ಬೆಂಗಳೂರು : ನಿಯಮಬಾಹಿರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನವನ್ನು ಬ್ಯಾಂಕುಗಳಲ್ಲಿ ಠೇವಣಿ ಇಟ್ಟ ಪ್ರಕರಣಕ್ಕೆ ಮರುಜೀವ ಬಂದಿದೆ. ಅಕ್ರಮ ಎಸಗಿರುವ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಹಗರಣದ ಕುರಿತು ತನಿಖೆ ನಡೆಸುವುದಕ್ಕೆ ಸದನ ಸಮಿತಿ ರಚಿಸಲು ಒಪ್ಪಿಗೆ ಸೂಚಿಸಿದೆ.
ಮೇಲ್ಮನೆಯಲ್ಲಿಂದು ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ರಘುನಾಥ್ ಮಲ್ಕಾಪುರೆ ಅವರು, ಗ್ರಾಮೀಣಾಭಿವೃದ್ಧಿ ಅನುದಾನದ ಹಣವನ್ನು ಅಕ್ರಮವಾಗಿ ಬ್ಯಾಂಕ್ಗಳಲ್ಲಿ ಠೇವಣಿಯಿಟ್ಟ ಪ್ರಕರಣದ ಬಗ್ಗೆ ತನಿಖೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಗ್ರಾಮೀಣಾಭಿವೃದ್ಧಿ ಇಲಾಖೆಯ ವಿವಿಧ ವಿಭಾಗಗಳಲ್ಲಿ ಬಿಡುಗಡೆಯಾಗಿದ್ದ ಅನುದಾನವನ್ನು ಬಳಕೆ ಮಾಡಿಕೊಳ್ಳದೆ ವಿವಿಧ ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಅಂತ ನೇರವಾಗಿ ಪ್ರಶ್ನಿಸಿದರು.
![Rural Development Department grants, Rural Development Department grants illegally deposited, Rural Development Department grants illegally deposited case, ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನವನ್ನು ಅಕ್ರಮ ಠೇವಣಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನ ಅಕ್ರಮವಾಗಿ ಠೇವಣಿ ಪ್ರಕರಣ,](https://etvbharatimages.akamaized.net/etvbharat/prod-images/kn-bng-03-council-session-ishwarappa-statement-script-9024736_13032020192233_1303f_1584107553_360.jpg)
ನಿಯಮಬಾಹಿರವಾಗಿ ಅಧಿಕಾರಿಗಳು ಗ್ರಾಮೀಣಾಭಿವೃದ್ಧಿ ಇಲಾಖೆಯ ವಿವಿಧ ವಿಭಾಗಕ್ಕೆ ಬಿಡುಗಡೆಯಾದ ಅನುದಾನ ಬಳಕೆಯಲ್ಲಿ ಅಕ್ರಮ ಆಗಿದೆ. ಸುಮಾರು 600 ಕೋಟಿ ರೂ ಅಕ್ರಮ ಆಗಿದೆ. ಬ್ಯಾಂಕ್ನವರು, ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಕ್ರಮದ ತನಿಖೆಗೆ ಸದನ ಸಮಿತಿ ನೇಮಕ ಮಾಡಬೇಕು ಅಂತ ರಘುನಾಥರಾವ್ ಮಲ್ಕಾಪುರೆ ಒತ್ತಾಯಿಸಿದರು.
ಇದಕ್ಕೆ ದನಿಗೂಡಿಸಿದ ಜೆಡಿಎಸ್ನ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ, ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅವರು ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಆಗ್ರಹಿಸಿದರು.
ಪಕ್ಷಾತೀತವಾಗಿ ಒತ್ತಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ಉತ್ತರ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮಾಡುವುದಿಲ್ಲ. ಅಧಿಕಾರಿಗಳು ಯಾವುದೇ ರೀತಿಯಲ್ಲೂ ಇಲಾಖೆಗೆ ಸೂಚನೆ ನೀಡದೆ ಸಿಂಡಿಕೇಟ್ ಬ್ಯಾಂಕ್ನಲ್ಲಿ 90 ಖಾತೆ ತೆರೆದಿದ್ದಾರೆ. ಈಗಾಗಲೇ ಈ ಅಕ್ರಮದ ಕುರಿತು ತನಿಖೆ ಕೂಡಾ ಆಗಿದೆ. 200 ಕೋಟಿ ರೂ ಇದರಲ್ಲಿ ಲೂಟಿ ಆಗಿದೆ. ಸಿಂಡಿಕೇಟ್ ಬ್ಯಾಂಕ್ನವರು 80 ಕೋಟಿ ರೂ ಕೊಡ್ತೀವಿ ಅಂತ ಹೇಳ್ತಿದ್ದಾರೆ. ಸರ್ಕಾರದ ಅನುಮತಿ ಇಲ್ಲದೆ ಖಾತೆ ಪ್ರಾರಂಭಿಸಿರುವ ಬಗ್ಗೆ ತನಿಖೆಗೆ ಸಿದ್ಧ ಎಂದು ಈಶ್ವರಪ್ಪ ಹೇಳಿದರು.
ಅಕ್ರಮದ ಕುರಿತು ತನಿಖೆಗಾಗಿ ಸದನ ಸಮಿತಿ ಮಾಡುವಂತೆ ಬಿಜೆಪಿ ಸದಸ್ಯರಾದ ರವಿಕುಮಾರ್, ಆಯನೂರು ಮಂಜುನಾಥ್ ಆಗ್ರಹಿಸಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಇಲಾಖೆಯ ವಿವಿಧ ವಿಭಾಗಗಳಿಗೆ ಬಿಡುಗಡೆಯಾದ ಹಣ ಅಕ್ರಮವಾಗಿ ಠೇವಣಿಯಾದ ಕುರಿತು ತನಿಖೆಗೆ ಸದನ ಸಮಿತಿ ರಚನೆ ಮಾಡೋದಾಗಿ ಘೋಷಿಸಿದರು.