ಬೆಂಗಳೂರು: ಚಿಕ್ಕಬಳ್ಳಾಪುರಕ್ಕೆ ಮಾತ್ರ ಆಸ್ಪತ್ರೆಯನ್ನು ಮೀಸಲಿಟ್ಟ ವಿಚಾರವಾಗಿ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಮಾಜಿ ಸಚಿವ ಕೃಷ್ಣ ಭೈರೇಗೌಡ ದುರಂತದ ಸಮಯದಲ್ಲಿ ಒಂದೇ ಜಿಲ್ಲೆ ಹಾಸಿಗೆ ಮೀಸಲಿಡುವುದು ಅಮಾನವೀಯ ಎಂದು ಹೇಳಿದ್ದಾರೆ.
ಇದು ಕಾನೂನು ಬಾಹಿರ ಆದೇಶ. ಕೆಲವರಿಗೆ ಮಾತ್ರ ವೈದ್ಯಕೀಯ ಸೌಲಭ್ಯ ಮೀಸಲಿಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಕೂಡಲೇ ವೈದ್ಯಕೀಯ ಸೌಲಭ್ಯ ಎಲ್ಲರಿಗೂ ಸಿಗುವಂತೆ ಆದೇಶಿಸಲು ಮನವಿ ಮಾಡುತ್ತೇನೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ಪತ್ರದಲ್ಲಿ, ನಮ್ಮ ಕ್ಷೇತ್ರದಲ್ಲಿರುವ ಎಸ್ಟಾರ್ ಸಿಎಂಐ ಆಸ್ಪತ್ರೆಯ ಐಸಿಯು, ಆಮ್ಲಜನಕ ಬೆಡ್ಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾತ್ರ ನೀಡಬೇಕೆಂದು ಸರ್ಕಾರ ಆದೇಶಿಸಿರುತ್ತದೆ. ಕೋವಿಡ್ ದುರಂತವನ್ನು ನಾವೆಲ್ಲರೂ ಒಂದಾಗಿ ಎದುರಿಸುತ್ತಿರುವ ಸಂದರ್ಭದಲ್ಲಿ, ಈ ರೀತಿಯಾಗಿ ಯಾವುದೇ ಆಸ್ಪತ್ರೆಯ ಸೌಲಭ್ಯವನ್ನು ಕೆಲವರಿಗೆ ಮಾತ್ರ ಸೀಮಿತ ಮಾಡಿ ಅವಶ್ಯಕತೆ ಇರುವಂತಹ ಇತರರಿಗೆ ಸಿಗದಂತೆ ಮಾಡುವುದು ಅಮಾನವೀಯ ಹಾಗೂ ಅವಿವೇಕದಿಂದ ಕೂಡಿರುವ ನಿರ್ಧಾರ ಎಂದು ಹೇಳಿದ್ದಾರೆ.
ಹೈಕೋರ್ಟ್ ತೀರ್ಪು: ಯಾವುದೇ ವೈದ್ಯಕೀಯ ಸೌಲಭ್ಯದಿಂದ ಯಾರನ್ನೂ ವಂಚಿತರನ್ನಾಗಿ ಮಾಡಬಾರದು ಎಂದು ಇತ್ತೀಚೆಗೆ ತೆಲಂಗಾಣ ಹೈಕೋರ್ಟ್ ಸೂಚಿಸಿದೆ. ರಾಜ್ಯದ ಎಲ್ಲಾ ಜನರನ್ನು ಕಾಪಾಡುವ ಮತ್ತು ಸಮಾನವಾಗಿ ಕಾಣಬೇಕಾದ ಸರ್ಕಾರವೇ ಈ ರೀತಿಯಾಗಿ ಭೇದ ಭಾವದಿಂದ ಕೂಡಿರುವ ಆದೇಶ ನೀಡಿರುವುದನ್ನು ಏನೆಂದು ಅರ್ಥೈಸಬೇಕು? ಯಾವುದೇ ಒಂದು ವೈದ್ಯಕೀಯ ಸೌಲಭ್ಯವನ್ನು ಕೆಲವರಿಗೆ ಮಾತ್ರ ಸೀಮಿತ ಮಾಡುವಂತಹ ಹಾಗೂ ಇತರರನ್ನು ವಂಚಿಸುವಂತಹ ಅಧಿಕಾರ ಯಾವ ಕಾನೂನಿನ ಅಡಿಯಲ್ಲೂ ಸರ್ಕಾರಕ್ಕೆ ಇಲ್ಲ. ಇದು ಒಂದು ಕಾನೂನು ಬಾಹಿರ ಆದೇಶ, ಹಾಗಾಗಿ, ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಮತ್ತು ವೈದ್ಯಕೀಯ ಸೌಲಭ್ಯ ಅವಶ್ಯಕತೆಯಿರುವ ಎಲ್ಲರಿಗೂ ಸಿಗುವಂತೆ ಆದೇಶಿಸಬೇಕೆಂದು ಕೋರುತ್ತೇನೆಂದು ಕೃಷ್ಣಭೈರೇಗೌಡ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಮರಣ ನಿಖರವಾಗಿ ದಾಖಲಿಸಿ, ಪರೀಕ್ಷಾ ಪ್ರಮಾಣ ಹೆಚ್ಚಿಸಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