ಬೆಂಗಳೂರು: ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕೂಡ ಮಹಾಲಕ್ಷ್ಮಿ ಲೇಔಟ್ನಲ್ಲಿ ಅಭ್ಯರ್ಥಿಗಳ ಪ್ರಚಾರ ಮುಂದುವರೆದಿದ್ದು, ಮತದಾರರ ಮನವೊಲಿಸಲು ಕಸರತ್ತು ನಡೆಸುತ್ತಿದ್ದಾರೆ.
ಮನೆ ಮನೆ ಪ್ರಚಾರದಲ್ಲಿ ಬ್ಯುಸಿಯಾಗಿರುವ ಅಭ್ಯರ್ಥಿಗಳು ನಮ್ಮ ಪಕ್ಷಕ್ಕೆ ಮತ ನೀಡಿ ಅಂತ ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಕಾಂಗ್ರೆಸ್ ಅಭ್ಯರ್ಥಿ ಶಿವರಾಜು 43ನೇ ವಾರ್ಡ್, ಜೈ ಮಾರುತಿ ನಗರದ ಮಾರುಕಟ್ಟೆ ಸುತ್ತಮುತ್ತ ಚುನಾವಣಾ ಪ್ರಚಾರ ನಡೆಸಿದರು.
ಇತ್ತ ಜೆಡಿಎಸ್ ಅಭ್ಯರ್ಥಿ ಗಿರೀಶ್ ನಾಶಿ ಬೆಳಗ್ಗೆ 7 ಗಂಟೆಯಿಂದಲೇ ನಂದಿನಿ ಲೇಔಟ್ನ ವೃತ್ತಾಕಾರದ ಉದ್ಯಾನವನದಿಂದ ಪ್ರಚಾರ ಪ್ರಾರಂಭಿಸಿದರು. ನಂತರ ಮಹಾಲಕ್ಷ್ಮಿಪುರ ವಾರ್ಡ್ಗಣೇಶ ಬ್ಲಾಕ್ ಬಳಿ ಇರುವ ಪಂಚಮುಖಿ ದೇವಸ್ಥಾನಕ್ಕೆ ತೆರಳಿ ಪೂಜೆ ಪುನಸ್ಕಾರ ನೆರವೇರಿಸಿ ಮತ್ತೆ ಪ್ರಚಾರ ಕಾರ್ಯದಲ್ಲಿ ತೊಡಗಿದರು.
ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಕೂಡ ಬೆಳಿಗ್ಗೆ 7 ಗಂಟೆಯಿಂದಲೇ ಬಸವೇಶ್ವರ ನಗರದ ಗುರುಪ್ರಸಾದ್ ಹೋಟೆಲ್ನಿಂದ ಚುನಾವಣಾ ಪ್ರಚಾರ ನಡೆಸಿದರು. ಗೋಪಾಲಯ್ಯರಿಗೆ ಮಾಜಿ ಶಾಸಕ ನೇಲ ನರೇಂದ್ರ ಬಾಬು ಸಾಥ್ ನೀಡಿದರು. ಜೆ.ಸಿ.ನಗರ ಸೇರಿದಂತೆ ಹಲವು ಭಾಗದಲ್ಲಿ ಪ್ರಚಾರ ನಡೆಸಿದರು.