ಬೆಂಗಳೂರು: ಹೊಟ್ಟೆಪಾಡಿಗಾಗಿ ಬೇಡುತ್ತಿದ್ದ ಭಿಕ್ಷೆ ಇದೀಗ ದಂಧೆಯಾಗಿ ಮಾರ್ಪಟ್ಟಿದೆ. ಜನರ ಅನುಕಂಪವನ್ನೇ ಬಂಡವಾಳ ಮಾಡಿಕೊಂಡು ರಾಜಧಾನಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಮಕ್ಕಳು ಹಾಗೂ ಮಹಿಳೆಯರು ಸೇರಿ ಒಟ್ಟು 31 ಜನರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಮಹಿಳಾ ಹಾಗೂ ಮಕ್ಕಳ ಪಾಲನಾ ಮಂದಿರಕ್ಕೆ ಒಪ್ಪಿಸಿದ್ದಾರೆ.
ಬಸ್ಸು, ರೈಲು ನಿಲ್ದಾಣಗಳು, ಸಿಗ್ನಲ್ ಹಾಗೂ ಧಾರ್ಮಿಕ ಕೇಂದ್ರಗಳ ಮುಂದೆ ಮಗುವಿನೊಂದಿಗೆ ಭಿಕ್ಷೆ ಬೇಡುತ್ತಿದ್ದ ನಿರ್ಗತಿಕರ ಮೇಲೆ ಸಿಸಿಬಿ ಎಸಿಪಿ ರೀನಾ ಸುವರ್ಣ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, 10 ಮಂದಿ ಮಹಿಳೆಯರು ಹಾಗೂ 21 ಮಕ್ಕಳು ಸೇರಿ ಒಟ್ಟು 31 ಮಂದಿಯನ್ನು ವಶಕ್ಕೆ ಪಡೆದುಕೊಂಡಿದೆ.
ಜನರ ಅನುಕಂಪವೇ ಇವರಿಗೆ ಬಂಡವಾಳ: ಧಾರ್ಮಿಕ ಕೇಂದ್ರ ಅಥವಾ ರಸ್ತೆಬದಿಗಳಲ್ಲಿ ಮಹಿಳೆಯರು ಭಿಕ್ಷೆ ಬೇಡುವವರಿಗೆ ಹಣದ ಸಹಾಯ ಮಾಡಕೂಡದು ಎಂದು ಹಲವು ಬಾರಿ ಜಾಗೃತಿ ಮೂಡಿಸಿದರೂ ಜನರು ಮಾತ್ರ ಮಾನವೀಯತೆ ಮೆರೆದು ತಮ್ಮ ಕೈಲಾದ ಹಣಕಾಸಿನ ಸಹಾಯ ಮಾಡುತ್ತಿದ್ದಾರೆ. ಇದು ಭಿಕ್ಷಾಟನೆ ದಂಧೆ ಹೆಚ್ಚಳಕ್ಕೆ ಕಾರಣವಾಗಿದೆ. ಜನರ ಅನುಕಂಪ ಗಿಟ್ಟಿಸಿಕೊಂಡು ಯಾರದ್ದೋ ಮಕ್ಕಳನ್ನು ತನ್ನ ಸೆರಗಿಗೆ ಹಾಕಿಕೊಂಡು ಭಿಕ್ಷೆ ಬೇಡುತ್ತಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಿಂದ ಬೆಂಗಳೂರಿಗೆ ದಾಂಗುಡಿ ಇಟ್ಟು ದಂಧೆಯಲ್ಲಿ ಸಕ್ರಿಯರಾಗಿರುವುದು ಕಂಡುಬಂದಿದೆ.
