ಬೆಂಗಳೂರು: ಮಾನವ ಕಳ್ಳ ಸಾಗಾಣಿಕೆಯು ಇತ್ತೀಚಿನ ದಿನಗಳಲ್ಲಿ ಮಿತಿಮೀರಿ ನಡೆಯುತ್ತಿದ್ದು, ಅಪ್ರಾಪ್ತರು, ಮಹಿಳೆಯರು ಮತ್ತು ಯುವಕರು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ದುರ್ಬಲರಾಗಿದ್ದು, ಅವರು ಮೋಸದ ಬಲೆಗೆ ಸುಲಭವಾಗಿ ಬೀಳುತ್ತಿದ್ದಾರೆ.
ಮಾನವ ಕಳ್ಳ ಸಾಗಾಣಿಕೆಯು ದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಮಕ್ಕಳು ಮತ್ತು ಮಹಿಳೆಯರನ್ನು ಅಪಹರಿಸಿ ಕಾನೂನು ಬಾಹಿರ ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ದೂಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 108 ಮಹಿಳೆಯರು ಹಾಗೂ 220 ಮಕ್ಕಳು ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿದ್ದು, ಇವರನ್ನು ಪತ್ತೆ ಹಚ್ಚುವುದು ಒಂದು ದೊಡ್ಡ ಸವಾಲಾಗಿದೆ ಎಂದು ತನಿಖಾಧಿಕಾರಿಗಳು ಹೇಳ್ತಿದ್ದಾರೆ.
ನಮ್ಮ ರಾಜ್ಯದಲ್ಲಿ ಮಾನವ ಕಳ್ಳಸಾಗಾಣಿಕೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ವೇಶ್ಯಾವಾಟಿಕೆ ದಂಧೆಗಾಗಿ ಮಹಿಳೆಯರು ಹಾಗೂ ಮಕ್ಕಳನ್ನು ಅಪಹರಿಸಲಾಗುತ್ತಿದೆ. ಇಂತಹ ಪ್ರಕರಣಗಳು ನಡೆದರೂ, ಕೆಲವರು ನಾಪತ್ತೆಯಾಗಿದ್ದಾರೆ ಎಂದು ಹುಡುಕಾಟ ಮಾಡಲು ಶುರು ಮಾಡ್ತಾರೆ. ಆದರೆ ಮಾನವ ಕಳ್ಳಸಾಗಾಣಿಗೆ ಜಾಲಕ್ಕೆ ಸಿಲುಕಿ ನಾಪತ್ತೆಯಾಗಿ ಹೋದವರು, ಎಲ್ಲಿದ್ದಾರೆ ಅನ್ನುವುದು ಗೊತ್ತಾಗಲ್ಲ. ರಕ್ಕಸರ ಕೈಗೆ ಸಿಕ್ಕಿ ಅವರು ಒದ್ದಾಡುತ್ತಿರುತ್ತಾರೆ.
ಇನ್ನು 2020 ರಲ್ಲಿ ಮಾನವ ಕಳ್ಳ ಸಾಗಾಣಿಕೆಗೆ ಸಂಬಂಧಿಸಿದಂತೆ, 43 ಪ್ರಕರಣಗಳನ್ನು ದಾಖಲಿಸಿ 112 ಮಹಿಳೆಯರು ಹಾಗೂ ಎರಡು ಪುಟ್ಟ ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 114 ಜೀವಗಳನ್ನು ರಕ್ಷಣೆ ಮಾಡಲಾಗಿದೆ. 87 ಪುರುಷರು ಹಾಗೂ 39 ಮಹಿಳೆಯರು ಸೇರಿ ಒಟ್ಟು 117 ಜನರನ್ನು ಬಂಧಿಸಲಾಗಿದೆ. ಇನ್ನು 5 ಬಾಲ ಕಾರ್ಮಿಕ ಪ್ರಕರಣಗಳು ದಾಖಲಾಗಿದ್ದು, 6 ಜನರನ್ನ ಬಂಧಿಸಲಾಗಿದೆ.
ಮುಂಜಾಗೃತ ಕ್ರಮವಾಗಿ ಮಾನವ ಕಳ್ಳ ಸಾಗಾಣೆ ನಿಷೇಧ ಮತ್ತು ತಡೆ ಕಾಯ್ದೆಗೆ ಸಂಬಂಧಿಸಿದಂತೆ, ಇಲ್ಲಿಯವರೆಗೆ 65 ಪ್ರಕರಣ ದಾಖಲಾಗಿದ್ದು 100 ಪುರುಷರು, 196 ಮಹಿಳೆಯರು, 21 ಅಪ್ರಾಪ್ತ ಬಾಲಕರು, 34 ಅಪ್ರಾಪ್ತ ಬಾಲಕಿಯರು ಸೇರಿ ಒಟ್ಟು 345 ಜನರನ್ನು ರಕ್ಷಣೆ ಮಾಡಲಾಗಿದೆ. ಹೀಗೆ ಮಾನವ ಕಳ್ಳಸಾಗಾಣಿಕೆ ಮಾಡುತ್ತಿದ್ದ 147 ಜನರನ್ನ ಬಂಧಿಸಲಾಗಿದ್ದು, ಇದರಲ್ಲಿ 111 ಪುರುಷರು ಹಾಗೂ 36 ಮಹಿಳೆಯರು ಇದ್ದಾರೆ.
ಇನ್ನು ಇದರ ಜೊತೆಗೆ ನಾಪತ್ತೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಹೆತ್ತವರು ಮಕ್ಕಳಿಗೆ ಬೈಯುವುದು, ಪ್ರೀತಿಗಾಗಿ ಮನೆ ಬಿಟ್ಟು ಹೋಗುವುದು, ಸಾಲ ಮಾಡಿ ಹೋಗುವುದು ಹಾಗೂ ಇನ್ನು ಕೆಲ ವೈಯಕ್ತಿಕ ಕಾರಣಗಳಿಂದ ನಾಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ.