ಬೆಂಗಳೂರು: ಸರ್ಕಾರ ಎಡವಿರುವುದು ನಿಜ. ಆದ್ರೆ, ಪಕ್ಷ ಬಿಟ್ಟು ತೆರಳುವುದು, ರಾಜೀನಾಮೆ ನೀಡುವುದು ಅದಕ್ಕೆ ಪರಿಹಾರವಲ್ಲ ಎಂದು ಮಾಜಿ ಸಚಿವ, ಶಾಸಕ ಹೆಚ್.ಕೆ.ಪಾಟೀಲ್ ಹೇಳಿದರು.
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಪಕ್ಷದ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂಬುದು ಮಾಧ್ಯಮದ ಮೂಲಕ ತಿಳಿಯಿತು. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿ ಅಧಿಕಾರಕ್ಕಾಗಿ ಈ ಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ. ನಾನು ನಮ್ಮ ಪಕ್ಷದ ಶಾಸಕರಿಗೆ ಮನವಿ ಮಾಡ್ತೇನೆ. ಏನೇ ಭಿನ್ನಾಭಿಪ್ರಾಯಗಳಿದ್ದರು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದರು.
ಕಾಂಗ್ರೆಸ್ ಪಕ್ಷ ಈಗ ಸಂಕಷ್ಟದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಸಕರ ಈ ನಡೆ ಸರಿಯಲ್ಲ. ಶಾಸಕರು ತಮ್ಮ ನಿರ್ಣಯವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡ್ತೇನೆ. ರಾಮಲಿಂಗಾರೆಡ್ಡಿಯಂತಹ ಹಿರಿಯ ನಾಯಕರ ಈ ನಡೆ ನಿರೀಕ್ಷಿಸಿರಲಿಲ್ಲ. ಸರ್ಕಾರ ಎಡವಿರುವುದು ನಿಜ. ಆದ್ರೆ, ಪಕ್ಷ ಬಿಟ್ಟು ತೆರಳುವುದು, ರಾಜೀನಾಮೆ ನೀಡುವುದು ಪರಿಹಾರವಲ್ಲ. ನಮ್ಮ ಶಾಸಕರನ್ನು ಹೈಕಮಾಂಡ್ ಮತ್ತು ನಾಯಕರು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದರು.