ಬೆಂಗಳೂರು: ಉತ್ತರ ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧ ಕೇಂದ್ರದ ಸಹಕಾರದೊಂದಿಗೆ ಹೆಚ್ಚಿನ ಹಣಕಾಸು ನೆರವು ತರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದನ್ನು ಸ್ವಾಗತ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೂ ಅನುದಾನ ತರುವುದಾಗಿ ಸಿಎಂ ಸದನದಲ್ಲಿ ಹೇಳಿದ್ದಾರೆ. ಕಾವೇರಿ, ಕೃಷ್ಣೆ ಎರಡು ಕಣ್ಣುಗಳು ಎಂದು ಹೇಳುವ ಜೊತೆಗೆ ಅಖಂಡ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಒತ್ತು ನೀಡುವ ಭರವಸೆಯನ್ನು ಸ್ವಾಗತ ಮಾಡುತ್ತಿದ್ದೇವೆ ಎಂದರು.
ಒಂದೇ ಪಕ್ಷದ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿದೆ. ಇದರಿಂದಾಗಿ ಹೆಚ್ಚಿನ ಅನುದಾನ ತರುತ್ತೇವೆ. ಸರ್ವಪಕ್ಷ ನಿಯೋಗ ಕೊಂಡೊಯ್ದು ಪಿಎಂ ಮತ್ತು ನೀರಾವರಿ ಸಚಿವರ ಭೇಟಿ ಮಾಡಿಸುವ ಭರವಸೆ ನೀಡಿದ್ದಾರೆ. ಇದನ್ನು ನಾವು ಸ್ವಾಗತ ಮಾಡುತ್ತೇವೆ. ಕರ್ನಾಟಕದಲ್ಲಿ ಹೊಸ ಪರ್ವ ಆರಂಭಗೊಂಡಿದೆ ಎಂದಿದ್ದಾರೆ.