ಬೆಂಗಳೂರು: ಆದಾಯ ಸಂಗ್ರಹ ಕ್ಷೀಣಿಸುತ್ತುರುವ ಹಿನ್ನೆಲೆ ಕೇಂದ್ರ ಸರ್ಕಾರ ರಾಜ್ಯಗಳ ಸಾಲದ ಮಿತಿಯನ್ನು ಏರಿಕೆ ಮಾಡಿದೆ. ಅದರಂತೆ ರಾಜ್ಯ ಸರ್ಕಾರವೂ ಹೆಚ್ಚಿನ ಸಾಲ ಮಾಡುವ ಇರಾದೆಯಲ್ಲಿತ್ತು. ಆದರೆ ಸಾಲ ಮಾಡಲು ಕೇಂದ್ರ ವಿಧಿಸಿರುವ ಷರತ್ತುಗಳೇ ಇದೀಗ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
ಲಾಕ್ಡೌನ್ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ಮನಗಂಡು ಕೇಂದ್ರ ಸರ್ಕಾರ ಸಾಲದ ಮಿತಿಯನ್ನು ಶೇ 3 ರಿಂದ ಶೇ 5ಕ್ಕೆ ಏರಿಕೆ ಮಾಡಿತ್ತು. ಅದರಂತೆ ಕರ್ನಾಟಕ ತನ್ನ ಶೇ 3ರ ಮಿತಿಯಲ್ಲಿ ಸುಮಾರು 50,000 ಕೋಟಿ ರೂ. ಸಾಲವನ್ನು ಮಾರುಕಟ್ಟೆಯಿಂದ ಎತ್ತಬಹುದಾಗಿದೆ. ಇದೀಗ ಹೆಚ್ಚುವರಿಯಾಗಿ 15,000 ಕೋಟಿ ರೂ. ಸಾಲ ಮಾಡಬಹುದಾಗಿದೆ. ಕೇಂದ್ರ ಸರ್ಕಾರ ಸಾಲದ ಮಿತಿಯನ್ನೇನೋ ವಿಸ್ತರಿಸಿದೆ ಆದರೆ, ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಂಡಂತೆ ಈ ಸಾಲದ ಮಿತಿಯನ್ನು ಏರಿಕೆ ಮಾಡಲಾಗಿದೆ. ಹೆಚ್ಚುವರಿ ಸಾಲ ಪಡೆಯಬೇಕಾದರೆ ರಾಜ್ಯಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಕೆಲ ಕಠಿಣ ಷರತ್ತು ವಿಧಿಸಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಹೆಚ್ಚುವರಿ ಸಾಲ ಮಾಡಲು ಷರತ್ತುಗಳೇನು?
ಕೇಂದ್ರ ಸರ್ಕಾರ ರಾಜ್ಯದ ಸಾಲದ ಮಿತಿಯನ್ನು ಶೇ3ರ ರಿಂದ ಶೇ5ಕ್ಕೆ ಏರಿಕೆ ಏನೋ ಮಾಡಿದೆ. ಅದರಂತೆ ರಾಜ್ಯ ಶೇ 3.5ರ ವರೆಗಿನ ಸಾಲವನ್ನು ಷರತ್ತುಗಳಿಲ್ಲದೇ ಸುಲಭವಾಗಿ ಮಾಡಬಹುದಾಗಿದೆ. ಆದರೆ ನಂತರದ ಶೇ 3.5ರಿಂದ ಶೇ 5ರಷ್ಟು ಸಾಲ ಮಾಡಬೇಕಾದರೆ ಕಠಿಣ ಷರತ್ತನ್ನು ವಿಧಿಸಲಾಗಿದೆ. ಅದರಂತೆ 3.5% ರಿಂದ 4.5% ವರೆಗಿನ 1% ಸಾಲವನ್ನು ಮಾರುಕಟ್ಟೆಯಿಂದ ಎತ್ತುವಳಿ ಮಾಡಬೇಕಾದರೆ ರಾಜ್ಯ ಕೆಲ ಕಠಿಣ ಷರತ್ತನ್ನು ಪಾಲಿಸಬೇಕು.
ಶೇ.1ರಷ್ಟರ ಸಾಲ 0.25% ರಂತೆ ನಾಲ್ಕು ಹಂತಗಳಲ್ಲಿ ಲಭ್ಯವಾಗಲಿದೆ. ಈ ಪ್ರತಿ ನಾಲ್ಕು ಹಂತಗಳ ಸಾಲ ಲಭಿಸಬೇಕಾದರೆ ನಿಗದಿತ, ಕಾರ್ಯಸಾಧು ಸುಧಾರಣೆಯನ್ನು ಮಾಡಬೇಕಾಗಿದೆ. ಕೊನೆಯ 0.5% ಸಾಲ ಪಡೆಯಬೇಕಾದರೆ ನಾಲ್ಕು ಸುಧಾರಣೆ ಷರತ್ತುಗಳ ಪೈಕಿ ಮೂರನ್ನು ಸಂಪೂರ್ಣವಾಗಿ ಸಾಧಿಸಿರಬೇಕು. ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್, ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್, ವಿದ್ಯುತ್ ಶಕ್ತಿ ವಿತರಣೆ, ನಗರ ಸ್ಥಳೀಯ ಸಂಸ್ಥೆಗಳ ಆದಾಯ ವೃದ್ಧಿ ಈ ನಾಲ್ಕು ಕ್ಷೇತ್ರಗಳಲ್ಲಿ ಸುಧಾರಣೆ ತರುವ ಷರತ್ತುಗಳನ್ನು ಪಾಲಿಸಿದರೆ ಮಾತ್ರ ಸಾಲ ಲಭ್ಯವಾಗಲಿದೆ.
