ಬೆಂಗಳೂರು: ಪಕ್ಷದ ಕಾರ್ಯಾಲಯಗಳು ಮನೆ ಅಲ್ಲ, ಸಂಸ್ಕಾರ ಇರುವ ಕೇಂದ್ರಗಳು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ರಾಜ್ಯದ 8 ಜಿಲ್ಲೆಗಳ ಬಿಜೆಪಿ ಕಾರ್ಯಾಲಯ ಮತ್ತು ಒಂದು ಮಂಡಲ ಭವನದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ದೆಹಲಿಯಿಂದಲೇ ವರ್ಚುವಲ್ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಜನ ಸೇರುವ ಸ್ಥಳವೇ ಕಾರ್ಯಾಲಯ, ಕಾರ್ಯಕರ್ತರು ಪಕ್ಷದ ನಾಯಕರನ್ನು ಪಕ್ಷದ ಕಾರ್ಯಾಲಯಗಳಲ್ಲಿ ಭೇಟಿ ಮಾಡುವುದು ಒಂದು ಸಂಸ್ಕಾರ. ಕಾರ್ಯಾಲಯಗಳಿಗೆ ಬರುವುದರಿಂದ ಕಾರ್ಯಕರ್ತರ ರಾಜಕೀಯ ದೃಷ್ಟಿಕೋನ, ನಿಲುವು ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೊರೊನಾ ಹಿನ್ನೆಲೆ ಈಗ ಪಕ್ಷದ ಕಾರ್ಯಾಲಯಗಳಲ್ಲೂ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದ ಅವರು, 130 ಕೋಟಿ ಜನ ಇರುವ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ನಿರ್ವಹಣೆ ಸವಾಲನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿ ಮೋದಿ ಅವರ ಸಾಮರ್ಥ್ಯದ ದರ್ಶನ ಜಗತ್ತಿಗೆ ಆಗಿದೆ ಎಂದರು.
ಕೊರೊನಾದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇತ್ತೀಚೆಗೆ ಪ್ರಧಾನಿ ಅವರು ಕೃಷಿ ಪ್ಯಾಕೇಜ್ ಘೋಷಿಸಿದರು. ಇದನ್ನು ಕರ್ನಾಟಕ ಸರ್ಕಾರ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ರಾಜ್ಯದಲ್ಲಿ ಕೃಷಿ ವಲಯದ ಚಿತ್ರಣವನ್ನು ಬದಲಾಯಿಸಬೇಕಿದೆ ಎಂದು ಸಲಹೆ ನೀಡಿದರು.
ಕರ್ನಾಟಕದ ಬಿಜೆಪಿ ಕಾರ್ಯಕರ್ತರು ಲಾಕ್ಡೌನ್ ವೇಳೆ ಜನರಿಗೆ ನೆರವು ಕೊಟ್ಟಿದ್ದಾರೆ. ವಲಸೆ ಕಾರ್ಮಿಕರಿಗೆ, ಊಟ ಇಲ್ಲದವರಿಗೆ, ಕಷ್ಟಕ್ಕೆ ಸಿಲುಕಿದವರಿಗೆ, ರೋಗಿಗಳಿಗೆ ಔಷಧ ಪೂರೈಕೆ ಮಾಡಿದ್ದೀರಿ ಎಂದು ರಾಜ್ಯದ ಕಾರ್ಯಕರ್ತರ ಕಾರ್ಯಗಳಿಗೆ ಶ್ಲಾಘನೆ ವ್ಯಕ್ತಪಡಿಸಿದರು.
ಕೋವಿಡ್ ಲಾಕ್ಡೌನ್ ವೇಳೆ ರಾಜ್ಯದಲ್ಲಿ ವಿಶೇಷ ಪ್ಯಾಕೇಜ್ ನೀಡಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಡ್ಡಾ, ವಿವಿಧ ಸಮುದಾಯಗಳಿಗೆ ಪ್ರತ್ಯೇಕ ಪ್ಯಾಕೇಜ್ ಕೊಟ್ಟಿದ್ದಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು.
ಸಿಎಂ ಯಡಿಯೂರಪ್ಪ ಮಾತನಾಡಿ, ಇವತ್ತು ನಮಗೆಲ್ಲ ಪ್ರೇರಣಾದಾಯಕ ದಿನ. ಅಮಿತ್ ಶಾ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಜಿಲ್ಲೆಗಳು, ತಾಲೂಕುಗಳಲ್ಲಿ ಭವನಗಳಿರಬೇಕು ಎಂದು ಅಪೇಕ್ಷೆ ಪಟ್ಟಿದ್ದರು. ಬೆಂಗಳೂರಿನಲ್ಲಿ ಜಗನ್ನಾಥ ಭವನವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೇ ಬಂದು ಉದ್ಘಾಟಿಸಿದ್ದರು. ಜನರ ಅಹವಾಲು ಸ್ವೀಕೃತ, ಸಮಸ್ಯೆಗಳ ಬಗೆಹರಿಸಲು ಭವನಗಳು ನೆರವಾಗುತ್ತವೆ ಎಂದು ಹೇಳಿದರು.
ಪಕ್ಷದ ಕಾರ್ಯಾಲಯಗಳು ಕಾರ್ಯಕರ್ತರಿಗೆ ಹೃದಯ ಮಂದಿರ ಇದ್ದ ಹಾಗೆ. ಕಾರ್ಯಕರ್ತರೇ ಪಕ್ಷದ ಜೀವಾಳ ಎಂದರು.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಆರ್. ಅಶೋಕ್, ಡಾ. ಸಿ.ಎನ್. ಅಶ್ವತ್ಥ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.