ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ಮ್ಯಾಚ್ ಫಿಕ್ಸಿಂಗ್ ಪ್ರಕರಣ ದಿನದಿಂದ ದಿನಕ್ಕೆ ಒಂದೊಂದು ಮಜಲು ಪಡೆಯುತ್ತಿದೆ. ಇಷ್ಟು ದಿನ ಬುಕ್ಕಿಗಳನ್ನು ಮಾತ್ರ ಬಂಧಿಸಿದ್ದ ಸಿಸಿಬಿ ಪೊಲೀಸರು, ಈಗ ಆಟಗಾರರು ಹಾಗೂ ಕೋಚ್ಗಳನ್ನೇ ಖೆಡ್ಡಾಕ್ಕೆ ಕೆಡವಿದ್ದಾರೆ.
2018ರಲ್ಲಿ ಮೈಸೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆರಂಭಿಕ ಬ್ಯಾಟ್ಸಮನ್ ಎಂ.ವಿಶ್ವನಾಥನ್ ಹಾಗೂ ಅದೇ ತಂಡದ ಬೌಲಿಂಗ್ ಕೋಚ್ ಆಗಿದ್ದ ವಿನು ಪ್ರಸಾದ್ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
2018ರಲ್ಲಿ ಹುಬ್ಬಳ್ಳಿ ಟೈಗರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಡುವಿನ ಪಂದ್ಯ ಮೈಸೂರಿನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಬುಕ್ಕಿ ಮನೋಜ್ ಎಂಬಾತ ಬೌಲಿಂಗ್ ಕೋಚ್ ವಿನು ಪ್ರಸಾದ್ ಮೂಲಕ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ವಿಶ್ವನಾಥ್ ಗೆ ಫಿಕ್ಸ್ ಮಾಡಿಸಿದ್ದರು ಎನ್ನಲಾಗ್ತಿದೆ. ಬೆಂಗಳೂರಿನ ಖಾಸಗಿ ಹೋಟೇಲ್ನಲ್ಲಿ ನಡೆದಿತ್ತು ಎನ್ನಲಾದ ಫಿಕ್ಸಿಂಗ್ನಲ್ಲಿ ಮೈಸೂರಿನಲ್ಲಿ ನಡೆಯುವ ಪಂದ್ಯದಲ್ಲಿ ವಿಶ್ವನಾಥ್ 20 ಎಸೆತಗಳಲ್ಲಿ 10 ರನ್ ಗಿಂತ ಕಡಿಮೆ ಹೊಡೆಯಬೇಕು ಎಂದು ಒಪ್ಪಂದವಾಗಿತ್ತು. ಆದರಂತೆ ಅವತ್ತು ವಿಶ್ವನಾಥ್ 17 ಎಸೆತಗಳಲ್ಲಿ ಕೇವಲ 7 ರನ್ಗಳಿಸಿ ಔಟಾಗಿದ್ದರು. ಈ ಎಲ್ಲಾ ಮಾಹಿತಿಯನ್ನು ಸಿಸಿಬಿ ತನಿಖೆ ವೇಳೆ ವಿನು ಪ್ರಸಾದ್ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಲ್ಲದೆ ತನ್ನ ಸ್ನೇಹಿತ ವೆಂಕಿ ಎಂಬವನು ದೆಹಲಿ ಮೂಲದ ಬುಕ್ಕಿ, ಖಾನ್ ಎಂಬುವನನ್ನು ಪರಿಚಯ ಮಾಡಿಸಿದ್ದ, ಆತನೂ ಕೂಡ ಫಿಕ್ಸಿಂಗ್ ಮಾಡುವಂತೆ ಸೂಚಿಸಿದ್ದ ಎಂದು ಹೇಳಿದ್ದಾನಂತೆ. ಹೀಗಾಗಿ ಸದ್ಯ ಪೊಲೀಸರು ಇವರಿಬ್ಬರನ್ನು ಬಂಧಿಸಿ, ಬುಕ್ಕಿಗಳಾದ ಮನೋಜ್ ಖಾನ್ ಹಾಗೂ ವಿನು ಪ್ರಸಾದ್ ಸ್ನೇಹಿತ ವೆಂಕಿಗಾಗಿ ಹುಡುಕಾಟ ನಡೆಸಿದ್ದಾರೆ.