ಬೆಂಗಳೂರು ನಗರ: ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಕೆ.ಮಾಡಾಳ್ ವಿರುಪಾಕ್ಷಪ್ಪ ಪುತ್ರ ಬೆಂಗಳೂರು ಜಲಮಂಡಳಿಯ ಲೆಕ್ಕಾಧಿಕಾರಿಯಾಗಿದ್ದ ಪ್ರಶಾಂತ್ ಮಾಡಾಳ್ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರತ್ಯೇಕವಾಗಿ ಎರಡು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಪ್ರಶಾಂತ್ ವಿರುದ್ಧ ಒಟ್ಟು ಮೂರು ಎಫ್ಐಆರ್ ದಾಖಲಿಸಲಾಗಿದೆ.
ಶಾಸಕರ ಪುತ್ರನಿಗೆ ತೀವ್ರ ಸಂಕಷ್ಟ ಎದುರಾಗಿದೆ. ಆರೋಪಿ ಸಿದ್ದೇಶ್ ಬಳಿ ಸಿಕ್ಕ 60 ಲಕ್ಷ ರೂ. ಮೌಲ್ಯಕ್ಕೆ ಸಂಬಂಧಿಸಿದಂತೆ ಬೇನಾಮಿ ಆಸ್ತಿ ಪತ್ತೆಯಾಗಿದೆ. ಈ ಕುರಿತು ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಎಫ್ಐಆರ್ನಲ್ಲಿ ಪ್ರಶಾಂತ್ ಮಾಡಾಳ್, ಸುರೇಂದ್ರ ಹಾಗೂ ಸಿದ್ದೇಶ್ ಎಂಬುವರ ಹೆಸರು ಇದೆ.
ಟೆಂಡರ್ ಪಡೆಯಲು 90 ಲಕ್ಷ ಹಣ ತಂದಿದ್ದ ಆರೋಪಿಗಳು: ಟ್ರ್ಯಾಪ್ ವೇಳೆ, ಟೆಂಡರ್ ಪಡೆಯಲು 90 ಲಕ್ಷ ಹಣ ತಂದಿದ್ದ ಆರೋಪಿಗಳ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಶಾಂತ್ ಮಾಡಾಳ್, ಅಲ್ಬರ್ಟ್ ನಿಕೋಲಸ್, ಗಂಗಾಧರ್ ಹೆಚ್,ದೀಪಕ್ ಜಾಧವ್, ಅರೋಮಸ್ ಕಂಪನಿ ಹಾಗೂ ಕೆಎಸ್ಡಿಎಲ್ ಅಧಿಕಾರಿ, ಸಿಬ್ಬಂದಿಯ ಹೆಸರುಗಳಿವೆ. ಈ ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗ ಪ್ರಶಾಂತ್ ಮಾಡಾಳ್ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್ಡಿಎಲ್) ರಾಸಾಯನಿಕ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಕೆ ಮಾಡಾಳ್ ವಿರುಪಾಕ್ಷಪ್ಪ ಲೋಕಾಯುಕ್ತ ಅಧಿಕಾರಿಗಳ ತನಿಖೆಯ ನಂತರ ಪ್ರತಿಕ್ರಿಯಿಸಿದ್ದು, ನಾನು ಲೋಕಾಯುಕ್ತ ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ ಎಂದಿದ್ದಾರೆ.
ಲೋಕಾಯುಕ್ತ ಕಚೇರಿಗೆ ಹಾಜರಾಗಿ ನಂತರ ಮಾತನಾಡಿದ ಅವರು, ನಾನು ಲೋಕಾಯುಕ್ತ ಅಧಿಕಾರಿಗಳು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಆದರೆ ತನಿಖೆಯ ವೇಳೆ ನಡೆದಿರುವ ವಿಚಾರವನ್ನು ನಾವು ಬಹಿರಂಗಪಡಿಸುವಂತಿಲ್ಲ ಎಂದು ತಿಳಿಸಿದ್ದರು. ಈ ವೇಳೆ ನೀವು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದಿಷ್ಟು ಆರೋಪಗಳನ್ನು ಮಾಡಿದ್ರಿ, ನನ್ನ ಬಗ್ಗೆ ಯಾರೋ ಷಡ್ಯಂತ್ರಗಳನ್ನು ಮಾಡಿದ್ದಾರೆ ಎಂದಿದ್ರಿ, ಈ ಬಗ್ಗೆ ಏನ್ ಹೇಳುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ, ನಾನು ಆ ಬಗ್ಗೆ ಈಗ ಏನೂ ಹೇಳುವುದಿಲ್ಲ ಎಂದು ಹೇಳಿದ್ದರು.
ನಿಮ್ಮ ಮಗನ ಆಫೀಸ್ನಲ್ಲಿ ದುಡ್ಡು ಇಟ್ಟುಹೋಗಿದ್ರು ಎಂದೂ ಹೇಳಿದ್ರಿ. ಅದರ ಬಗ್ಗೆ ಏನಾದ್ರೂ ಎವಿಡೆನ್ಸ್ ಕೋಟ್ರಾ ಎಂಬ ಪ್ರಶ್ನೆಗೆ, ನಾನು ಈಗ ಒಂದು ಮಾತನ್ನು ಹೇಳುತ್ತೇನೆ. ಮಾಧ್ಯಮದವರು ಮಾತನಾಡಿ ಅಂತಾ ಹೇಳ್ತೀರಿ, ಆ ವೇಳೆ ನಾವು ಏನು ಹೇಳಿರುತ್ತೇವೆ ಎಂಬುದರ ಅರಿವು ನಮಗಿರುವುದಿಲ್ಲ ಹಾಗಾಗಿ ನಾನು ಒಂದನ್ನು ಸ್ಪಷ್ಟಪಡಿಸುತ್ತೇನೆ, ಲೋಕಾಯುಕ್ತರ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ ಎಂದು ತಿಳಿಸಿದ್ಧರು.
ಇದನ್ನೂ ಓದಿ: ರೈತರ ಮಕ್ಕಳನ್ನು ಮದುವೆಯಾದ ಹೆಣ್ಣು ಮಕ್ಕಳಿಗೆ ಎರಡು ಲಕ್ಷ ರೂ. ಪ್ರೋತ್ಸಾಹ ಧನ.. ಕುಮಾರಸ್ವಾಮಿ ಅಭಯ