ಬೆಂಗಳೂರು: ಒಂದು ವಾರದ ಲಾಕ್ಡೌನ್ಗೆ ಮಾಡಿಕೊಂಡಿರುವ ಸಿದ್ದತೆಗಳ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ವಲಯಗಳ ಉಸ್ತುವಾರಿ ಸಚಿವರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಹಿತಿ ಪಡೆದುಕೊಂಡರು.
ರಾತ್ರಿ 8 ಗಂಟೆಯಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ಡೌನ್ ಆರಂಭಗೊಂಡಿದ್ದು, ಸುರಕ್ಷತಾ ಕ್ರಮಗಳು, ಪೊಲೀಸ್ ಬಂದೋಬಸ್ತ್ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಂದ ಸಿಎಂ ಸಮಗ್ರ ಮಾಹಿತಿ ಪಡೆದುಕೊಂಡರು.
ಇನ್ನು ಪೂರ್ವವಲಯದ ಕುರಿತು ಡಿಸಿಎಂ ಡಾ. ಅಶ್ವತ್ಥನಾರಾಣ್, ಪಶ್ಚಿಮ ವಲಯ ಕುರಿತು ವಸತಿ ಸಚಿವ ವಿ.ಸೋಮಣ್ಣ, ದಕ್ಷಿಣ ವಲಯ ಕುರಿತು ಕಂದಾಯ ಸಚಿವ ಆರ್.ಅಶೋಕ್, ಮಹದೇವಪುರ ವಲಯದ ಕುರಿತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಯಲಹಂಕ ವಲಯದ ಕುರಿತು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಆರ್.ಆರ್.ನಗರ ವಲಯದ ಕುರಿತು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ದಾಸರಹಳ್ಳಿ ವಲಯದ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ಮತ್ತು ಬೊಮ್ಮನಹಳ್ಳಿ ವಲಯದ ಕುರಿತು ಪ್ರಾಥಮಿಕ ಹಾಗು ಪ್ರೌಢ ಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಂದ ಪ್ರಸ್ತುತ ಸನ್ನಿವೇಶದ ಮಾಹಿತಿಯನ್ನು ಸಿಎಂ ಪಡೆದುಕೊಂಡಿದ್ದಾರೆ.
ಇನ್ನೊಂದು ವಾರ ಹೆಚ್ಚಿನ ಮುತುವರ್ಜಿ ವಹಿಸಬೇಕು, ಲಾಕ್ಡೌನ್ ಪಾಲನೆ ಸರಿಯಾಗಿ ನಡೆಯಬೇಕು, ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಿ ಎಂದು ವಲಯದ ಉಸ್ತುವಾರಿಗಳಿಗೆ ಸಿಎಂ ಸಲಹೆ ನೀಡಿದ್ದಾರೆ.