ಬೆಂಗಳೂರು: ಈ ಅಧಿವೇಶನ ಮುಗಿಯುವುದರೊಳಗೆ ನನ್ನ ಮುಂದಿನ ನಡೆಯ ಬಗ್ಗೆ ಒಂದು ತೀರ್ಮಾನ ಕೈಗೊಳ್ಳುತ್ತೇನೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ಪ್ರತಿಕ್ರಿಯಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ನನಗೆ ಹೇಳದೆ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಫೆ.12 ರಂದು ಸಮಾವೇಶ ಮಾಡ್ತಿದ್ದಾರೆ. ಆ ಸಭೆಯಲ್ಲಿ ಏನಾಗುತ್ತೋ ಅದರ ಆಧಾರದಲ್ಲಿ ನಾನು ಕಾರ್ಯಕರ್ತರ ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬರುತ್ತೇನೆ. ಈ ಅಧಿವೇಶನ ಮುಗಿಯುವುದರೊಳಗೆ ಅಂತಿಮ ನಿರ್ಧಾರ ಘೋಷಿಸುತ್ತೇನೆ ಎಂದರು.
ನಾನೀಗ ಯಾವ ನಿರ್ಧಾರವನ್ನೂ ಮಾಡಿಲ್ಲ. ಅಲ್ಲಿ ಜನ ಏನು ಹೇಳ್ತಾರೋ ಅದರಂತೆ ಮಾಡ್ತೇನೆ. ಅವರು ಹೇಳದೇ ನಾನು ಯಾವ ನಿರ್ಧಾರವನ್ನೂ ಮಾಡಲ್ಲ ಎಂದು ಸ್ಪಷ್ಟಪಡಿಸಿದರು. ಅರಸೀಕೆರೆ ಕ್ಷೇತ್ರದಲ್ಲಿ ಸಮಾವೇಶ ನಡೆಸ್ತಿದ್ದಾರೆ. ನಾನು ಕ್ಷೇತ್ರದ ಶಾಸಕ. ನಾನು ಮೊದಲು ಸಮಾವೇಶ ಮಾಡಬೇಕಿತ್ತು. ಒಬ್ಬ ವ್ಯಕ್ತಿ ನನಗೆ ಟಿಕೆಟ್ ನೀಡುವುದಾಗಿ ಹೇಳ್ತಾ ಓಡಾಡ್ತಿದ್ದಾರೆ. ಇದನ್ನು ನೋಡಿದರೆ ನಾಮಕಾವಸ್ತೆಗೆ ಕರೆಯುತ್ತಿದ್ದಾರೆ ಅನ್ನಿಸುತ್ತೆ. ಮಾತಿಗೆ ಮಾತ್ರ ಜೆಡಿಎಸ್ನಲ್ಲೇ ಉಳಿಯಿರಿ ಅಂತಾರೆ. ಕೊನೆ ಘಳಿಗೆಯಲ್ಲಿ ಏನಾದ್ರೂ ಯಡವಟ್ಟಾದ್ರೆ ಹೇಗೆ? ಎಂದು ಹೇಳಿದರು.
ಬಿಜೆಪಿ ಸೇರಲ್ಲ: ನಾನು ಬಿಜೆಪಿ ಸೇರುವುದಿಲ್ಲ ಎಂದು ಶಿವಲಿಂಗೇ ಗೌಡ ಸ್ಪಷ್ಟಪಡಿಸಿದರು. ಇನ್ನೂ ಜೆಡಿಎಸ್ನಲ್ಲೇ ಇದ್ದೇನೆ. ಯಾವುದೋ ಒಂದು ಘಟನೆ ನಡೆಯಿತು. ಆ ಘಟನೆ ಆದಾಗಿನಿಂದ ನಾನು ಸೈಲೆಂಟಾಗಿದ್ದೇನೆ. ಇದು ನಮ್ಮ ವರಿಷ್ಠರಿಗೂ ಗೊತ್ತಿದೆ. ನನ್ನನ್ನು ಬಿಟ್ಟು ಸಮಾವೇಶ ಮಾಡ್ತಿದ್ದಾರೆ. ಇವರು ಸಮಾವೇಶ ಮಾಡಲಿ. ನಾನು ಮತದಾರರ ನಿರ್ಧಾರದ ಮೇಲೆ ಇದ್ದೇನೆ. ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧನಲ್ಲ. ಕ್ಷೇತ್ರದ ಮತದಾರರ ನಿರ್ಧಾರಕ್ಕೆ ಬದ್ಧನಾದವನು ಎಂದು ತಿಳಿಸಿದರು.
ಶಿವಲಿಂಗೇಗೌಡ ಕಾಂಗ್ರೆಸ್ ಸೇರುವ ಬಗ್ಗೆ ಈಗಾಗಲೇ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ. ಆದರೆ, ಅವರು ಜೆಡಿಎಸ್ನಲ್ಲೇ ಉಳಿಯಲಿದ್ದಾರೆ ಎಂದು ಹೆಚ್.ಡಿ.ರೇವಣ್ಣ ತಿಳಿಸಿದ್ದರು. ಈ ನಡುವೆ ಶಿವಲಿಂಗೇ ಗೌಡರ ನಡೆ ನಿಗೂಢವಾಗಿ ಉಳಿದಿದೆ. ಮೂಲಗಳ ಪ್ರಕಾರ, ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ: ಸಾಹುಕಾರ್ನಾದರು ಇಟ್ಟುಕೊಳ್ಳಲಿ, ಸಾವರ್ಕರ್ನಾದರೂ ಇಟ್ಟುಕೊಳ್ಳಲಿ: ಕಟೀಲ್ ವಿರುದ್ಧ ಡಿಕೆಶಿ ವಾಗ್ದಾಳಿ