ಬೆಂಗಳೂರು: ಇಂದು ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನದಲ್ಲಿ ಪೌರಕಾರ್ಮಿಕರೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಲಾಯಿತು.
ವರ್ಷವಿಡಿ ನಗರದ ಸ್ವಚ್ಛತೆಯಲ್ಲಿ ತೊಡಗುವ, ಸ್ವಚ್ಛ - ಸುಂದರ ಬೆಂಗಳೂರು ನಗರ ನಿರ್ಮಾಣ ಮಾಡಲು ಅವಿರತವಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಸಮಗ್ರ ಅಭಿವೃದ್ಧಿ ಸಂಸ್ಥೆಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಳ್ಳು, ಬೆಲ್ಲ, ಕಬ್ಬು, ಉಡುಪುಗಳನ್ನ ನೀಡಿ ಸತ್ಕರಿಸಲಾಯಿತು. ಪೌರಕಾರ್ಮಿಕರೊಂದಿಗೆ ಸಂಕ್ರಾಂತಿ ಆಚರಿಸುವುದರ ಜೊತೆಗೆ ಗೋವುಗಳನ್ನು ಸಿಂಗರಿಸಿ, ಪೂಜೆ ಮಾಡಿ ಎಳ್ಳು - ಬೆಲ್ಲದ ಜೊತೆಗೆ ಪೊಂಗಲ್ ಹಂಚಿ ಸಂಭ್ರಮಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕಿ ಸೌಮ್ಯ ರೆಡ್ಡಿ ಪೌರಕಾರ್ಮಿಕರು ಕೊರೊನಾ ಸೋಂಕು ಲೆಕ್ಕಿಸದೇ ನಗರದ ಸ್ವಚ್ಛತೆಗೆ ಶ್ರಮಿಸಿದವರು ನಿಜವಾದ ಸೇನಾನಿಗಳು ಹಬ್ಬಗಳನ್ನು ಆಚರಿಸಿದರೆ ಹಬ್ಬಕ್ಕೆ ಮತ್ತಷ್ಟು ಮೆರಗು. ಈ ವರ್ಷ ಕೊರೊನಾದಿಂದ ಮುಕ್ತವಾಗಿ ಸಂತಸದ ಬದುಕು ಸಾಗಲಿ ಎಂದು ಹಾರೈಸಿದರು.
ರಾಜ್ಯ ಸರ್ಕಾರ ಗೋ ಹತ್ಯೆ ಕಾನೂನು ಜಾರಿಗೆ ತಂದ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿದ ಸಂಘಟನಾಕಾರರು ಗೋವುಗಳ ಸಂತತಿ ಹೆಚ್ಚಲಿ ಎಂದು ಆಶಿಸಿದರು. ಈ ಸಂಭ್ರಮದಲ್ಲಿ ಮುಖ್ಯ ಅಥಿತಿಯಾಗಿ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಎನ್ ನಾಗರಾಜ್ ಉಪಸ್ಥಿತರಿದ್ದರು.