ಬೆಂಗಳೂರು: ವಿರಾಮದ ವೇಳೆ ಚೌಕಾಬಾರ ಆಡುತ್ತಿದ್ದ ಸರ್ಕಾರಿ ಅಧಿಕಾರಿಗಳ ಕಾರು ಚಾಲಕರ ಕೈಗೆ ದಿನಪತ್ರಿಕೆ ನೀಡಲಾಗುತ್ತಿದೆ. ವಿವಿಧ ಇಲಾಖೆಗಳ ಕಚೇರಿಗಳು, ನಿರ್ದೇಶನಾಲಯಗಳು ಅಕಾಡೆಮಿಗಳಿಂದ ಕೂಡಿರುವ ನಗರದ ಅಂಬೇಡ್ಕರ್ ಬೀದಿಯ ವಿಶ್ವೇಶ್ವರಯ್ಯ ಟವರ್ಸ್ ಬಳಿ ಕಾರು ಚಾಲಕರು ಪ್ರತಿನಿತ್ಯ ಚೌಕಾಬಾರ ಆಡುತ್ತಿದ್ದರು.
ಇದನ್ನು ಗಮಿಸಿದ ಸಚಿವ ಸುರೇಶ್ ಕುಮಾರ್ ಗ್ರಂಥಾಲಯಯ ಇಲಾಖೆಯ ನೆರವಿನೊಂದಿಗೆ ಅವರಿಗೆ ಪತ್ರಿಕೆಗಳನ್ನು ನೀಡುವ ಕಾರ್ಯ ಮಾಡಲಾಗಿದೆ. ಇತ್ತೀಚಿಗೆ ವಿಶ್ವೇಶ್ವರಯ್ಯ ಟವರ್ಸ್ನ 4ನೇ ಮಹಡಿಯಲ್ಲಿರುವ ಗ್ರಂಥಾಲಯ ಇಲಾಖೆ ಕಚೇರಿಯಲ್ಲಿನ ಸಭೆಗೆ ಪ್ರಾಥಮಿಕ ಸುರೇಶ್ ಕುಮಾರ್ ಭೇಟಿ ನೀಡಿದರು.
![Minister Suresh kumar delivers news paper for Car drivers](https://etvbharatimages.akamaized.net/etvbharat/prod-images/kn-bng-1-sureshkumar-paper-dirver-script-7201801_16092020154622_1609f_1600251382_106.jpg)
ಸಭೆ ಮುಗಿಸಿ ಹೊರಬಂದು ಕಾರಿನಲ್ಲಿ ತೆರಳುವ ವೇಳೆ ಹತ್ತಾರು ಮಂದಿ ಗುಂಪುಗೂಡಿದ್ದನ್ನು ನೋಡಿ ಕಾರಿನಿಂದ ಇಳಿದು ಹತ್ತಿರಕ್ಕೆ ಬಂದು ನೋಡಿದರು. ಆಗ ಕಾರು ಚಾಲಕರೆಲ್ಲ ಚೌಕಾಬಾರ ಆಡುವುದರಲ್ಲಿ ತೊಡಗಿದ್ದರು. ಕಾರು ಚಾಲಕರು ಚೌಕಾಬಾರ ಆಡುವುದನ್ನು ಗಮನಿಸಿ, ಗ್ರಂಥಾಲಯ ಇಲಾಖೆ ನಿರ್ದೇಶಕರನ್ನು ಕರೆದು, ಚಾಲಕರಿಗೆ ವಿರಾಮ ದೊರೆತಾಗ ಓದಲು ಅನುಕೂಲವಾಗುವಂತೆ ಈ ಸ್ಥಳಕ್ಕೆ ಪತ್ರಿಕೆಗಳನ್ನು ಪೂರೈಸಲು ಸೂಚಿಸಿದರು.
ಸಚಿವರ ನಿರ್ದೇಶನದಂತೆ ಗ್ರಂಥಾಲಯ ಇಲಾಖೆ ನಿರ್ದೇಶಕರು, ಚಾಲಕರು ಚೌಕಾಬಾರ ಆಡುತ್ತಿದ್ದ ಸ್ಥಳಕ್ಕೆ ಪತ್ರಿಕೆಗಳನ್ನು ಪೂರೈಸಿದ್ದು, ಚಾಲಕರೆಲ್ಲ ಚೌಕಾಬಾರ ಆಟದ ಬದಲಿಗೆ ಪತ್ರಿಕೆ ಓದುವುದರಲ್ಲಿ ಇದೀಗ ಮಗ್ನರಾಗಿದ್ದರು. ಈಗ ಚೌಕಾಬಾರ ಆಡುವ ಸ್ಥಳ ವಾಚನಾಲಯವಾಗಿ ಮಾರ್ಪಟ್ಟಿದೆ ಎಂದು ಚಾಲಕರು ಖುಷಿ ವ್ಯಕ್ತಪಡಿಸಿದ್ದಾರೆ.