ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಪಾಠ ಕೈ ಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎಸ್.ಎಫ್.ಐ ಖಂಡಿಸಿದೆ. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತು 10ನೇ ತರಗತಿ (ಕನ್ನಡ ವಿಷಯ 5ನೇ ಘಟಕ) ಯಲ್ಲಿ ಇದ್ದ ಪಾಠವನ್ನು ಕೈಬಿಟ್ಟು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೆ.ಬಿ. ಹೆಡ್ಗೆವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಈ ಮೂಲಕ ದೇಶಪ್ರೇಮಿ ಭಗತ್ ಸಿಂಗ್ಗೆ ರಾಜ್ಯ ಸರ್ಕಾರ ಅವಮಾನ ಮಾಡಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ರಾಜ್ಯ ಸಮಿತಿ ಆರೋಪಿಸಿದೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಹೆಡ್ಗೆವಾರ್ ಅವರ ಭಾಷಣದ ಪಠ್ಯವನ್ನು ಪಠ್ಯಕ್ರಮದಲ್ಲಿ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿನಂತೆ 2022-23ರ ಶೈಕ್ಷಣಿಕ ವರ್ಷದಿಂದ ಭಗತ್ ಸಿಂಗ್ ಪಾಠವನ್ನು ಕೈಬಿಟ್ಟು 10ನೇ ತರಗತಿ ಪಠ್ಯಪುಸ್ತಕದಲ್ಲಿನ 5ನೇ ಪಾಠವಾಗಿ “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಎಂದು ಹೆಡ್ಗೆವಾರ್ ಅವರ ಪಾಠವನ್ನು ಸೇರಿಸಲಾಗಿದೆ. ರೋಹಿತ್ ಚಕ್ರತೀರ್ಥ ಅವರಿಗೆ ಹೆಡ್ಗೆವಾರ್ ಆದರ್ಶ ಆಗಿರಬಹುದು. ಆದರೆ ಈ ದೇಶಕ್ಕೆ ಭಗತ್ ಸಿಂಗ್ ಆದರ್ಶ ಎಂಬುದನ್ನು ಮನಗಾಣಬೇಕು ಎಂದಿದ್ದಾರೆ.
ಪಿ ಲಂಕೇಶ್, ಸಾರಾ ಅಬೂಬಕರ್ ಪಠ್ಯವೂ ಕಡಿತ: ಜೊತೆಗೆ ಪತ್ರಕರ್ತ ದಿ. ಪಿ. ಲಂಕೇಶ್ ಅವರ ಮೃಗ ಮತ್ತು ಸುಂದರಿ, ಸಾರಾ ಅಬೂಬಕರ್ ರವರ "ಯುದ್ಧ", ಎ.ಎನ್. ಮೂರ್ತಿ ರಾವ್ ಅವರ “ವ್ಯಾಘ್ರ ಗೀತೆ” ಮತ್ತು ಶಿವಕೋಟ್ಯಾಚಾರ್ಯರ "ಸುಕುಮಾರ ಸ್ವಾಮಿ ಕಥೆ'ಯನ್ನು ಕೈಬಿಡಲಾಗಿದೆ. ಇದರ ಬದಲಿಗೆ ಬರಹಗಾರ ಶಿವಾನಂದ ಕಳವೆ ಅವರ “ಸ್ವದೇಶಿ ಸೂತ್ರದ ಸರಳ ಹಬ್ಬ” ಮತ್ತು ಎಂ. ಗೋವಿಂದ ಪೈ ಅವರ “ನಾನು ಪ್ರಾಸ ಬಿಟ್ಟ ಕಥೆ" ಸೇರಿಸಲಾಗಿದೆ.
ಈ ಹಿಂದೆ ಇದ್ದ ಪಾಠಗಳನ್ನು ಪಠ್ಯದಲ್ಲಿ ಯಥಾವತ್ತಾಗಿ ಮುಂದುವರೆಸಬೇಕು, ಇಲ್ಲವಾದರೆ ರಾಜ್ಯಾದ್ಯಂತ ಸಾರ್ವಜನಿಕರು, ಶಿಕ್ಷಣ ಪ್ರೇಮಿಗಳು, ಸಾಹಿತಿಗಳು, ಶಿಕ್ಷಣ ತಜ್ಞರನ್ನು ಸೇರಿಸಿ ತೀವ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಈ ಮೂಲಕ ರಾಜ್ಯ ಸರ್ಕಾರಕ್ಕೆ ಎಸ್ಎಫ್ಐ ಎಚ್ಚರಿಕೆ ರವಾನಿಸಿದೆ.
ಆದ್ರೆ ಈ ಕುರಿತು ತುಮಕೂರಿನಲ್ಲಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ನಾಗೇಶ್ ಅವರು, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಪಠ್ಯ ಪುಸ್ತಕ ಪರಿಶೀಲನಾ ಸಮಿತಿಗೆ ಸರ್ಕಾರ ಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟಿದೆ. ಹೆಡ್ಗೆವಾರ್ ಅವರ ಭಾಷಣದ ಒಂದು ತುಣಕನ್ನು ಮಾತ್ರ ಸೇರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಮಳಲಿ ಮಸೀದಿ ನವೀಕರಣದ ವೇಳೆ ದೇಗುಲ ಶೈಲಿ ಪತ್ತೆ; ಅಷ್ಟಮಂಗಲ ಪ್ರಶ್ನೆ ನಡೆಸಲು ವಿಶ್ವ ಹಿಂದೂ ಪರಿಷತ್ ನಿರ್ಧಾರ