ವಶಕ್ಕೆ ಪಡೆದುಕೊಂಡ 10 ಮಹಿಳೆಯರ ಪ್ರಾಥಮಿಕ ವಿಚಾರಣೆ ವೇಳೆ ಮಗುವಿನೊಂದಿಗೆ ಭಿಕ್ಷೆ ಬೇಡುವ ಮಹಿಳೆಯರು ನಿಜವಾದ ತಾಯಿಯಲ್ಲ ಎಂಬುದು ಗೊತ್ತಾಗಿದೆ. ಯಾರದ್ದೋ ಮಗುವನ್ನು ಬಾಡಿಗೆ ಅಥವಾ ಕಳ್ಳಸಾಗಣೆ ಮೂಲಕ ಕರೆತಂದು ಅನಿಷ್ಟ ಪದ್ಧತಿಗೆ ನೂಕಿರುವುದು ವಿಚಾರಣೆ ವೇಳೆ ಬಯಲಾಗಿದೆ. ಭಿಕ್ಷಾಟನೆ ವೇಳೆ ಮಗು ಅಳದಿರಲು ಮುಂಜಾನೆ ಆಲ್ಕೋಹಾಲ್ ಕುಡಿಸುತ್ತಿದ್ದರು. ಮದ್ಯ ಕುಡಿಸಿ ಮಗು ದಿನವಿಡೀ ನಿದ್ರಾವಸ್ಥೆಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಯಲ್ಲಿರುವ ಮಕ್ಕಳ ವಿಚಾರಣೆ ನಡೆಸಲಾಗುತ್ತಿದೆ. ತನಿಖಾ ವರದಿ ಕೈಗೆ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ನ್ಯಾಯಾಲಯದ ಅನುಮತಿ ಪಡೆದು ನಕಲಿ ತಾಯಂದಿರು ಹಾಗೂ ಮಕ್ಕಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಭಿಕ್ಷಾಟನೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರುವುದಾಗಿ ಸರ್ಕಾರ ಭರವಸೆ ನೀಡಿದೆ. ಆದರೆ ಇನ್ನೂ ಕಾರ್ಯಾರೂಪಕ್ಕೆ ಬಂದಿಲ್ಲ. ಇದುವರೆಗೆ ರಾಜ್ಯದಲ್ಲಿ ಭಿಕ್ಷಾಟನೆ ಮಾಫಿಯಾದಲ್ಲಿ ತೊಡಗಿದ್ದ 1,220 ಮಕ್ಕಳನ್ನು ರಕ್ಷಿಸಲಾಗಿದೆ. ಬೆಂಗಳೂರು ನಗರದಲ್ಲಿ ಸುಮಾರು 6 ಸಾವಿರ ಭಿಕ್ಷುಕರಿದ್ದಾರೆ ಎಂಬ ಮಾಹಿತಿಯಿದೆ.
ಬಿಹಾರ, ಪಶ್ಚಿಮ ಬಂಗಾಳ, ಅಸ್ಸೋಂ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಗ್ರಾಮೀಣ ಭಾಗದ ಬಡ ಕುಟುಂಬಸ್ಥರನ್ನು ಸಂಪರ್ಕಿಸುವ ಏಜೆಂಟ್ಗಳು ಕೆಲಸ ಕೊಡಿಸುವುದಾಗಿ ನಂಬಿಸಿ ಮನವೊಲಿಸಿ ನಗರಕ್ಕೆ ಕರೆತರುತ್ತಾರೆ. ಬಡಪಾಲಕರಿಗೆ ತಿಂಗಳಿಗೆ ಇಂತಿಷ್ಟು ಹಣ ನೀಡಿ ಅವರ ಮಕ್ಕಳನ್ನು ಪಡೆಯುತ್ತಾರೆ. ಏಜೆಂಟ್ಗಳು ಮಹಿಳೆಯರು ಹಾಗೂ ಹಸುಗೂಸುಗಳನ್ನು ದಂಧೆಕೋರರಿಗೆ ಒಪ್ಪಿಸಿ ಕಮಿಷನ್ ಪಡೆದು ನುಣುಚಿಕೊಳ್ಳುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಮಕ್ಕಳನ್ನು ಮುಂದೆ ಬಿಟ್ಟು ಭಿಕ್ಷಾಟನೆ ಮಾಡುವವರು ಸೀಜ್.. ಭಿಕ್ಷೆ ಬೇಡಿದರೆ ಹುಷಾರ್