ಬೆಂಗಳೂರು : ಕೃಷಿ ಸಚಿವ ಬಿ.ಸಿ. ಪಾಟೀಲ್ ಇಂದು ಬೆಂಗಳೂರು ಜಿಕೆವಿಕೆಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿನಿ ನಿಲಯದಲ್ಲಿನ ಕೋವಿಡ್ ಆರೈಕೆ ಕೇಂದ್ರ ಪರಿಶೀಲಿಸಿದರು.
ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಪಸರಿಸುತ್ತಿದೆ. ಇದನ್ನು ನಿಯಂತ್ರಿಸಲು ಸರ್ಕಾರ ತನ್ನೆಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ. ಬಿಬಿಎಂಪಿಯ ಕೋರಿಕೆ ಮೇರೆಗೆ ಯಲಹಂಕ ವಲಯದಿಂದ ಕೋವಿಡ್-19 ಆರೈಕೆ ಕೇಂದ್ರವನ್ನು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನಿಲಯದ ಕಟ್ಟಡದಲ್ಲಿ ಸ್ಥಾಪಿಸಲಾಗಿದೆ. ಕಟ್ಟಡವನ್ನು ಕೃಷಿ ಸಚಿವರ ಸೂಚನೆ ಮೇರೆಗೆ ಪಾಲಿಕೆಯ ಯಲಹಂಕ ವಲಯಕ್ಕೆ ಹಸ್ತಾಂತರಿಸಲಾಗಿದೆ.
380 ಹಾಸಿಗೆ ಸಾಮರ್ಥ್ಯವುಳ್ಳ ಕೋವಿಡ್ ಆರೈಕೆ ಕೇಂದ್ರ ಇದಾಗಿದ್ದು, ಇನ್ನು 30 ಹಾಸಿಗೆ ಸಾಮರ್ಥ್ಯವುಳ್ಳ "ಇಂಟರ್ನ್ಯಾಷನಲ್ ಸ್ಟಾಫ್ ಕ್ವಾರ್ಟಸ್"ನ ವೈದ್ಯಕೀಯ ಸಿಬ್ಬಂದಿಗಾಗಿ ಮೀಸಲಿಡಲಾಗಿದೆ. ಕಳೆದ ಬಾರಿಯೂ ಸಹ ಬೆಂಗಳೂರು ಜಿಕೆವಿಕೆಯಲ್ಲಿ ಕೋವಿಡ್ ಆರೈಕೆಗಾಗಿ ವಿದ್ಯಾರ್ಥಿನಿ ನಿಲಯವನ್ನು ನೀಡಲಾಗಿತ್ತು.
ಇದನ್ನೂ ಓದಿ: ಸೀಜ್ ಮಾಡಿದ ಬೈಕ್ಗಳಿಂದಲೇ ಭರ್ತಿಯಾಗಿವೆ ಹುಬ್ಬಳ್ಳಿ ಪೊಲೀಸ್ ಠಾಣೆಗಳ ಆವರಣ!
ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿದ ಬಿ.ಸಿ. ಪಾಟೀಲ್, ಅಲ್ಲಿನ ಸೌಲಭ್ಯಗಳು ಹಾಗೂ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಕುರಿತು ಪರಿಶೀಲಿಸಿದರು. ಕೋವಿಡ್ ನಿಯಂತ್ರಿಸಲು ಸಾಮಾಜಿಕ ಕಳಕಳಿಯ ಜತೆಗೆ ವೈಯಕ್ತಿಕ ಸ್ವಚ್ಛತೆ, ಸಾಮಾಜಿಕ ಅಂತರ ಹಾಗೂ ಜಾಗೃತಿ ಮುಖ್ಯವಾಗಿದೆ.
ಕೋವಿಡ್ ಬಂದಾಕ್ಷಣ ಆತಂಕಕ್ಕೆ ಒಳಗಾಗದೇ ಮನೋಸ್ಥೈರ್ಯ ತಂದುಕೊಳ್ಳಬೇಕು. ಇತ್ತೀಚೆಗೆ ಆತಂಕದಿಂದಲೇ ಹೆಚ್ಚಿನ ಅನಾಹುತಗಳು ಸಂಭವಿಸುತ್ತಿವೆ. ಹೀಗಾಗಿ ಯಾರೂ ಆತಂಕ ಪಡಬಾರದು. ತಮ್ಮ-ತಮ್ಮ ವ್ಯಾಪ್ತಿಯಲ್ಲಿನ ವಾರ್ ರೂಮ್ ಕಾಲ್ ಸೆಂಟರ್ ಸಂಪರ್ಕಿಸಿ ಮಾಹಿತಿ ಪಡೆದು ಸರ್ಕಾರದ ಸೂಚನೆಯನುಸಾರ ನಿಯಮ ಪಾಲಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.