ಬೆಂಗಳೂರು : ಕೊರೊನಾ ಪ್ರಕರಣ ಹೆಚ್ಚಳದಲ್ಲಿ ದೇಶ ಇನ್ನು ಕೇವಲ ಅಮೆರಿಕಾ ಮಣಿಸುವುದು ಮಾತ್ರ ಬಾಕಿ ಇದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಾವು ಇನ್ನು ಅಮೆರಿಕಾವನ್ನು ಮಾತ್ರ ಮೀರಿ ಮುಂದೆ ಹೋದರೆ ಸಾಕು. ನನ್ನ ಪ್ರಕಾರ ಇದು ಕೂಡ ಸಾಧ್ಯವಾಗುತ್ತದೆ ಎಂಬ ಖಾತ್ರಿಯಿದೆ. ಆರ್ಥಿಕ ದುಸ್ಥಿತಿ ಎದುರಿಸುತ್ತಿರುವ ಭಾರತಕ್ಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಟ್ಟ ಸ್ಥಿತಿ ಎದುರಾಗಲಿದೆ. ಸಿಗುತ್ತಿರುವ ಸೂಚನೆಗಳು, ಕಾಣುತ್ತಿರುವ ಚಿತ್ರಣ ಕೂಡ ಇದನ್ನು ಸ್ಪಷ್ಟಪಡಿಸುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಮುಂದಿನ ದಿನಗಳಲ್ಲಿ ನಗದು ರಹಿತವಾಗಿಸುವುದಾಗಿ ಭರವಸೆ ಕೊಟ್ಟಿದ್ದರು. ಇದಕ್ಕೆ ಪೂರಕವೆಂಬಂತೆ ಅವರು ಎಲ್ಲರ ಜೇಬು ಖಾಲಿ ಮಾಡಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಜಿಎಸ್ಟಿ ಪ್ರಸ್ತಾಪ : ಜಿಎಸ್ಟಿ ಯುಪಿಎ ಸರ್ಕಾರದ ಕನಸಿನ ಕೂಸು. ಆದರೆ, ಮೋದಿ ಸರ್ಕಾರ ಮೂಲ ಜಿಎಸ್ಟಿ ಕಾಯ್ದೆಯನ್ನೇ ಬದಲಾಯಿಸಿ ದೇಶದಲ್ಲಿ ಆರ್ಥಿಕ ಭಯೋತ್ಪಾದನೆ ಮಾಡುತ್ತಿದೆ. ಬಡ, ಮಧ್ಯಮ ಹಾಗೂ ದುಡಿಯುವ ವರ್ಗದ ದುಡಿಮೆಯ ಹಣವನ್ನು ವಸೂಲಿ ಮಾಡಲು ಮೋದಿ ಸರ್ಕಾರ ಜಿಎಸ್ಟಿಯನ್ನು ಅಸ್ತ್ರದಂತೆ ಬಳಸುತ್ತಿರುವುದು ದೇಶದ ಜನರ ದುರಾದೃಷ್ಟವಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ದನಿ ಎತ್ತಿದ್ದು, ಅವರನ್ನು ಎಲ್ಲಾ ರಾಜ್ಯ ನಾಯಕರು ಬೆಂಬಲಿಸುತ್ತಿದ್ದಾರೆ.