ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಸದ್ಯ ಕಾಲ ಕೂಡಿ ಬರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹೈಕಮಾಂಡ್ ಮುಂದೆ ರಾಜ್ಯ ಕಾಂಗ್ರೆಸ್ ನಾಯಕರು ಮನವಿಯ ಮೇಲೆ ಮನವಿ ಮಾಡುತ್ತಲೇ ಬರುತ್ತಿದ್ದು, ಇದಕ್ಕೆ ಬೆಲೆ ಸಿಗುತ್ತಿಲ್ಲ.
ರಾಜ್ಯದಲ್ಲಿ ಪಕ್ಷದ ಚಟುವಟಿಕೆ ಮುಂದುವರಿಯಲು ಕೆಪಿಸಿಸಿ ಅಧ್ಯಕ್ಷರ ನೇಮಕ ಅತ್ಯಂತ ಪ್ರಮುಖ. ರಾಜೀನಾಮೆ ಸಲ್ಲಿಸಿರುವ ದಿನೇಶ್ ಗುಂಡೂರಾವ್ ಅಂಗೀಕಾರ ಆಗದಿದ್ದರೂ ಕೂಡ ಕಚೇರಿಗೆ ಬರುವುದನ್ನು, ಪಕ್ಷದ ಸಂಘಟನೆ ವಿಚಾರದಲ್ಲಿ ಶ್ರಮಿಸುವುದನ್ನು ಕಡಿಮೆ ಮಾಡಿದ್ದಾರೆ. ಅನಿವಾರ್ಯಕ್ಕೆ ಎಂಬಂತೆ ಒಮ್ಮೆ ಬಂದು ತೆರಳುವುದನ್ನು ಬಿಟ್ಟರೆ ದಿನೇಶ್ ಅವರಿಗೂ, ಕೆಪಿಸಿಸಿಗೂ ಸಂಬಂಧವಿಲ್ಲ ಅನ್ನುವ ಚಿತ್ರಣ ಗೋಚರಿಸುತ್ತಿದೆ. ಹೀಗಿರುವಾಗ ರಾಜ್ಯದಲ್ಲಿ ಸಂಪೂರ್ಣ ನೆಲಕಚ್ಚುತ್ತಿರುವ ಪಕ್ಷ ಸಂಘಟನೆಯನ್ನು ಮತ್ತೊಮ್ಮೆ ಮೇಲೆತ್ತಲು, ಪಕ್ಷಕ್ಕೆ ಹೊಸ ರೂಪ ಕೊಡಲು ರಾಜ್ಯ ನಾಯಕರು ಶ್ರಮಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ನೇಮಕ ಆದಷ್ಟು ಬೇಗ ಆದಲ್ಲಿ, ನಾಯಕರ ಶ್ರಮಕ್ಕೆ ಬೆಲೆ ಸಿಗಲಿದೆ.

ಆದರೆ, ಹೈಕಮಾಂಡ್ ಈ ನಿಟ್ಟಿನಲ್ಲಿ ಮನಸ್ಸು ಮಾಡುತ್ತಿಲ್ಲ. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬರೋಬ್ಬರಿ ಎರಡು ತಿಂಗಳು ಕಳೆದಿವೆ. ದೆಹಲಿ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಂಕಿತ ಹಾಕಲಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಅದು ಆಗಿಲ್ಲ. ಇದೀಗ ಲೋಕಸಭೆ ಅಧಿವೇಶನದ ಬಳಿಕ ಆಯ್ಕೆ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ ರಾಜ್ಯ ನಾಯಕರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಮಾಡಿ ಮನವಿ ಸಲ್ಲಿಸಲು ಯತ್ನಿಸಿದ್ದು, ಅದು ಫಲಕೊಟ್ಟಿಲ್ಲ. ಭೇಟಿಗೆ ಸೋನಿಯಾ ಗಾಂಧಿ ಸಮ್ಮತಿ ಸೂಚಿಸಿಲ್ಲ. ಅನಾರೋಗ್ಯದ ನೆಪವೊಡ್ಡಿ ಭೇಟಿ ನಿರಾಕರಿಸಿದ್ದಾರೆ ಎಂದು ಹೇಳಲಾಗ್ತಿದೆ.
ಒಟ್ಟಾರೆ ರಾಜ್ಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ನೇಮಕಕ್ಕೆ ಕಾಲ ಕೂಡಿ ಬರುತ್ತಿಲ್ಲ. ಈ ಸ್ಥಾನದ ಆಕಾಂಕ್ಷಿಗಳಾದ ಮಾಜಿ ಸಚಿವರಾದ ಡಿ.ಕೆ, ಶಿವಕುಮಾರ್, ಎಂ.ಬಿ. ಪಾಟೀಲ್ ಸೇರಿದಂತೆ ಮತ್ತಿತರರು ನಗರದಲ್ಲಿಯೇ ಬೀಡು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಅಧ್ಯಕ್ಷರ ಘೋಷಣೆ ಆಗಬಹುದು ಎಂದುಕೊಂಡು ಕೂಡಲೇ ಅಧಿಕಾರ ವಹಿಸಿಕೊಳ್ಳುವ ತರಾತುರಿಯಲ್ಲಿದ್ದಾರೆ. ಒಟ್ಟಾರೆ ಎಐಸಿಸಿ ಅಧ್ಯಕ್ಷೆ ಹಸಿರು ನಿಶಾನೆ ತೋರಿಸುವವರೆಗೂ ಅಧ್ಯಕ್ಷರ ಆಯ್ಕೆಗೆ ಕಾಲ ಕೂಡಿ ಬರುವುದಿಲ್ಲ. ಅಲ್ಲಿಯವರೆಗೂ ರಾಜ್ಯ ನಾಯಕರು ಕಾಯುವುದು ತಪ್ಪಲ್ಲ ಅನ್ನುವಂತಾಗಿದೆ. ಒಟ್ಟಾರೆ ಪಕ್ಷ ದಿನದಿಂದ ದಿನಕ್ಕೆ ಸಂಘಟನೆಯ ಕೊರತೆ ಎದುರಿಸುತ್ತಾ ಸಾಗಿತ್ತು. ಪಕ್ಷವನ್ನು ಹಳೆಯ ವೈಭವಕ್ಕೆ ತರುವ ಸಮರ್ಥ ಅಧ್ಯಕ್ಷ ಯಾರಾಗುತ್ತಾರೆ ಅನ್ನುವ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.