್ಕಳಿಗೆ ತರಕಾರಿ ಗುರುತಿಸುವುದನ್ನ ಹೇಳಿಕೊಡುವುದು,ದೈಹಿಕವಾಗಿ ಬಲಿಷ್ಠರಾಗಲು ಮೆಟ್ಟಲು ಹತ್ತಿ-ಇಳಿಯುವುದು, ನೃತ್ಯ ಮಾಡಿಸುವುದು ಸೇರಿದಂತೆ ಮ್ಯೂಸಿಕ್ ಥೆರಪಿ ಮೂಲಕ ಅವರನ್ನ ಉತ್ಸಾಹದಲ್ಲಿ ಇರುವಂತೆ ಮಾಡಲಾಗುತ್ತಿದೆ ಎನ್ನುತ್ತಾರೆ ಅವರು.
ಸ್ವಾವಲಂಬಿ ಬದುಕಿಗೂ ಕೊರೊನಾ ಅಡ್ಡಗಾಲು:
ಈ ಕೇಂದ್ರದಲ್ಲಿ ವಿಶೇಷಚೇತನ ಮಕ್ಕಳೇ ಬಟ್ಟೆ ಬ್ಯಾಗ್ ಹೊಲಿಯುವುದನ್ನು ಕಲಿತಿದ್ದು, ಹೊಲಿದಿರುವ ಬಟ್ಟೆಗಳನ್ನು ಮಾರಾಟ ಕೂಡ ಮಾಡಲಾಗುತ್ತಿದೆ. ಆದರೆ, ಲಾಕ್ಡೌನ್ನಿಂದಾಗಿ ಇದು ಅರ್ಧಕ್ಕೆ ನಿಂತಿದೆ. ಹೀಗಾಗಿ, ಅದನ್ನು ಮುಂದುವರೆಸಲು ಇಬ್ಬರು ವಿಶೇಷಚೇತನರಿಗೆ ಹೊಲಿಗೆ ಯಂತ್ರವನ್ನು ಅವರ ಮನೆಗೆ ತಲುಪಿಸಲು ಯೋಜಿಸಲಾಗಿದೆ. ಅದಕ್ಕಾಗಿ ದಾನಿಗಳು ಒಪ್ಪಿಗೆ ಸೂಚಿಸಿದ್ದಾರೆ. ಕಮರಿ ಹೋಗುತ್ತಿದ್ದ ಬದುಕಿಗೆ ಮತ್ತೆ ಆಸರೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರತಿ ಕನಸು ಇಲ್ಲಿ ನನಸಾಗುವ ಒಳ್ಳೆ ಕಾಲ ಮುಂದೆ ಇದೆ ಎಂಬುದು ಇವರ ನಂಬಿಕೆ. ಇಂತಹ ವಿಶೇಷಚೇತನರಿಗೆ ನಮ್ಮಿಂದ ಬೇಕಾಗಿರೋದು ಒಂದಿಷ್ಟು ಹಾರೈಕೆ ಅಷ್ಟೇ. ಎಲ್ಲರಂತೆ ಇವರಿಗೂ ಪ್ರೀತಿ-ವಿಶ್ವಾಸ ಮನ್ನಣೆ ಸಿಕ್ಕಿದರೆ ಅದೇ ಇವರಿಗೆ ಆನೆ ಬಲ.