ಆರ್ಥಿಕ ಇಲಾಖೆ ಹೇಳುವುದೇನು?
ಕೋವಿಡ್ 19 ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ಸುಧಾರಣೆ ತರುವುದು ಭಾಗಶಃ ಅಸಾಧ್ಯವಾಗಿದೆ. ಇಂಥ ಕಠಿಣ ಷರತ್ತುಗಳನ್ನು ವಿಧಿಸುವ ಮೂಲಕ ಕೇಂದ್ರ ಸರ್ಕಾರ ರಾಜ್ಯದ ಸಾಲ ಪಡೆಯುವ ಸಾಧ್ಯತೆಯನ್ನೇ ಕಠಿಣವಾಗಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಸುಧಾರಣೆ ತರುವುದು ಕಷ್ಟವಾಗಿದೆ. ಹಾಗಾಗಿ ಹೆಚ್ಚುವರಿ ಸಾಲ ಪಡೆಯುವುದು ಅಕ್ಷರಶಃ ಅಸಾಧ್ಯ ಎಂದು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಆಡಳಿತಯಂತ್ರ ಕೋವಿಡ್ 19 ನಿಯಂತ್ರಣದತ್ತ ಗಮನ ಹರಿಸಿರುವ ಹಿನ್ನೆಲೆ ಈ ಸುಧಾರಣೆ ತರುವುದು ಹೇಗೆ ಸಾಧ್ಯ ಎಂದು ಆರ್ಥಿಕ ಇಲಾಖೆ ಅಸಹಾಯಕತೆ ವ್ಯಕ್ತಪಡಿಸಿದೆ. 50,000 ಕೋಟಿ ರೂ. ವರೆಗಿನ ಷರತ್ತು ರಹಿತ ಸಾಲದ ಮಿತಿಯನ್ನು ಪೂರೈಸಿದ ಬಳಿಕ ಹೆಚ್ಚುವರಿ ಸಾಲ ಎತ್ತಲು ಆರ್ಥಿಕ ಇಲಾಖೆ ಚಿಂತನೆ ನಡೆಸಿದೆ. ಸುಮಾರು ಶೇ 40ರಷ್ಟು ಆದಾಯ ಕೊರತೆ ಎದುರಾಗಿರುವುದರಿಂದ ಈ ಹಣಕಾಸು ವರ್ಷದಲ್ಲಿ ಹೆಚ್ಚುವರಿ ಸಾಲದ ಮೊರೆ ಹೋಗುವುದು ಅನಿವಾರ್ಯ ಇದೆ. ಆದರೆ ಕಠಿಣ ಷರತ್ತುಗಳಿಂದ ಹೆಚ್ಚುವರಿ ಸಾಲ ಪಡೆಯುವುದು ಅಸಾಧ್ಯ ಎಂಬಂತಾಗಿದೆ ಎಂದು ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ತಿಳಿಸಿದ್ದಾರೆ.
ಈವರೆಗೆ ರಾಜ್ಯ ಮಾಡಿರುವ ಸಾಲ ಏನು?
ರಾಜ್ಯ ಸರ್ಕಾರ ಆರ್ಬಿಐ ಮೂಲಕ ಜುಲೈ ವರೆಗೆ 10,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಜುಲೈನಲ್ಲೇ ಮೂರು ಬಾರಿ ರಾಜ್ಯ ಸರ್ಕಾರ ಸಾಲ ಎತ್ತುವಳಿ ಮಾಡಿದೆ. ಕೋವಿಡ್ ಆರ್ಥಿಕ ಸಂಕಷ್ಟ ಹಿನ್ನೆಲೆ ಜುಲೈ 14ರಂದು ಸರ್ಕಾರ ಆರ್ಬಿಐ ಮೂಲಕ 1000 ಕೋಟಿ ರೂ. ರಾಜ್ಯ ಅಭಿವೃದ್ಧಿ ಸಾಲ(ಎಸ್ಡಿಎಲ್) ಮಾಡಿದೆ. ಇದರ ಬಡ್ಡಿ ದರ ಏಳು ವರ್ಷಕ್ಕೆ ಶೇ 6.12ರಷ್ಟು ಇರಲಿದೆ. ಅದಾದ ಬಳಿಕ ಜುಲೈ 21ರಂದು ತಲಾ 1,000 ಕೋಟಿ ರೂ. ನಂತೆ ಎರಡು ಎಸ್ಡಿಎಲ್ ಅನ್ನು ಮಾಡಿದೆ. ಇದರ ಬಡ್ಡಿ ದರ ಎಂಟು ವರ್ಷಕ್ಕೆ ಶೇ 6.09 ರಂತೆ ಇರಲಿದೆ.